ಬೈಲಹೊಂಗಲ: ನಮಗೆ ಜನ್ಮ ಕೊಟ್ಟ ತಾಯಿ, ಹೊತ್ತ ನೆಲವನ್ನು ನಿರ್ಲಕ್ಷಿಸದೇ ಸದಾ ಅವರ ಸ್ಮರಣೆ ಮಾಡಿ ಪೂಜಿಸಬೇಕೆಂದು ಹೊಸೂರ ಗುರು ಮಡಿವಾಳೇಶ್ವರ ಮಠದ ಪೂಜ್ಯ ಗಂಗಾಧರ ಸ್ವಾಮೀಜಿ ಹೇಳಿದರು.ಅವರು ಪಟ್ಟಣದ ಮುರಗೋಡ ರಸ್ತೆಯ ಗಣಾಚಾರಿ ಕಲ್ಯಾಣ ಮಂಟಪದಲ್ಲಿ ಬುಡರಕಟ್ಟಿಯ ನಿವೃತ ಯೋಧ ಮಹಾಂತೇಶ ಮಾಟೋಳ್ಳಿ ಅವರ ಗೆಳೆಯರ ಬಳಗ, ತಾಲೂಕಾ ಮಾಜಿ ಸೈನಿಕರ ಸಮನ್ವಯ ಸಮೀತಿ ಹಮ್ಮಿಕೊಂಡ ಸ್ವಾಗತ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿ ಸಾನಿಧ್ಯ ವಹಿಸಿ ಮಾತನಾಡಿ, ಯುವಕರು ರಾಷ್ಟ್ರದ ಶಕ್ತಿಯಾಗಿದ್ದು ಸೈನ್ಯ ಸೇರಿ ಸೇವೆ ಮಾಡುವ ಅವಕಾಶ ಪಡೆದುಕೊಳ್ಳಬೇಕು ಎಂದರು.
ನಿವೃತ ಯೋಧ ಮಹಾಂತೇಶ ಮಾಟೊಳ್ಳಿ ಸತ್ಕಾರ ಸ್ವೀಕರಿಸಿ ಮಾತನಾಡಿ, ಸುಮಾರು ೨೪ ವರ್ಷಗಳ ಸೈನಿಕ ಸೇವೆ ಸಂತೃಪಿ ತಂದಿದೆ. ಸಮಾಜ ನಮಗೇನು ಮಾಡಿದೆ ಎನ್ನುವದು ಮೂರ್ಖತನವಾಗಿದ್ದು ಸಮಾಜದ ಅಭಿವೃದ್ದಿಗಾಗಿ ನಮ್ಮ ಶ್ರಮ ವಿನಿಯೋಗಿಸದಾಗ ಮಾತ್ರ ಜೀವನ ಸಾರ್ಥಕ ಆಗಲಿದೆ. ದೇಶ ಸೇವೆಗೆ ನನ್ನ ಅವಕಾಶಕ್ಕಿಂತ ನನಗೆ ಜನ್ಮ ನೀಡಿದ ಜನನಿಯನ್ನು ಯಾವತ್ತೂ ಮರೆಯಲ್ಲ. ಯಾಕೆಂದರೆ ಸೈನಿಕನಾಗಲು ಪ್ರೇರೇಪಣೆ ಮಾಡಿದವರೇ ಅವಳಾಗಿದ್ದಾಳೆ ಎಂದರು.
ಶಾಖಾ ಮೂರುಸಾವಿರ ಮಠದ ಪ್ರಭು ನೀಲಕಂಠ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿದರು. ಮಾಜಿ ಸೈನಿಕರ ಸಮನ್ವಯ ಸಮೀತಿಯ ತಾಲೂಕಾಧ್ಯಕ್ಷ ಬಿ.ಬಿ.ಬೋಗೂರ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಶಿವನವ್ವ ಮಡಿವಾಳಪ್ಪ ಮಾಟೊಳ್ಳಿ, ಬೆಳಗಾವಿಯ ಮುನೀಶ್ವರ ಮೋಟರ್ಸ ವ್ಯವಸ್ಥಾಪಕ ಲಿಂಗರಾಜ ಜಗಜಂಪಿ, ಕಿತ್ತೂರು ಕರ್ನಾಟಕ ಸೇನೆ ಜಿಲ್ಲಾಧ್ಯಕ್ಷ ಶಿವಾನಂದ ಕೋಲಕಾರ ವೇದಿಕೆ ಮೇಲಿದ್ದರು.
ಮಾಜಿ ಸೈನಿಕರಾದ ಬಸನಗೌಡಾ ಪಾಟೀಲ, ಶಿವರುದ್ರಪ್ಪ ಮಂಗಳಗಟ್ಟಿ, ಶಂಕ್ರಯ್ಯ ಪೂಜೇರ, ರಾಜಕುಮಾರ ಸವಟಗಿ, ಬಸವರಾಜ ಹೊಂಡಪ್ಪನವರ, ದೇಮಪ್ಪ ಶಿವಬಸನ್ನವರ, ಗಂಗಪ್ಪ ಬಬಲಿ, ಈರಣ್ಣ ತಡಕೋಡ, ಶಿವಪ್ಪ ಗರಗದ, ವೆಂಕಟೇಶ ಬಂಡಿವಡ್ಡರ, ಸುಭಾಶ ಅಂಬೋಜಿ, ಬಸವರಾಜ ಹಡಪದ, ಗೂಳಪ್ಪ ಗೂಳಣ್ಣವರ, ಸೋಮಯ್ಯ ಪೂಜೇರ, ಬಸವರಾಜ ಮಡಿವಾಳರ ಮುಂತಾದವರು ಉಪಸ್ಥಿತರಿದ್ದರು.
ಉಪನ್ಯಾಸಕ ರಾಮಚಂದ್ರ ಕಾಕಡೆ ಸ್ವಾಗತಿಸಿ, ನಿರೂಪಿಸಿದರು. ಇದಕ್ಕೂ ಮೊದಲು ವೀರರಾಣಿ ಕಿತ್ತೂರು ಚನ್ನಮ್ಮ ವೃತ್ತದಿಂದ ಕಾರ್ಯಕ್ರಮದ ಸ್ಥಳದವರೆಗೆ ಮಾಜಿ ಸೈನಿಕರಿಂದ ಬೈಕ್ ರ್ಯಾಲಿ ನಡೆಯಿತು. ಚನ್ಮಮ್ಮನ ಮೂರ್ತಿಗೆ ಮಾಲೆ ಅರ್ಪಿಸಿ ನಂತರ ಸಮಾಧಿಗೆ ನಿವೃತ ಯೋಧರ ಕುಟುಂಬ ನಮನ ಸಲ್ಲಿಸಿದರು. ನಿವೃತ ಯೋಧ ಮಹಾಂತೇಶ ಮಾಟೋಳ್ಳಿ ಅಭಿಮಾನಿಗಳ ಬಳಗ, ಮಾಜಿ ಸೈನಿಕರ ಸಮನ್ವಯ ಸಮೀತಿ ವತಿಯಿಂದ ಮಾಟೋಳ್ಳಿ ಕುಟುಂಬದವರನ್ನು ಸನ್ಮಾನಿಸಲಾಯಿತು. ಹಲವಾರು ಮಾಜಿ ಸೈನಿಕರು ಸಾರ್ವಜನಿಕರು ಪಾಲ್ಗೊಂಡಿದ್ದರು.