ಇಂಡಿ: 12 ನೇ ಶತಮಾನದಲ್ಲಿ ಹಿಂದುಳಿದ ಹಾಗೂ ಶ್ರಮಜೀವಿಗಳ ಸಮಾನತೆಗೆ ಸಾಮಾಜಿಕ ಕ್ರಾಂತಿ ಮಾಡಿದವರಲ್ಲಿ ಮಾಚಿದೇವರು ಒಬ್ಬರು. ಆಧ್ಯಾತ್ಮಿಕ ಪ್ರವೃತ್ತಿಯ ಮೂಲಕ ಜನರಲ್ಲಿ ಭಕ್ತಿ ಪ್ರಧಾನ ಚಿಂತನೆಗಳನ್ನು ಮೂಡಿಸಿದ ಮಾಚಿದೇವರ ತತ್ವಾದರ್ಶಗಳು ಸರ್ವಕಾಲಕ್ಕೂ ಅನ್ವಯ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಶನಿವಾರದಂದು ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ಮಡಿವಾಳ ಮಾಚಿದೇವರ ಜಯಂತಿ ಆಚರಣೆಯನ್ನು ಉದ್ಧೇಶಿಸಿ ಅವರು ಮಾತನಾಡಿದರು.
ಕಲ್ಯಾಣ ಕ್ರಾಂತಿಯ ಕೊನೆಯ ಘಟ್ಟದ ಹೋರಾಟದಲ್ಲಿ ಮಾಚಿದೇವರು ತಮ್ಮ ಪರಾಕ್ರಮದಿಂದ ವಚನ ಸಾಹಿತ್ಯ ಉಳಿಸುವಲ್ಲಿ ಅನುಪಮ ಸೇವೆಗೈದಿದ್ದಾರೆ. ಮಡಿವಾಳ ಮಾಚಿದೇವರು ಮನದ ಮೈಲಿಗೆ ಕಳೆದ ಸರ್ವ ಶ್ರೇಷ್ಠ ಶರಣ, ದಿಟ್ಟ ಗಣಾಚಾರಿ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಹಿರೇರೂಗಿ ಉರ್ದು ಕ್ಲಸ್ಟರ್ ಸಿ ಆರ್ ಪಿ ಬಾದಶಾ ಚಪ್ಪರಬಂದ ಮಾತನಾಡಿ, ಮೇಲು ಕೀಳು, ಬಡವರು,ಸಾಮಾಜಿಕ ಬಹಿಷ್ಕಾರ ಹಾಗೂ ಶೋಷಣೆಗೊಳಗಾದವರ ಬಗ್ಗೆ ಚಿಂತಿಸಿ,ವ್ಯಕ್ತಿ-ವ್ಯಕ್ತಿಗಳ ನಡುವೆ ಇರುವ ಅಂತರವನ್ನು ಹೋಗಲಾಡಿಸಲು ಹೋರಾಡಿದ ಮಾಚಿದೇವರ ಜೀವನ ಎಲ್ಲರಿಗೂ ಆದರ್ಶಪ್ರಾಯವಾಗಿದೆ ಎಂದು ಹೇಳಿದರು.
ಮುಖ್ಯ ಶಿಕ್ಷಕ ಎಸ್ ಎಸ್ ಅರಬ, ಶಿಕ್ಷಕರಾದ ಎನ್ ಬಿ ಚೌಧರಿ, ಎಸ್ ಪಿ ಪೂಜಾರಿ, ಬೇಗಂ ಮುಲ್ಲಾ, ಕಮಲಾ ದಳವಾಯಿ ಸೇರಿದಂತೆ ಶಾಲಾ ಮಕ್ಕಳು ಉಪಸ್ಥಿತರಿದ್ದರು.