ಮಹಾತ್ಮರ ಹೋರಾಟವು ಇಂದಿನ ಪೀಳಿಗೆಗೆ ಸ್ಫೂರ್ತಿ ಆಗಿದೆ : ಸರೋಜಿನಿ

MK HasiruKranti
ಮಹಾತ್ಮರ ಹೋರಾಟವು ಇಂದಿನ ಪೀಳಿಗೆಗೆ ಸ್ಫೂರ್ತಿ ಆಗಿದೆ : ಸರೋಜಿನಿ
WhatsApp Group Join Now
Telegram Group Join Now

ಇಂಡಿ: ಇಂಚಗೇರಿ ಮಠವು ಆಧ್ಯಾತ್ಮಿಕತೆಯ ಜೊತೆಗೆ ಸ್ವಾತಂತ್ರ್ಯ ಸಂಗ್ರಾಮ, ಗೋರಕ್ಷಾ ಹೋರಾಟ ಮತ್ತು ಸರ್ವೋದಯದ ಪ್ರಮುಖ ಕೇಂದ್ರವಾಗಿದ್ದು, ಇಲ್ಲಿನ ಅನೇಕ ಮಹಾತ್ಮರ ಹೋರಾಟವು ಇಂದಿನ ಪೀಳಿಗೆಗೆ ಸ್ಫೂರ್ತಿ ಆಗಿದೆ ಎಂದು ಶಿಕ್ಷಕಿ ಸರೋಜಿನಿ ಮಾವಿನಮರ ಹೇಳಿದರು.
ಶನಿವಾರದಂದು ಭೀಮಾಂತರಂಗ ಆನ್ ಲೈನ್ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಜಗಲಿ ಕೇಂದ್ರದ ವತಿಯಿಂದ ಹಮ್ಮಿಕೊಂಡ ’ಇಂಚಗೇರಿ ಮಾಧವಾನಂದರು’ ಕುರಿತ ಆನ್ ಲೈನ್ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಅವರು ಮಾತನಾಡಿದರು.
ಇಂಚಗೇರಿ ಮಠದ ಮಾಧವಾನಂದರು ಓರ್ವ ಮಠಾಧೀಶರಾಗಿ ಬ್ರಿಟಿಷರ ವಿರುದ್ಧ ಭಕ್ತರೊಂದಿಗೆ ಸಶಸ್ತ್ರವಾಗಿ ಹೋರಾಡಿದ ಕ್ರಾಂತಿಕಾರಿ ಸಂತ. ಕಳೆದ ೫೦ ವರ್ಷಗಳಿಂದ ಈ ಮಠದಲ್ಲಿ ಅಂತರಜಾತಿ ಮತ್ತು ಅಂತರಧರ್ಮದ ವಿವಾಹಗಳನ್ನು ಆಯೋಜಿಸುತ್ತಿದ್ದು, ಈ ವಿಶಿಷ್ಟ ಸಂಪ್ರದಾಯಕ್ಕೆ ಅಡಿಪಾಯ ಹಾಕಿದ್ದೇ ದಾರ್ಶನಿಕ ಮಾಧವಾನಂದರು ಎಂದು ಹೇಳಿದರು.
ಶಿಕ್ಷಕ ಸಾಹಿತಿ ಸಂತೋಷ ಬಂಡೆ ಸಮಾರೋಪ ಭಾಷಣ ಮಾಡಿ ಮಾಧವಾನಂದರು ತಮ್ಮ ಕ್ರಾಂತಿಕಾರಿ ಚಿಂತನೆಯ ಜತೆ ಮಠವನ್ನು ಸಮಾಜದ ಎಲ್ಲ ವರ್ಗಕ್ಕೆ ತಲುಪಿಸಿ, ಸಾಮಾಜಿಕ ಸುಧಾರಣೆ ತಂದರು. ಭಾರತ ಸ್ವಾತಂತ್ರ್ಯ ಹಾಗೂ ಕರ್ನಾಟಕ ಏಕೀಕರಣಕ್ಕೆ ದುಡಿದ ಇಂಚಗೇರಿ ಮಠ ಇಂದಿಗೂ ತನ್ನ ಹಿರಿಮೆ ಉಳಿಸಿಕೊಂಡಿದ್ದು, ತಮ್ಮ ಮಠದ ಸಾವಿರಾರು ಭಕ್ತರನ್ನು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿಸಿದ ರಾಷ್ಟ್ರದ ಏಕೈಕ ಸಂತ ಮಾಧವಾನಂದರು ಎಂದು ಹೇಳಿದರು.
ಸರ್ವ-ಧರ್ಮಿಯ ಭಕ್ತರನ್ನು ಹೊಂದಿದ ಇಂಚಗೇರಿ ಮಠವು ಆಧ್ಯಾತ್ಮದ ನೆಲೆಯಾಗಿದೆ. ಮಾಧವಾನಂದರ ಸರ್ವಧರ್ಮ ಸಮನ್ವಯ, ರಾಷ್ಟ್ರೀಯ ಭಾವೈಕ್ಯತೆ, ಕೋಮುಸೌಹಾರ್ಧತೆ, ಸರ್ವೋದಯ, ವಿಶ್ವಶಾಂತಿಯಂತಹ ವಿಚಾರಗಳನ್ನು ಊರೂರಿಗೆ ತಲುಪಿಸಿ, ಸಮನ್ವಯತೆಯ ಜಗತ್ತನ್ನು ನಿರ್ಮಿಸುವ ಗುರಿ ಹೊಂದಿದ ಈ ಮಠವು ಜಾತ್ಯಾತೀತವಾಗಿದೆ ಎಂದು ಹೇಳಿದರು.
ಚಿದಂಬರ ಬಂಡಗರ, ಡಾ ರಾಘವೇಂದ್ರ ಕುಲಕರ್ಣಿ, ಗೀತಯೋಗಿ, ಬಸವರಾಜ ಕಿರಣಗಿ, ಸಿ ಆರ್ ಮ್ಯಾಕೇರಿ, ಸದಾನಂದ ಈರಣಕೇರಿ, ಭವಾನಿ ಗಲಗಲಿ, ಲಕ್ಷ್ಮಣ ಝಳಕಿ, ರಾಚು ಕೊಪ್ಪ, ನಿಂಗಣ್ಣ ಬಿರಾದಾರ, ಡಾ ರಾಜಶ್ರೀ ಮಾರನೂರ, ರವಿ ಅರಳಿ, ಆರ್ ವ್ಹಿ ಪಾಟೀಲ, ಸಂಗನಗೌಡ ಹಚಡದ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಸಿ ಆರ್ ಪಿ ಶ್ರೀಧರ ಹಿಪ್ಪರಗಿ ನಿರೂಪಿಸಿದರು. ಶಿಕ್ಷಕ ವೈ ಜಿ ಬಿರಾದಾರ ಸ್ವಾಗತಿಸಿ, ಪರಿಚಯಿಸಿದರು.

ಪೋಟೊ ಕ್ಯಾಪ್ಸನ್ ೨೯ ಇಂಡಿ ೦೧: ನಗರದಲ್ಲಿ ಭೀಮಾಂತರಂಗ ಆನ್ ಲೈನ್ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಜಗಲಿ ಕೇಂದ್ರದ ವತಿಯಿಂದ ಹಮ್ಮಿಕೊಂಡ ’ಇಂಚಗೇರಿ ಮಾಧವಾನಂದರು’ ಕುರಿತ ಆನ್ ಲೈನ್ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಶಿಕ್ಷಕಿ ಸರೋಜಿನಿ ಮಾವಿನಮರ ಮಾತನಾಡಿದರು.

 

 

WhatsApp Group Join Now
Telegram Group Join Now
Share This Article