ಬಳ್ಳಾರಿ. ಮಾ. 03;..ಕನ್ನಡ ಭಾಷೆಯನ್ನು ಸತತವಾಗಿ ಬಳಸುವುದರಿಂದ ಜೀವಂತವಾಗಿಡಬಹುದು, ಪ್ರಪಂಚದಲ್ಲಿ ಈಗಾಗಲೇ ಸಾವಿರಾರು ಭಾಷೆಗಳು ನಶಿಸಿಹೋಗಿವೆ ಕನ್ನಡ ಭಾಷೆಯನ್ನು ಹಾಗಾಗಲು ಬಿಡದಂತೆ ಸದಾ ನಾವು ನೀವು ಬಳಸಿಕೊಳ್ಳಬೇಕಾದ ಅಗತ್ಯವಿದೆ, ರಾಜ್ಯದಲ್ಲಿ ಕನ್ನಡ ಮತ್ತು ಕನ್ನಡಿಗನೇ ಸಾರ್ವಭೌಮ ಎನ್ನುವಂತೆ ಎಲ್ಲಾ ಭಾಷೆ ಗೊತ್ತಿದ್ದರೂ ನಮ್ಮ ಬಾಷೆಗೆ ರಾಜನ ಸ್ಥಾನವನ್ನು ನೀಡಬೇಕು ಎಂದು ಮಹಾನಗರ ಪಾಲಿಕೆ ಸದಸ್ಯ ಗೋವಿಂದರಾಜು ತಿಳಿಸಿದರು.
ಅದೇ ಪ್ರಕಾರವಾಗಿ ಜನರು ನಿಸ್ವಾರ್ಥ ಸೇವೆಯಿಂದ ಜನಸೇವೆಯೇ ಜನಾರ್ಧನ ಸೇವೆ ಎಂದು ಭಾವಿಸಿ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಇಂದು ಶ್ರೀ ಚೇಳ್ಳಗುರ್ಕಿ ಎರ್ರಿಸ್ವಾಮಿ ಸ್ಮರಣಾರ್ಥ ದತ್ತಿ, ಕಪ್ಪಗಲ್ಲು ನಬೀಸಾಬ್ ಮತ್ತು ಹೊನ್ನೂರಮ್ಮ ದತ್ತಿ ಮತ್ತು ಗುರ್ರಂ ಸಾಕಮ್ಮ ಮತ್ತು ರಾಮಯ್ಯ ದತ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಭಾಷೆ ಉಳಿದರೆ ಮಾತ್ರ ಕನ್ನಡ ಸಂಸ್ಕೃತಿ ಉಳಿಯಲು ಸಾಧ್ಯ ಎಂದು ಆರ್.ವೈ.ಎಂ ಇಂಜಿನೀಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ. ಎ. ತಿಮ್ಮನಗೌಡ ಅಭಿಪ್ರಾಯಪಟ್ಟರು.
ಕೈಗಾರಿಕಾ ತರಬೇತಿ ಸಂಸ್ಥೆಯ ಹಿರಿಯ ತರಬೇತಿ ಅಧಿಕಾರಿ ರಿಜ್ವಾನ್ ನಾಸೀರ್ ಖಾನ್ ಪರಿಷತ್ತಿನ ಕನ್ನಡ ಕಾರ್ಯಕ್ರಮಗಳು ತಾಂತ್ರಿಕ ಶೈಕ್ಷಣಿಕ ಸಂಸ್ಥೆಗಳಲ್ಲಿ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಕೆ.ಹೆಚ್.ಎಂ. ಪಂಡಿತಾರಾಧ್ಯ ಅವರು ಮನುಷ್ಯನ ಸೃಜನಶೀಲತೆ ಅಭಿವ್ಯಕ್ತಗೊಳ್ಳುವುದು ಮಾತೃಭಾಷೆಯಲ್ಲಿಯೇ ಹೀಗಾಗಿ ನಮ್ಮ ಸಂಸ್ಥೆಯಲ್ಲಿ ಕಸಾಪವು ದತ್ತಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದರು.
ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಅಂಗಡಿ ಶಂಕರ್, ಸರ್ಕಾರಿ ತರಬೇತಿ ಸಂಸ್ಥೆಯ ಅಧಿಕಾರಿಗಳಾದ ಸಿ. ಶಶಿರೇಖಾ, ಇಂದಿರಾ, ಜಿ. ಶಂಕರ ಮತ್ತು ದತ್ತಿ ದಾನಿಗಳಾದ ಕಪ್ಪಗಲ್ಲು ರಸೂಲ್ ಸಾಬ್, ಕಸಾಪ ಅಧ್ಯಕ್ಷ ಡಾ. ನಿಷ್ಠಿ ರುದ್ರಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕ.ಸಾ.ಪ ಗ್ರಾಮೀಣ ಘಟಕದ ಅಧ್ಯಕ್ಷ ಎ. ಎರ್ರಿಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. ಕಪ್ಪಗಲ್ಲು ಬಿ ಚಂದ್ರಶೇಖರ ಆಚಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜಿ. ಶಂಕರ ಸ್ವಾಗತಿಸಿದರು.


