ಕಾರೆಕಲ್ಲು ಅನುಮಾನಾಸ್ಪದ ವೀರಮ್ಮ ಸಾವು ಪ್ರಕರಣ : ಮೊಮ್ಮಗನಿಂದಲೇ ಹತ್ಯೆ

MK HasiruKranti
ಕಾರೆಕಲ್ಲು ಅನುಮಾನಾಸ್ಪದ ವೀರಮ್ಮ ಸಾವು ಪ್ರಕರಣ : ಮೊಮ್ಮಗನಿಂದಲೇ ಹತ್ಯೆ
WhatsApp Group Join Now
Telegram Group Join Now
ಬಳ್ಳಾರಿ, ಮಾ,25 : ತಾಲೂಕಿನ ಪಿ.ಡಿ. ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕಾರೇಕಲ್ಲು ಗ್ರಾಮದಲ್ಲಿ ನಡೆದಿದ್ದ ಅನುಮಾನಾಸ್ಪದ ಸಾವಿನ ಪ್ರಕರಣವು ಕೊಲೆ ಪ್ರಕರಣವೆಂದು ಬೆಳಕಿಗೆ ಬಂದಿದೆ.
ಮಾರ್ಚ್ 21ರಂದು 60 ವರ್ಷದ ಶ್ರೀಮತಿ ವೀರಮ್ಮ (ಗಂಡ: ಬಸವನಗೌಡ) ಅವರು ತಮ್ಮ ಮನೆಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ಈ ಸಂಬಂಧ ಪಿ.ಡಿ. ಹಳ್ಳಿ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್. ನಂ. 02/2026 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿತ್ತು.
ನಂತರ, ಮಾರ್ಚ್ 24ರಂದು ಮರಣೋತ್ತರ ಪರೀಕ್ಷಾ ವರದಿ ಲಭಿಸಿದ್ದು, ಅದರಲ್ಲಿ ಹರಿತವಾದ ಆಯುಧದಿಂದ ವೀರಮ್ಮರನ್ನು ಹತ್ಯೆ ಮಾಡಲಾಗಿದೆ ಎಂಬುದು ದೃಢಪಟ್ಟಿದೆ. ಇದರ ಆಧಾರದ ಮೇಲೆ ಪ್ರಕರಣವನ್ನು ಗುನ್ನೆ ನಂ. 029/2026 ಅಡಿಯಲ್ಲಿ ಕೊಲೆ ಪ್ರಕರಣವಾಗಿ ಪರಿವರ್ತಿಸಿ ಪೊಲೀಸರು ಗಂಭೀರವಾಗಿ ತನಿಖೆ ಕೈಗೊಂಡಿದ್ದಾರೆ.
ಪ್ರಕರಣ ಬೇಧಿಸಲು ಸಿರುಗುಪ್ಪ ಡಿ.ಎಸ್.ಪಿ. ಮಾಲತೇಶ ಕೂನಬೇವು. ಪಿ.ಡಿ.ಹಳ್ಳಿ ವೃತ್ತ ಸಿ.ಪಿ.ಐ. ಟಿ. ಸುಭಾಷ್ ಚಂದ್ರ , ಪಿ.ಎಸ್.ಐ.ಗಳಾದ ತಿಮ್ಮಾರೆಡ್ಡಿ & ಸುರೇಶಪ್ಪ ಹಾಗೂ ಸಿಬ್ಬಂದಿಗಳಾದ ದಾರಾಸಿಂಗ್, ನರಸಿಂಹಪ್ಪ, ಪ್ರಭಾಕರರೆಡ್ಡಿ, ಬಸವರಾಜ, ರವಿ. ನಾಗೇಶ ರವರಗಳನ್ನು ಒಳಗೊಂಡ ತಂಡವನ್ನು ರಚನೆ ಮಾಡಲಾಗಿತ್ತು.
ತನಿಖೆಯ ವೇಳೆ ಮೃತಳ ಮೊಮ್ಮಗ ಎಂ. ವಿರೇಂದ್ರ (21) ಎಂಬಾತನೇ ಕೃತ್ಯ ಎಸಗಿರುವುದು ಬಹಿರಂಗವಾಗಿದೆ.
ಆರೋಪಿಯು ಅಜ್ಜಿಯ ಬಳಿ ಇರುವ ನಗದು ಹಾಗೂ ಬಂಗಾರವನ್ನು ಕಳವು ಮಾಡುವ ಉದ್ದೇಶದಿಂದ ಮಾರ್ಚ್ 20 ರಂದು ರಾತ್ರಿ ಮನೆಯಲ್ಲಿ ಉಳಿದುಕೊಂಡು, ತಡರಾತ್ರಿ ನಿದ್ರೆಯಲ್ಲಿದ್ದ ವೀರಮ್ಮಳ ಕತ್ತನ್ನು ಚಾಕುವಿನಿಂದ ಕೊಯ್ದು ಕೊಲೆ ಮಾಡಿದ್ದಾನೆ. ಬಳಿಕ ಮನೆಯಲ್ಲಿದ್ದ ಸುಮಾರು 80 ಗ್ರಾಂ ನಕಲಿ ಬಂಗಾರದ ಆಭರಣಗಳು ಹಾಗೂ ರೂ. 23,000 ನಗದು ಹಣವನ್ನು ದೋಚಿದ್ದಾನೆ. ಸಾಕ್ಷಿ ನಾಶಪಡಿಸಲು ಶವದ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವುದೂ ತನಿಖೆಯಲ್ಲಿ ಬಹಿರಂಗವಾಗಿದೆ.
ನಂತರ ಆತ ತನ್ನ ಊರಾದ ಸಿರುಗುಪ್ಪ ತಾಲೂಕಿನ ಹಾಗಲೂರು ಗ್ರಾಮಕ್ಕೆ ತೆರಳಿ, ಕೊಲೆಗೆ ಬಳಸಿದ ಚಾಕು, ರಕ್ತದ ಕಲೆ ಬಿದ್ದ ಬಟ್ಟೆಗಳು, ನಕಲಿ ಬಂಗಾರದ ಆಭರಣಗಳು ಹಾಗೂ ನಗದು ಹಣವನ್ನು ಬಚ್ಚಿಟ್ಟಿದ್ದಾನೆ. ಪೊಲೀಸರು ಪಂಚರ ಸಮಕ್ಷಮದಲ್ಲಿ ಈ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಎಸ್ಪಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಜಟಿಲ ಪ್ರಕರಣವನ್ನು ಬೇಧಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯವರ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಡಾ. ಸುಮನ್ ಡಿ.ಪೆನ್ನೇಕರ್, ಐ.ಪಿ.ಎಸ್. ಶ್ಲಾಘಿಸಿದ್ದಾರೆ.
WhatsApp Group Join Now
Telegram Group Join Now
Share This Article