ಗಂಗಾವತಿ (ಕೊಪ್ಪಳ): ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಯಾರದ್ದೊ ಕೊಲೆಗೆ ಮತ್ತೊಂದು ಸೇಡಿನ ಕೊಲೆಯಂತಹ ಘಟನೆಗಳಿಂದ ಜನರು ಬೆಚ್ಚಿ ಬೀಳುತ್ತಿದ್ದಾರೆ. ಜನ ಕಾನೂನು ಮತ್ತು ನ್ಯಾಯಾಂಗದಂತ ವ್ಯವಸ್ಥೆ ಮೇಲೆ ವಿಶ್ವಾಸ ಕಳೆದುಕೊಂಡು ಹೊಡೆದಾಡಿಕೊಳ್ಳುವಂತಾಗಿದೆ” ಎಂದು ಉಡುಪಿಯ ಪೇಜಾವರ ಪೀಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಆತಂಕ ವ್ಯಕ್ತಪಡಿಸಿದರು.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತನ ಕೊಲೆ ಪ್ರಕರಣವು ರಾಜ್ಯದಲ್ಲಿನ ಅರಾಜಕತೆಯನ್ನು ತೆರೆದಿಡುತ್ತಿದೆ. ಸರ್ಕಾರ ಯೋಗ್ಯವಾದ ಕ್ರಮ ಕೈಗೊಳ್ಳುವ ಸಂಕಲ್ಪ ಮಾಡಿದ್ದರೆ, ಇಂತಹ ಅತೀರೇಕಗಳು ಘಟಿಸುತ್ತಿರಲಿಲ್ಲ. ಎಲ್ಲೋ ಒಂದು ಕಡೆ ದೊಂಬಿ ನಡೆಯುತ್ತದೆ. ಮತ್ತೊಂದು ಕಡೆ ಪ್ರತೀಕಾರ ನಡೆಯತ್ತದೆ. ಇಂತಹ ಒಂದೇ ಘಟನೆ ಎಂದಲ್ಲ, ಅನೇಕ ಘಟನೆಗಳು ರಾಜ್ಯದಲ್ಲಿ ನಿತ್ಯ ನಡೆಯುತ್ತಿವೆ. ಇದನ್ನು ಅರಾಜಕತೆ ಎನ್ನದೇ ಬೇರೆ ದಾರಿಯಿಲ್ಲ” ಎಂದರು.