ಬೆಳಗಾವಿ: ರಾಜ್ಯ ಸರ್ಕಾರದಿಂದ ನವೆಂಬರ್ 2024ರ ವರೆಗೆ ನಾಲ್ಕು ರಸ್ತೆ ಸಾರಿಗೆ ನಿಗಮಗಳಿಗೆ ಶಕ್ತಿ ಯೋಜನೆಯಡಿ 6,543 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ವಿಧಾನಸಭೆಯಲ್ಲಿ ಮಾಹಿತಿ ನೀಡಿದರು.
ಬೆಳಗಾವಿ ಸುವರ್ಣಸೌಧದಲ್ಲಿ ಜರುಗುತ್ತಿರುವ ಚಳಿಗಾಲ ಅಧಿವೇಶನದಲ್ಲಿ, ಸೋಮವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪದ ವೇಳೆ, ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರ ಪರವಾಗಿ ಸಚಿವ ಸಂತೋಷ್ ಲಾಡ್ ಉತ್ತರಿಸಿದರು. ”ಶಕ್ತಿ ಯೋಜನೆ ಜಾರಿಯಾದಾಗಿನಿಂದ ನಾಲ್ಕು ನಿಗಮದ ಬಸ್ಗಳಲ್ಲಿ ಪ್ರತಿನಿತ್ಯ 1.16 ಕೋಟಿ ಜನರು ಪ್ರಯಾಣ ಮಾಡುತ್ತಿದ್ದಾರೆ. ಸರ್ಕಾರ ಶಕ್ತಿಯೋಜನೆಯಡಿ 8,237 ಕೋಟಿ ರೂ. ಅನುದಾನವನ್ನು ಮಂಜೂರು ಮಾಡಿದೆ. ಇದರಲ್ಲಿ 6,543 ಕೋಟಿ ರೂ.ಗಳನ್ನು ಈಗಾಗಲೇ ನಿಗಮಗಳಿಗೆ ಪಾವತಿ ಮಾಡಿದ್ದು, ಉಳಿದ 1,694 ಕೋಟಿ ರೂ. ಹಣವನ್ನು ಹಂತ – ಹಂತವಾಗಿ ನಿಗಮಗಳಿಗೆ ನೀಡಲಾಗುವುದು” ಎಂದರು.
ಸಾರಿಗೆ ನಿಗಮದ ನೌಕರರೊಂದಿಗೆ ಸಂಧಾನ: ”ಸಾರಿಗೆ ನಿಗಮಗಳ ನೌಕರರ ವೇತನವನ್ನು ಕೈಗಾರಿಕಾ ಒಪ್ಪಂದಗಳ ಅನ್ವಯ, ಪ್ರತಿ 4 ವರ್ಷಗಳಿಗೊಮ್ಮೆ ಪರಿಷ್ಕರಿಸಬೇಕು. ಕೋವಿಡ್ ಕಾರಣದಿಂದ ಕಳೆದ ಬಾರಿ 2020ಕ್ಕೆ ಪರಿಷ್ಕರಿಸಬೇಕಾದ ವೇತನವನ್ನು 2023ರಲ್ಲಿ ಪರಿಷ್ಕರಿಸಲಾಯಿತು. ಡಿಸೆಂಬರ್ 31ರ ಒಳಗಾಗಿ ಖುದ್ದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ನಿಗಮದ ನೌಕರರೊಂದಿಗೆ ಸಂಧಾನ ಒಪ್ಪಂದ ಮಾಡಿಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ನೌಕರರು ಮುಷ್ಕರ ಹೂಡದಂತೆ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.