ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ನಡೆದ ಬೃಹತ್ ಸಾಲ ಹಗರಣವೊಂದು ಭಾರೀ ಸಂಚಲನ ಮೂಡಿಸಿದ್ದು, ಮೈಕ್ರೋಫೈನಾನ್ಸ್ ಸಾಲ ಮಂಜೂರಾತಿ ನೆಪದಲ್ಲಿ ಮಹಿಳೆಯರು ಸೇರಿದಂತೆ ಸುಮಾರು 7,700 ಕ್ಕೂ ಹೆಚ್ಚು ವ್ಯಕ್ತಿಗಳು ಒಟ್ಟು 19.35 ಕೋಟಿ ರೂ.ಗಳಷ್ಟು ಹಣ ಕಳೆದುಕೊಂಡಿದ್ದಾರೆ.
ಯಮನಾಪುರ, ಹಾಲ್ಭಾವಿ, ಕಂಗ್ರಾಲಿ ಕೆಎಚ್ ಮತ್ತು ಕಂಗ್ರಾಲಿ ಬಿಕೆ ಸೇರಿದಂತೆ ವಿವಿಧ ಪ್ರದೇಶಗಳಿಂದ ಈ ಹಗರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಅಶ್ವಿನಿ ಹೊಳೆಪ್ಪ ದಡ್ಡಿ, ಹೊಳೆಪ್ಪ ಫಕೀರಪ್ಪ ದಡ್ಡಿ, ಶೇವಂತಿ ಹೊಳೆಪ್ಪ ದಡ್ಡಿ ಮತ್ತು ಪ್ರಿಯಾಂಕಾ ಹೊಳೆಪ್ಪ ದಡ್ಡಿ ಎಂದು ಗುರುತಿಸಲಾಗಿದೆ, ಇವರೆಲ್ಲರೂ ಬೆಳಗಾವಿ ತಾಲ್ಲೂಕಿನ ಯಮನಾಪುರ ನಿವಾಸಿಗಳು.
ಬೆಳಗಾವಿ ತಾಲ್ಲೂಕಿನಲ್ಲಿ ಆರಂಭವಾದ ಈ ಹಗರಣವು ಜಿಲ್ಲೆಯಾದ್ಯಂತ ಮತ್ತು ಕರ್ನಾಟಕದ ಇತರ ಭಾಗಗಳಿಗೆ ಹರಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೋನಟ್ಟಿ ಗ್ರಾಮದ ನಿವಾಸಿ ಶೇಖಾ ಕಣ್ಣಪ್ಪ ಹಂಚಿನ್ಮನಿ ಎಂಬವರು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ನಂತರ ವಂಚನೆ ಪ್ರಕರಮ ಬೆಳಕಿಗೆ ಬಂದಿದೆ.
ಯಮನಾಪುರದ ನಾಲ್ವರು ವ್ಯಕ್ತಿಗಳು ಸಬ್ಸಿಡಿ ಸಾಲಗಳನ್ನು ನೀಡುವುದಾಗಿ ಭರವಸೆ ನೀಡುವ ಮೂಲಕ ಈ ಯೋಜನೆಯನ್ನು ರೂಪಿಸಿದ್ದರು. ಸಾಲ ನೀಡಿದ ನಂತರ, ಶೇ. 60 ರಷ್ಟು ಹಣವನ್ನು ತೆಗೆದುಕೊಳ್ಳಲಾಗುವುದು ಮತ್ತು ಉಳಿದ ಶೇ. 40% ರಷ್ಟು ಹಣವನ್ನು ಸಾಲಗಾರರಿಗೆ ಸಬ್ಸಿಡಿಯಾಗಿ ನೀಡಲಾಗುವುದು ಎಂದು ಹೇಳಿಕೊಂಡು ಅವರು ಜನರನ್ನು ಆಕರ್ಷಿಸಿದರು.