ಬಳ್ಳಾರಿ. ಫೇ. 06.: ತಾಯಿ ಮಮತೆಯ, ವಾತ್ಸಲ್ಯ ಹೃದಯದ ಮಾತೃಶ್ರೀ ಡಾ. ಹೇಮಾವತಿ ವಿ. ಹೆಗ್ಗಡೆಯವರ ನೇತೃತ್ವದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ, ಮಾಶಾಸನ ಪಡೆಯುತ್ತಿರುವ ರತ್ನಮ್ಮನವರಿಗೆ ಜಿಲ್ಲಾ ನಿರ್ದೇಶಕರಾದ ಮಾನ್ಯ ಶ್ರೀ ರೋಹಿತಾಕ್ಷ ಅವರು ‘ವಾತ್ಸಲ್ಯ ಕಿಟ್’ ವಿತರಣೆ ಮಾಡಿ ಮಾತನಾಡಿದರು.
ಅವರು ಇಂದು ಬಳ್ಳಾರಿ ನಗರದ ಗಾಂಧಿನಗರ ವಲಯದ ದೇವಿನಗರ ಕಾರ್ಯಕ್ಷೇತ್ರದ ನಿವಾಸಿಗಳಾದ ರತ್ನಮ್ಮನವರು, ಯೋಜನೆಯಿಂದ ಕಳೆದ 3 ವರ್ಷಗಳಿಂದ ಪ್ರತಿ ತಿಂಗಳು 1000 ರೂ. ಮಾಶಾಸನ ಪಡೆಯುತ್ತಿದ್ದಾರೆ. ಇವರಿಗೆ ಇಂದು ಅಧಿಕಾರಿಗಳು ಕಿಟ್ ಹಸ್ತಾಂತರಿಸಿ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರಾಜ್ಯಾದ್ಯಂತ ಸಾವಿರಾರು ದುರ್ಬಲ ವರ್ಗದ, ಅಶಕ್ತ, ನಿರ್ಗತಿಕ ಮತ್ತು ಕಡು ಬಡವರ ಕುಟುಂಬಗಳಿಗೆ ಪ್ರತಿ ತಿಂಗಳು 1000 ರೂ. ಮಾಶಾಸನವನ್ನು ನೀಡಲಾಗುತ್ತಿದೆ. ಯೋಜನೆಯ ಕಾರ್ಯಕರ್ತರು ಗ್ರಾಮಗಳಲ್ಲಿ ಸರ್ವೆ ನಡೆಸಿ, ದುಡಿಯಲು ಅಶಕ್ತರಾದವರು, ಅನಾರೋಗ್ಯದಿಂದ ಬಳಲುತ್ತಿರುವವರು ಹಾಗೂ ಸಂಬಂಧಿಕರಿಲ್ಲದೆ ಅನಾಥರಾಗಿರುವ ನಿರ್ಗತಿಕರನ್ನು ಗುರುತಿಸಿ, ಅವರ ಜೀವನೋಪಾಯಕ್ಕಾಗಿ ಪ್ರತಿ ತಿಂಗಳು 1000 ರೂ. ಹಣವನ್ನು ಅವರ ಮನೆ ಬಾಗಿಲಿಗೆ ತಲುಪಿಸುತ್ತಿದ್ದಾರೆ.
ಪ್ರಸ್ತುತ ನಮ್ಮ ಬಳ್ಳಾರಿ ಜಿಲ್ಲೆಯಲ್ಲಿ 188 ಮಾಶಾಸನ ಪಡೆಯುತ್ತಿರುವ ಸದಸ್ಯರಿಗೆ ಒಟ್ಟು 1,95,000 ರೂ. ಹಣವನ್ನು ಪ್ರತಿ ತಿಂಗಳು ಫಲಾನುಭವಿಗಳಿಗೆ ನೀಡುವಂತೆ ಧರ್ಮಸ್ಥಳದ ಧರ್ಮಾಧಿಕಾರಿಗಳು ಹಾಗೂ ಮಾತೃಶ್ರೀ ಹೇಮಾವತಿ ಹೆಗ್ಗಡೆಯವರು ಮಂಜೂರಾತಿ ನೀಡಿರುತ್ತಾರೆ. ಅದರಂತೆ ಬಳ್ಳಾರಿ-1 ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ 34 ಜನ ಸದಸ್ಯರಿಗೆ 34,000 ರೂ. ಮೊತ್ತದ ಮಾಶಾಸನವನ್ನು ಪ್ರತಿ ತಿಂಗಳು ವಿತರಣೆ ಮಾಡಲಾಗುತ್ತಿದೆ.
“ಅಷ್ಟೇ ಅಲ್ಲದೆ, ಮಾಶಾಸನ ಪಡೆಯುವ ಸದಸ್ಯರಿಗೆ ಯೋಜನೆಯಿಂದ ಚಾಪೆ, ದಿಂಬು, ಹೊದಿಕೆ, ಚಮಚ, ಸೀರೆ, ಬಟ್ಟೆ, ಸೋಪ್, ಪ್ಲೇಟ್, ಚಂಬು, ಲೋಟ, ಕೊಡಪಾನ, ಬೆಡ್ ಶೀಟ್, ಟವಲ್ ಮತ್ತು ಪೌಷ್ಟಿಕ ಆಹಾರವನ್ನೊಳಗೊಂಡ ವಾತ್ಸಲ್ಯ ಕಿಟ್ ನೀಡಲಾಗುತ್ತಿದೆ. ಹೀಗೆ ಒಂದು ಕುಟುಂಬದ ನಿರ್ವಹಣೆಗೆ ಅತಿ ಅವಶ್ಯಕವಾಗಿ ಬೇಕಾಗಿರುವ ವಸ್ತುಗಳನ್ನು ಹಾಗೂ ಮನೆ ಇಲ್ಲದ ಫಲಾನುಭವಿಗಳಿಗೆ ‘ವಾತ್ಸಲ್ಯ ಮನೆ’ ನಿರ್ಮಾಣವನ್ನೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಾಡಲಾಗುತ್ತಿದೆ,” ಎಂದು ಬಳ್ಳಾರಿ-1 ತಾಲ್ಲೂಕಿನ ಯೋಜನಾಧಿಕಾರಿಗಳಾದ ಶ್ರೀ ಬಸವರಾಜ ಕೆ. ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಗಾಂಧಿನಗರ ವಲಯದ ಮೇಲ್ವಿಚಾರಕರಾದ ಮಹಮ್ಮದ್ ರಫೀಕ್, ಜ್ಞಾನವಿಕಾಸ ಸಮನ್ವಯಾಧಿಕಾರಿ ಆಶಾ, ಒಕ್ಕೂಟದ ಪದಾಧಿಕಾರಿಗಳು, ಸ್ವಸಹಾಯ ಸಂಘದ ಸದಸ್ಯರು ಹಾಗೂ ಸೇವಾಪ್ರತಿನಿಧಿ ಭಾಗ್ಯಲಕ್ಷ್ಮೀ ಉಪಸ್ಥಿತರಿದ್ದರು.


