ಕಿರುತೆರೆಯ ಸಾಕಷ್ಟು ವಿಭಾಗಗಳಲ್ಲಿ ಕೆಲಸಮಾಡಿ ಅನುಭವ ಪಡೆದ ಅಭಿಜಿತ್ ಪುರೋಹಿತ್ ಕಳೆದ ವರ್ಷ ‘ಲಕ್ಷ್ಮಿ’ ಎಂಬ ಕಿರುಚಿತ್ರವನ್ನು ನಿರ್ದೇಶಿಸಿದ್ದರು. ಆ ಚಿತ್ರವು ಇದೀಗ ದೇಶ ವಿದೇಶಗಳ ಫಿಲಂ ಫೆಸ್ಟಿವಲ್ ಗಳಲ್ಲಿ ಭಾಗವಹಿಸಿ ಪ್ರಶಂಸೆಯ ಜತೆ ಅಭಿನಯ, ನಿರ್ದೇಶನ, ಸಂಗೀತ, ಛಾಯಾಗ್ರಹಣ ಸೇರಿದಂತೆ ನಾನಾ ವಿಭಾಗಗಳಲ್ಲಿ 27 ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.
ಈ ಸಂಭ್ರಮವನ್ನು ನಿರ್ದೇಶಕ ಅಭಿಜಿತ್ ಮಾಧ್ಯಮದೊಂದಿಗೆ ಹಂಚಿಕೊಳ್ಳಲು ಪತ್ರಿಕಾ ಗೋಷ್ಟಿ ಆಯೋಜಿಸಿದ್ದರು. ಇದೇ ಸಂದರ್ಭದಲ್ಲಿ , ತನ್ನ ತಾಯಿಯ ಮೇಲೆ ಅಪಾರ ಪ್ರೀತಿ ಗೌರವ ಇಟ್ಟುಕೊಂಡಿರುವ ಅಭಿಜಿತ್ ತಾಯಿ ನಳಿನಿ ಅವರ 70ನೇ ಹುಟ್ಟುಹಬ್ಬವನ್ನು ‘ನಳಿನಿ at 70’ ಅಡುಗೆ ಮನೆಯಿಂದ ರೆಡ್ ಕಾರ್ಪೆಟ್ ವರೆಗೆ ಶೀರ್ಷಿಕೆಯಡಿ ಅರ್ಥಪೂರ್ಣವಾಗಿ ಸೆಲಬ್ರೇಟ್ ಮಾಡಿದರು. ಎಐ ತಂತ್ರಜ್ಞಾನದ ಮೂಲಕ ತಾಯಿ ನಳಿನಿ ಅವರಿಗೆ ಅವರ ಪತಿ, ತಂದೆ, ತಾಯಿ ಶುಭ ಹಾರೈಸುವ ವಿಡಿಯೋ ತೋರಿಸಿದರು. ಈ ಅನಿರೀಕ್ಷಿತ ಅಚ್ಚರಿ ಕಂಡು ನಳಿನಿ ಅವರ ಕಣ್ಣಿಂದ ಆನಂದ ಭಾಷ್ಪ ಹರಿಯಿತು.
ಆಭಿಜಿತ್ ಮಾತನಾಡಿ “ಈ ಸಮಾರಂಭಕ್ಕೆ ಗಿರಿಜಮ್ಮ ಅವರೇ ಸೂಕ್ತ ವ್ಯಕ್ತಿ ಎಂದು ಅವರನ್ನು ಆಹ್ವಾನಿಸಿದಾಗ ತುಂಬಾ ಖುಷಿಯಿಂದ ಬಂದಿದ್ದಾರೆ. ನಮ್ಮ ಅಮ್ಮನ 70ನೇ ಹುಟ್ಟುಹಬ್ಬಕ್ಕೆ ಅವರ ಕಟೌಟ್ ಹಾಕಿಸಿದ್ದೇನೆ. ಒಬ್ಬ ಮಗನಾಗಿ 40 ವರ್ಷಗಳ ಹಿಂದೆಯೇ ಕಳೆದುಕೊಂಡಿದ್ದ ಅವರ ತಂದೆ, ತಾಯಿ ಅಲ್ಲದೆ ಪತಿಯನ್ನು ತೋರಿಸಿದ್ದೇನೆ” ಎಂದು ಹೇಳಿದರು. ಇದೇ ಸಂದರ್ಭದಲ್ಲಿ ತನ್ನ ತಾಯಿಗೆ ಅವರ ತಂದೆಯ ವಿಗ್ರಹವನ್ನು ಕೊಡುಗೆಯಾಗಿ ನೀಡಿದರು.
ಮಗನ ಪ್ರೀತಿಗೆ ಕಣ್ಣೀರಾದ ನಳಿನಿ “ನನ್ನ ಮಗ ನನಗೆ ಪ್ರಶಸ್ತಿ, ಗೌರವ ಎಲ್ಲವನ್ನೂ ತಂದುಕೊಟ್ಟ. ಇಂಥ ಮಗನನ್ನು ಪಡೆಯಲು ನಾನು ನಿಜಕ್ಕೂ ಅದೃಷ್ಟ ಮಾಡಿದ್ದೆ” ಎಂದರು. ಗಿರಿಜಾ ಲೋಕೇಶ್ “ಈ ಥರದ ಮಗ ಎಲ್ಲ ತಾಯಂದಿರಿಗೂ ಸಿಗಲ್ಲ. ತನ್ನ ತಾಯಿಗೆ ಆತ ಅದೆಂಥ ಸರ್ ಪ್ರೈಸ್ ಕೊಟ್ಟಿದ್ದಾನೆ. ನಳಿಸಿ ಅವರೀಗ ಸ್ಟಾರ್ ಆಗಿದ್ದಾರೆ. ನಾನೂ ‘ಲಕ್ಷ್ಮಿ’ ಚಿತ್ರವನ್ನು ನೋಡಿದೆ 20 ನಿಮಿಷದಲ್ಲಿ ಎಂತೆಂಥ ವಿಚಾರಗಳನ್ನು ಹೇಳಿದ್ದಾನೆ. ಹುಟ್ಟಿ ಬೆಳೆದ ಮನೆಯ ಜತೆ ಸಂಬಂಧಗಳನ್ನೂ ಉಳಿಸಿಕೊಳ್ಳುತ್ತಾನೆ” ಎಂದರು.
ಚಿತ್ರದಲ್ಲಿ ನಟಿಸಿರುವ ಪದ್ಮಜಾರಾವ್ “ನನಗೆ ಇಂಥ ಮಹತ್ತರ ಪಾತ್ರ ಮಾಡಲು ಅಭಿ ಕಾರಣ. ಪ್ರಶಸ್ತಿಯೂ ಬಂತು” ಎಂದು ಹೇಳಿದರು. ನಿರ್ದೇಶಕ ರಘುರಾಮ್ ತಮ್ಮ ತಾಯಿಯನ್ನು ನೆನೆದು ಕಣ್ಣೀರಾದರರು. ಸಂಗೀತ ನಿರ್ದೇಶಕ ಗಿರಿಧರ ದೀವಾನ್ ಕೂಡ ವೇದಿಕೆಯಲ್ಲಿದ್ದರು.