ಬಳ್ಳಾರಿ.ಏ.10 : ಮನುಷ್ಯನ ಸರ್ವಾಂಗ ಸುಂದರ ಬದುಕಿನ ನಿರ್ಮಾಣಕ್ಕೆ ಕಲೆ ಮತ್ತು ಸಂಸ್ಕೃತಿ ಪೂರಕವಾಗಿವೆ ಕಲಾವಿದರು ಮತ್ತು ಕಲಾಭಿವೃದ್ಧಿ ಕಾರ್ಯಕ್ರಮಗಳ ಸಂಖ್ಯೆ ಹೆಚ್ಚಳವಾದಂತೆ ಕಲೆಯ ತಾನಾಗಿಯೇ ಬೆಳವಣಿಗೆ
ಆಗುತ್ತದೆ ಆದರೂ ಕಲೆಗೆ ಸಾವಿಲ್ಲ ಕಲಾವಿದನಿಗೆ ಸುಖವಿಲ್ಲ ಎಂಬ ಮಾತು ಸತ್ಯ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿವೃತ್ತ ಉಪನಿರ್ದೇಶಕ ಚೋರನೂರು ಟಿ ಕೊಟ್ರಪ್ಪ ಅಭಿಪ್ರಾಯ ಪಟ್ಟರು.
ಅವರು ನಗರದ ಶ್ರೀಮೇಧಾ ಪದವಿ ಮಹಾ ವಿದ್ಯಾಲಯಲ್ಲಿ ಕಾರಂತ ರಂಗಲೋಕ ಕಲಾತ್ಮಕ ಮನಸ್ಸುಗಳ ತಾಣ ಭೈರಗಾಮದಿನ್ನೆ ವತಿಯಿಂದ
ಹಮ್ಮಿಕೊಂಡ ಕಾರಂತ ರತ್ನ, ಕಾರಂತ ಸಾಹಿತ್ಯ ರತ್ನ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ನಮ್ಮ ನಡುವೆ ಎಲೆಮರೆ ಕಾಯಿಯಂತೆ ಬದುಕುತ್ತಿರುವ ಅಪ್ರತಿಮ ಕಲಾವಿದರು ಇದ್ದಾರೆ. ಅವರನ್ನು ಗುರುತಿಸಿ ಮುಖ್ಯವಾಹಿನಿಗೆ ತರುವ ಕಾರ್ಯದಲ್ಲಿ ಈ ಸಂಸ್ಥೆ ನಿರತವಾಗಿರುವುದು ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.
ನಂತರ ಹಿರಿಯ ರಂಗಕರ್ಮಿ ಕುಡುದರಹಾಳ್ ಡಾ.ಶಿವಕುಮಾರ ತಾತ ಮಾತಾನಾಡಿ ಮನುಷ್ಯ ಎಲ್ಲವನ್ನೂ ತಿಳಿಯುತ್ತಲೆ ತಿಳಿಯಾಗುತ್ತಾನೆ ಹಾಗಾಗಿ ಅವನ ಎಲ್ಲ ತಿಳುವಳಿಕೆಗೆ ರಂಗಭೂಮಿ ಅವಶ್ಯ ಎಂದರು.
ಕಾರ್ಯಕ್ರಮದಲ್ಲಿ ವಿರೇಂದ್ರ ರಾವಿಹಾಳ್ ಆರ್.ಪಿ.ಮಂಜುನಾಥ್. ಬಿ.ಜಿ.ದಿನ್ನೆ ರಚನೆಯ ‘ಯಪ್ಪ ತಿಪ್ಪನ ನುಡಿಗಳು’ ಪುಸ್ತಕ ಲೋಕಾರ್ಪಣೆ ಮಾಡಿ ಈ ಪುಸ್ತಕ ಸಮಾಜ ಎಲ್ಲ ವರ್ಗಗಳ ಚಲನವಲನಗಳ ಪ್ರತಿಫಲಕದಂತಿದ್ದು, ಸಹೃದಯಿಗಳನ್ನು ಆಕರ್ಷಿಸುತ್ತದೆ ಎಂದರು. ನಂತರ ಕಾರ್ಯಕ್ರಮದಲ್ಲಿ ಮರಿಯಮ್ಮಮಹಳ್ಳಿ ಈ.ವೆಂಕಟೇಶ ಮಹಾಶಕ್ತಿ, ಯಾದಗಿರಿ ಅನಂತಕುಮಾರ ರುಧಿರಶ್ರು, ಕಾರ್ಕಳ ಸಾವಿತ್ರಿ ಮನೋಹರ ರ ಪಂಚ ಪ್ರಹಸನ,ಧಾರವಾಡ ಡಾ.ವೀಣಾ ಸಂಕನಗೌಡರ ಮೂರು ಮತ್ತೊಂದು ನಾಟಕಗಳು, ಶಿವಮೊಗ್ಗ ಡಾ.ಗಣೇಶ ಕೆಂಚನಾಲ ರ ಉಡು-ತಡಿ ಪುಸ್ತಕಗಳಿಗೆ ರಾಜ್ಯ ಮಟ್ಟದ ಕಾರಂತ ಸಾಹಿತ್ಯ ರತ್ನ ಪ್ರಶಸ್ತಿ ಹಾಗೂ ಬಯಲಾಟ ಕಲಾವಿದೆ ಎಳ್ಳಾರ್ತಿ ಚಾಮುಂಡೇಶ್ವರಿ, ಬಯಲಾಟ ನೇಪಥ್ಯಗಾರ ಎಮ್ಮಿಗನೂರು ಜೀರ್ ಹಾಲೇಶಪ್ಪ, ಹಿರಿಯ ಕಲಾವಿದೆ ಕೊಟ್ನೆಕಲ್ ರಂಗಮ್ಮ, ಬಯಲಾಟ ಹಾರ್ಮೋನಿಯಂ ಮೇಷ್ಟ್ರು ಮೆಟ್ರಿ ಸಿ.ಡಿ.ಪಿ.ಮಾರೆಪ್ಪ, ಬಯಲಾಟ ಹಿರಿಯ ಕಲಾವಿದ ಬಂಡ್ರಿ ಲಿಂಗಪ್ಪ ರವರಿಗೆ ಕಾರಂತ ರತ್ನ ರಂಗ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ.ರಾಮಕಿರಣ್, ಸಾಹಿತಿಗಳಾದ ಡಾ.ದಸ್ತಗೀರ್ ಸಾಬ್ ದಿನ್ನಿ, ವಿರೇಂದ್ರ ರಾವಿಹಾಳ್, ಬಯಲಾಟ ಅಕಾಡೆಮಿ ಮಾಜಿ ಸದಸ್ಯ ಮುದ್ದಟನೂರು ಹೆಚ್ ತಿಪ್ಪೇಸ್ವಾಮಿ ಹಾಗೂ ಕಾರ್ಯದರ್ಶಿ ಆರ್.ಪಿ.ಮಂಜುನಾಥ್. ಬಿ.ಜಿ.ದಿನ್ನೆ ಭಾಗವಹಿಸಿದ್ದರು.ಡಾ.ವೈ.ಸುಮ ನಿರೂಪಿಸಿದರು.