ಮೂಡಲಗಿ: ತಾಲೂಕಿನ ಕಲ್ಲೋಳಿ ಪಟ್ಟಣದ ಯುವಕರು ಆರ್ ಸಿ ಬಿ ಗೆಲುವು ಸಾಧಿಸಬೇಕೆಂದು ಹನುಮಂತ ದೇವರಿಗೆ ವಿಶೇಷ ಪೂಜೆ ಮಾಡಿಸಿ, ಹರಕೆ ಹೊತ್ತಿದ್ದರು. ನಂತರ ಗೆಲುವಿನ ಬಳಿಕ 1 ಕಿಮೀ ಅಂತರದಿಂದ ಬಸ್ತಿಗಲ್ಲಿ ಯುವಕರು ಯಲ್ಲಮ್ಮತಾಯಿ ಮಂದಿರದಿಂದ ಮಾರುತಿದೇವರ ಮಂದಿರವರೆಗೆ ರಾತ್ರಿ ಹೊತ್ತು ದೀರ್ಘ ದಂಡ ನಮಸ್ಕಾರ ಹಾಕಿ ದೇವರಿಗೆ ಹರಕೆ ತೀರಿಸಿ, ವಿಜಯೋತ್ಸವ ಆಚರಿಸಿದರು.
ಸಮ್ರದ್ಧ ಗಿರೆಣ್ಣವರ ಮಾತನಾಡಿ, ಶಾಲಾ ದಿನಗಳಿಂದ ಕ್ರಿಕೆಟ್ ಆಡುತ್ತಿದ್ದೇವೆ. ಈಗ ಪರೀಕ್ಷೆ ಮುಗಿಸಿ ಬಂದ ನಂತರ ದಿನಂಪ್ರತಿ ನಾವು ಕ್ರಿಕೆಟ್ ಆಡುತ್ತೇವೆ. ಆರ್ ಸಿಬಿ ಈ ಬಾರಿ ಗೆಲುವು ಕಾಣಬೇಕು ಎಂಬುದು ನಮ್ಮ ಕನಸಾಗಿತ್ತು. ಅದಕ್ಕೆ ನಮ್ಮ ಪಟ್ಟಣದ ಯುವಕರು ಗೆಲುವಿಗಾಗಿ ಪ್ರಾರ್ಥನೆ ಸಲ್ಲಿಸಿ ಜಾಗೃತ ಹನುಮಂತ ದೇವರ ಮೊರೆ ಹೋದರು. ಅದರಂತೆ ದೇವರು ಗೆಲುವು ಕೊಟ್ಟಿದ್ದಾನೆ. ಅದಕ್ಕೆ ಹರಕೆ ತೀರಿಸಲಾಯಿತು ಎಂದು ಹೇಳಿದರು.
ಪ್ರತಿಯೊಬ್ಬರಲ್ಲಿ ನಾಡು ಮತ್ತು ನುಡಿಯ ಬಗ್ಗೆ ಅಭಿಮಾನ ಸದಾ ಜಾಗೃತವಾಗಿರಬೇಕು. ಜೊತೆಗೆ ಕ್ರೀಡಾಭಿಮಾನ ತುಂಬಿ ತುಳುಕುತ್ತಿರಬೇಕು ಎಂದು ಅವರು ಹೇಳಿದರು.
ಬೆಂಗಳೂರು ತಂಡ ಗೆಲುವು ಸಾಧಿಸಿರುವುದು ಸಣ್ಣ ಮಾತೇನಲ್ಲ. ಅತೀ ಹೆಚ್ಚು ಸಂಖ್ಯೆಯ ಅಭಿಮಾನಿಗಳು ಇರುವುದು ಬೆಂಗಳೂರು ತಂಡಕ್ಕೆ ಎನ್ನುವುದು ಪ್ರತಿಯೊಬ್ಬರಿಗೂ ಹೆಮ್ಮೆಯ ಸಂಗತಿ. ಬೆಂಗಳೂರು ಆಟಗಾರರ ಸ್ಪೂರ್ತಿ ಇಂದಿನ ಯುವಕರಿಗೆ ಆದರ್ಶವಾಗಬೇಕು ಎಂದು ಹೇಳಿದರು.
ದೀರ್ಘ ದಂಡ ನಮಸ್ಕಾರವನ್ನು ಸಮ್ರದ್ಧ ಗಿರೆಣ್ಣವರ, ವಿಠ್ಠಲ ಕಂಕಣವಾಡಿ, ಮಲ್ಲಪ್ಪ ಕರಗಾಂವಿ ಹಾಕಿದರು. ಇವರಿಗೆ ಹತ್ತಾರು ಯುವಕರು ಸಾಥ್ ನೀಡಿದರು.
ಶಿವಾನಂದ ದಬಾಡಿ, ಪ್ರಕಾಶ ಪತ್ತಾರ, ಶಿವಾನಂದ ಪೂಜೇರಿ, ಮಂಜುನಾಥ ಕಂಕಣವಾಡಿ ಸೇರಿದಂತೆ ಹಲವಾರು ಜನ ಉಪಸ್ಥಿತರಿದ್ದರು.