ಬೆಳಕು ಗ್ರಾಮಾಭಿವೃದ್ಧಿ ಸಂಘದ ಸಮಾಜಮುಖಿ ಕಾರ್ಯ ಶ್ಲಾಘನೀಯ:ಮಹಾಂತೇಶ ಕೌಜಲಗಿ.

Pratibha Boi
ಬೆಳಕು ಗ್ರಾಮಾಭಿವೃದ್ಧಿ ಸಂಘದ ಸಮಾಜಮುಖಿ ಕಾರ್ಯ ಶ್ಲಾಘನೀಯ:ಮಹಾಂತೇಶ ಕೌಜಲಗಿ.
WhatsApp Group Join Now
Telegram Group Join Now
ಬೈಲಹೊಂಗಲ- ಸಮಾನ ಮನಸ್ಕರು ಸೇರಿಕೊಂಡು ಬೆಳಕು ಗ್ರಾಮಾಭಿವೃದ್ಧಿ ಸಂಘವನ್ನು ಹುಟ್ಟು ಹಾಕಿ ಅಲ್ಪ ಅವಧಿಯಲ್ಲಿಯೇ ಅತ್ಯುತ್ತಮ ಸಮಾಜಿಕ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದು ಶಾಸಕ ಮಹಾಂತೇಶ ಕೌಜಲಗಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.
   ತಾಲೂಕಿನ ಬೆಳವಡಿ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಬೆಳಕು ಗ್ರಾಮಾಭಿವೃದ್ಧಿ ಸಂಘದಿಂದ ಆಯೋಜಿಸಲಾಗಿದ್ದ ಸ್ವರ್ಗ ರಥ (ಶವ ಸಾಗಿಸುವ ವಾಹನ) ಲೋಕಾರ್ಪಣೆಗೊಳಿಸಿ ವೇದಿಕೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ವರ್ತಮಾನದಲ್ಲಿ ಮನುಷ್ಯ ಶವಕ್ಕೆ ಹೆಗಲು ಕೊಡಲಾರದಷ್ಟು ತನ್ನ ಕೆಲಸ ಕಾರ್ಯದಲ್ಲಿ ಮುಳುಗಿ ಹೋಗಿದ್ದಾನೆ.ಅಂತಹ ಸ್ಥಿತಿಯನ್ನ ಗಮನದಲ್ಲಿಟ್ಟುಕೊಂಡು ಬೆಳಕು ಗ್ರಾಮಾಭಿವೃದ್ಧಿ ಸಂಘದ ಸದಸ್ಯರು ಸುಮಾರು 8.50 ಲಕ್ಷ ರೂ ವೆಚ್ಚದಲ್ಲಿ ಸಜ್ಜುಗೊಳಿಸಿರುವ ವಾಹನವನ್ನು ಉಚಿತವಾಗಿ ಶವ ಸಾಗಿಸಲು ನೀಡಿರುವುದು ಗಮನಾರ್ಹ ಸಂಗತಿ. ಈಗಾಗಲೇ ಬೈಲಹೊಂಗಲ ಪುರಸಭೆಯಲ್ಲಿ ಈ ಯೋಜನೆ ಜಾರಿಯಲ್ಲಿದ್ದು ಕೇವಲ ವಾಹನ ಕೊಡಲಾಗುತ್ತದೆ. ಆದರೆ ಬೆಳಕು ಗ್ರಾಮಾಭಿವೃದ್ಧಿ ಸಂಘ ಸದಸ್ಯರು ಮತ್ತೊಂದು ಹೆಜ್ಜೆ ಮುನ್ನಡೆದು ಶವ ಸಂಸ್ಕಾರಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಡುವ ಯೋಜನೆ ರೂಪಿಸಿಕೊಂಡಿದ್ದಾರೆ. ಮನೆಗಳಲ್ಲಿ ಅನಾಹುತ ವಾದ ಸಂದರ್ಭದಲ್ಲಿ ಮನುಷ್ಯನು ಗೊಂದಲಕ್ಕೆ ಒಳಗಾಗಿ ದಿಕ್ಕು ತೋಚದವನಾಗುತ್ತಾನೆ. ಅಂತಹ ಪರಿಸ್ಥಿತಿಯಲ್ಲಿರುವ ವ್ಯಕ್ತಿಗಳಿಗೆ ಸ್ವರ್ಗರಥದ ಮಹತ್ವ ತಿಳಿಯುತ್ತದೆ.
 ನನ್ನ ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಇಂತಹ ಸಂಘವನ್ನು ಹಿಂದೆಂದೂ ಕಂಡಿಲ್ಲ. ಇನ್ನುಳಿದ ಸಂಘಗಳಿಗೆ ಬೆಳಕು ಗ್ರಾಮಾಭಿವೃದ್ಧಿ ಸಂಘ ಮಾದರಿಯಾಗಿದೆ. ಜನಪರ ಕೆಲಸ ಕಾರ್ಯಗಳಿಗೆ ಸದಾ ಸಿದ್ಧವಾಗಿರುವ ಬೆಳಕು ಗ್ರಾಮಾಭಿವೃದ್ಧಿ ಸಂಘ ಮುಂಬರುವ ದಿನಗಳಲ್ಲಿ ಬೆಳವಡಿ ಭಾಗದ ಜನತೆಯ ಆಶಾಕಿರಣವಾಗಿ ಹೊರಹೊಮ್ಮಲಿ. ಹಾಗೂ ಈ ಭಾಗದ ಜನರ ಮತ್ತೊಂದು ಬಹು ದಿನಗಳ ಬೇಡಿಕೆಯಾಗಿದ್ದ  ಸ್ಮಶಾನಕ್ಕೆ ಹೋಗಲು ಸುಸಜ್ಜಿತ ರಸ್ತೆಯ ಕಾಮಗಾರಿಗೆ ಈಗಾಗಲೇ ಅಡಿಗಲ್ಲು ಸಮಾರಂಭ ನೆರವೇರಿಸಲಾಗಿದ್ದು,ಸದ್ಯದಲ್ಲಿಯೇ 50 ಲಕ್ಷ ರೂ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಲಿದೆ ಎಂದರು.
   ಗ್ರಾ ಪಂ ಅಧ್ಯಕ್ಷ ಚಂದ್ರಶೇಖರಯ್ಯ ಕಾರಮನಿ ಮಾತನಾಡಿ ಮೃತ ವ್ಯಕ್ತಿಗಳನ್ನು ಸಾಗಿಸಲು ಸಾಕಷ್ಟು ತೊಂದರೆಯಾಗುತ್ತಿರುವ ಬಗ್ಗೆ ತಿಳಿದ ಬೆಳಕು ಗ್ರಾಮಾಭಿವೃದ್ಧಿ ಸಂಘ ಸ್ವರ್ಗರಥ ವಾಹನವನ್ನು ಸಮಾಜಕ್ಕೆ ಉಚಿತವಾಗಿ ನೀಡಿದೆ.ಯಾವುದೇ ಜಾತಿಯ ಬೇಧಭಾವವಿಲ್ಲದೇ ವಾಹನದ ಸದುಪಯೋಗ ಪಡಿಸಿಕೊಳ್ಳಬಹುದು ಎಂದರು.
   ಸಾನಿಧ್ಯ ವಹಿಸಿದ್ದ   ವೇ.ಮೂ. ಬಸಯ್ಯ ವಿರಕ್ತಮಠ, ಮಾಜಿ ಜಿಪಂ ವಿ. ಎಮ್. ಕರಿಕಟ್ಟಿ, ಆರ್. ಎಸ್.ರೊಟ್ಟಯ್ಯನವರಮಠ, ಸೋಮೇಶ್ವರ ಸಕ್ಕರೆ ಕಾರ್ಖಾನೆ ನಿರ್ದೇಶಕ ಆರ್. ಎಮ್. ಮಟ್ಟಿ, ವಿಠ್ಠಲ ಪೀಸೆ ಮಾತನಾಡಿ ಸಂಘ ಸ್ಥಾಪನೆಯಾದ ಕೆಲವೇ ದಿನಗಳಲ್ಲಿ ಸಾಮಾಜಿಕ ಕೆಲಸ ಮಾಡುವ ಮೂಲಕ ಸಾರ್ವಜನಿಕ ವಲಯದಲ್ಲಿ ಗುರುತಿಸಿಕೊಂಡಿದೆ.
ಹಿರಿಯರ ಮಾರ್ಗದರ್ಶನದಲ್ಲಿ ಸಾಗುತ್ತಿರುವ ಬೆಳಕು ಗ್ರಾಮಾಭಿವೃದ್ಧಿ ಸಂಘದ ಸದಸ್ಯರು ಸಮಾಜಕ್ಕೆ ತಮ್ಮದೇಯಾದ ಕೊಡುಗೆ ನೀಡಲು ಕಂಕಬದ್ಧರಾಗಿದ್ದಾರೆ. ಸಮಾನ ಮನಸ್ಕರಿಂದ ಕೂಡಿದ ಸಂಘಕ್ಕೆ ಉತ್ತಮ ಸಲಹೆ ಸೂಚನೆ ನೀಡಿ ಮತ್ತಷ್ಟು ಸಮಾಜಮುಖಿ ಕಾರ್ಯಗಳಿಗೆ ಅಣಿಯಾಗಿಸೋಣ ಎಂದರು.
      ಸಂಘದ ಅಧ್ಯಕ್ಷ ಡಾ. ಡಿ. ವಾಯ್.ಗರಗದ, ಬೆಳವಡಿ ರಾಣಿ ಮಲ್ಲಮ್ಮ ಸೌಹಾರ್ದ ಸಹಕಾರಿ ನಿರ್ದೇಶಕ ಬಿ. ಆರ್. ಪಾಟೀಲ, ಗ್ರಾಪಂ ಸದಸ್ಯರಾದ ಬಿ. ಜಿ. ದೇಗಾವಿ, ಬಿ. ಎಚ್. ನರೇಗಲ್ಲ, ರಾಜು ಬಿಸರೊಳ್ಳಿ, ಮುಖಂಡರಾದ ಎ. ಎಮ್. ಬಾಗೇವಾಡಿ, ವಿ.ಎನ್. ಬಡಿಗೇರ,ಎನ್. ಜಿ. ತುರಾಯಿ, ಆರ್. ಆಯ್. ರಾಯೇಜಿ, ಆರ್. ಬಿ. ಉಳ್ಳಿಗೇರಿ ವೇದಿಕೆ ಮೇಲಿದ್ದರು.
ಎಮ್. ಪಿ ಉಪ್ಪಿನ ಸ್ವಾಗತಿಸಿದರು. ಪ್ರಕಾಶ ಹುಂಬಿ ನಿರೂಪಿಸಿ, ವಂದಿಸಿದರು.
WhatsApp Group Join Now
Telegram Group Join Now
Share This Article