ಬೆಂಗಳೂರು, ಜುಲೈ 23: ಈಗ ಎಲ್ಲೇ ವ್ಯಾಪಾರ ಮಾಡಿದರೂ ಗ್ರಾಹಕರು ಪಾವತಿ ಮಾಡುವುದು ಯುಪಿಐ ಮೂಲಕವೇ. ಒಂದು ರೂಪಾಯಿ ಬೆಂಕಿ ಪೊಟ್ಟಣದಿಂದ ಹಿಡಿದು ಲಕ್ಷಾಂತರ ರೂಪಾಯಿ ಪಾವತಿ ಕೂಡ ಇದೇ ಮಾದರಿಯಲ್ಲಿ ಆಗುತ್ತದೆ. ಆದರೆ ಕಳೆದ ಕೆಲವು ದಿನಗಳಿಂದ ಯುಪಿಐ ಮೂಲಕ ಹಣ ಸ್ವೀಕರಿಸುತ್ತಿರುವ ವರ್ತಕರಿಗೆ ತೆರಿಗೆ ನೋಟಿಸ್ ಜಾರಿ ಮಾಡಲಾಗುತ್ತಿದೆ. ಲಕ್ಷ ಲಕ್ಷ ತೆರಿಗೆ ನೋಟಿಸ್ ನೋಡಿ ವ್ಯಾಪಾರಿಗಳು ದಿಕ್ಕೆಟ್ಟು ಹೋಗಿದ್ದಾರೆ. ಇದರ ವಿರುದ್ಧ ಸಿಡಿದೆದ್ದಿರುವ ಅಂಗಡಿ ಮಾಲೀಕರು, ಇಂದಿನಿಂದ ಹೋರಾಟಕ್ಕೆ ಸಜ್ಜಾಗಿದ್ದಾರೆ.
ಇಂದಿನಿಂದ ಹೋರಾಟಕ್ಕೆ ಸಜ್ಜಾದ ಸಣ್ಣ ಅಂಗಡಿ ವ್ಯಾಪಾರಿಗಳು: ಜು.25 ರಂದು ಬೃಹತ್ ಪ್ರತಿಭಟನೆ

ವಾಣಿಜ್ಯ ತೆರಿಗೆ ಇಲಾಖೆಯ ನೋಟಿಸ್ ವಿರುದ್ಧ ವರ್ತಕರು ಸಮರ ಸಾರಿದ್ದಾರೆ. ಇಂದಿನಿಂದ ಹಾಲು, ಹಾಲಿನ ಉತ್ಪನ್ನ ಮಾರಾಟ ಬಂದ್ ಮಾಡಲಾಗುತ್ತದೆ. ಹಾಲು ಬಳಸದೆ ಟೀ-ಕಾಫಿ ಮಾಡುವ ಮೂಲಕ ಆಕ್ರೋಶ ಹೊರಹಾಕಲಿದ್ದಾರೆ. ಪ್ರತಿಭಟನಾರ್ಥವಾಗಿ ಕಪ್ಪು ಪಟ್ಟಿ ಧರಿಸಿ ಇತರೆ ವಸ್ತುಗಳ ಮಾರಾಟ ಮಾಡಲಾಗುತ್ತದೆ. ಜುಲೈ 25ರಂದು ಅಂಗಡಿ ಬಂದ್ ಮಾಡಿ, ಕುಟುಂಬ ಸಮೇತರಾಗಿ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಹೋರಾಟ ನಡೆಸಲಿದ್ದಾರೆ.