ಐಸಿಎಆರ್-ಕೆಎಲ್ಇ ಕೃಷಿ ವಿಜ್ಞಾನ ಕೇಂದ್ರ, ಮತ್ತಿಕೊಪ್ಪದಲ್ಲಿ ೧೧೦ ನೇ ಕೆಎಲ್ಇ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಯಿತು.
ಕೇಂದ್ರದ ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರಾದ ಡಾ. ಮಂಜುನಾಥ ಚೌರಡ್ಡಿಯವರು ಮಾತನಾಡಿ, ಕೆಎಲ್ಇ ಸಂಸ್ಥೆಯನ್ನು ಸಂಸ್ಥಾಪಿಸಲು ಶ್ರಮಿಸಿದ ಏಳು ಜನ ಶಿಕ್ಷಕರಾದ, ಶ್ರೀ ಪಂಡಿತಪ್ಪ ಚಿಕ್ಕೋಡಿ, ಎಂ. ಆರ್. ಸಾಖರೆ, ಪ್ರೊ. ಎಸ್. ಎಸ್. ಬಸವನಾಳ, ಶ್ರೀ. ಹೆಚ್. ಎಫ್. ಕಟ್ಟಿಮನಿ ಮತ್ತು ಬಿ. ಬಿ. ಮಮದಾಪೂರ, ಬಿ. ಎಸ್. ಹಂಚಿನಾಳ ಮತ್ತು ಸರದಾರ ವೀರನಗೌಡ ಪಾಟೀಲ ಇವರ ಭಾವಚಿತ್ರಗಳ ಅಲಂಕರಿಸಿ ಅವರನ್ನು ಪೂಜಿಸಿ ಅವರ ಕಾರ್ಯವನ್ನು ಶ್ಲಾಘಿಸಿದರು. ಪೇಶ್ವೆಗಳ ಆಡಳಿತದಲ್ಲಿ ಕನ್ನಡದ ನೆಲವನ್ನು ಹದಗೊಳಿಸಿ ಬೆಳಗಾವಿಯಲ್ಲಿ ಕೆಎಲ್ಇ ಸಂಸ್ಥೆಯನ್ನು ಹುಟ್ಟು ಹಾಕುವ ಮೂಲಕ ಕನ್ನಡದ ಬೀಜವನ್ನು ಬಿತ್ತಿದ ಕೆಎಲ್ಇ ಸಂಸ್ಥಾಪಕರಿಗೆ ಕೃಷಿ ವಿಜ್ಞಾನ ಕೇಂದ್ರದ ಎಲ್ಲ ಸಿಬ್ಬಂದಿ ವರ್ಗದವರು ನಮನಗಳನ್ನು ಸಲ್ಲಿಸಿದರು. ಅದೇ ರೀತಿ ಏಳು ಜನ ಶಿಕಕ್ಷರಿಗೆ ಬೆಂಬಲವಾಗಿ ನಿಲ್ಲುತ್ತ ಪ್ರಾತಃಸ್ಮರಣಿಯಾದ ರಾವಬಹದ್ದೂರ ರುದ್ರಗೌಡ ಅರಟಾಳ, ರಾವಬಹದ್ದೂರ ವೈಜಪ್ಪ ಅನಿಗೋಳ, ರಾವಬಹದ್ದೂರ ವಿ. ಜಿ. ನಾಯಕ ದೇಸಾಯಿ, ಚಚಡಿ ಇವರ ಒಂದು ನಿಸ್ವಾರ್ಥ ಸೇವೆ ವ್ಯರ್ಥವಾಗದೇ ಇಡೀ ಸಮಾಜಕ್ಕೆ ಹೊಸ ಪ್ರಗತಿ ಹೆದ್ದಾರಿ ನಿರ್ಮಿಸಿದೆ. ಇಂಥ ಒಂದು ಸಂಸ್ಥೆಯನ್ನು ಮುಂದುವರೆಸಿಕೊಂಡು ಅಷ್ಟಮ ಋಷಿಯಾಗಿ ಕಳೆದ ೪೧ ವರ್ಷಗಳಲ್ಲಿ ೩೧೬ ಸಂಸ್ಥೆಗಳನ್ನು ಹುಟ್ಟು ಹಾಕಿ ಜಗತ್ತಿನಾದ್ಯಂತ ಕೆಎಲ್ಇ ಸಂಸ್ಥೆಯ ಹೆಸರನ್ನು ರಾರಾಜಿಸುವಂತೆ ಮಾಡಿದ ಡಾ.ಪ್ರಭಾಕರ ಕೋರೆಯವರ ಕಾರ್ಯವು ಅವಿಸ್ಮರಣೀಯ ಹಾಗೂ ಇತಿಹಾಸದಲ್ಲಿ ಬರೆದಿಡುವಂತಹ ಕಾರ್ಯವಾಗಿದೆ ಎಂದು ಸ್ಮರೀಸಿದರು.
ಅದೇರೀತಿ, ಕೇಂದ್ರದ ವಿಜ್ಞಾನಿ ಡಾ. ಎಸ್. ಎಸ್. ಹಿರೇಮಠ ಇವರು ಕೆಎಲ್ಇ ಸಂಸ್ಥೆಯು ೧೯೧೬ ರಿಂದ ನಡೆದು ಬಂದ ದಾರಿ ಕುರಿತು ಮಾತನಾಡಿದರು.
ಅದರಂತೆ, ಅತಿಥಿಗಳಾಗಿ ಆಗಮಿಸಿದ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಬೇಸಾಯ ಶಾಸ್ತ್ರ ಪ್ರಾಧ್ಯಾಪಕ ಡಾ. ಸುನೀಲ ಎಸ್. ನೂಲಿ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಸಿಬ್ಬಂದಿಗಳಾದ ಎಸ್. ಎಮ್. ವಾರದ, ಪ್ರವೀಣ ಯಡಹಳ್ಳಿ, ಡಾ. ಭಾವಿನಿ ಪಾಟೀಲ, ಡಾ. ಗುರುರಾಜ ಕೌಜಲಗಿ, ಶಂಕರಗೌಡ ಪಾಟೀಲ, ವಿನೋದ ಕೋಚಿ, ಮಂಜುನಾಥ ಪಿ. ಐ., ಬಸವರಾಜ ಅಮ್ಮಿನಬಾವಿ ಹಾಗೂ ಶ್ರೀಮತಿ ವೀಣಾ ಬನ್ನೂರ, ಇವರು ಸಪ್ತರ್ಷಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.


