ಬಾಗಲಕೋಟೆ, ಸೆಪ್ಟೆಂಬರ್ 23: ಕೂಡಲಸಂಗಮದ ಪಂಚಮಸಾಲಿ ಮಹಾಪೀಠಕ್ಕೆ ಬೀಗ ಬಿದ್ದಿದೆ. ಬಸವ ಜಯಮೃತ್ಯುಂಜಯ ಶ್ರೀ ಉಚ್ಚಾಟನೆ ಬಳಿಕ ನೀರವ ಮೌನ ಆವರಿಸಿದೆ. ಬಾಗಲಕೋಟೆ ಜಿಲ್ಲೆ ಹುನಗುಂದದಲ್ಲಿ ಭಾನುವಾರ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ ನೇತೃತ್ವದ ಅಖಿಲ ಭಾರತ ಪಂಚಮಸಾಲಿ ಟ್ರಸ್ಟ್ನ ಕಾರ್ಯಕಾರಿಣಿ ಜಯಮೃತ್ಯುಂಜಯ ಶ್ರೀಗಳನ್ನು ಉಚ್ಚಾಟಿಸಿ ನಿರ್ಧಾರ ಪ್ರಕಟಿಸಿತ್ತು. ಸ್ವಾಭಿಮಾನವಿದ್ದರೆ ಸ್ವಾಮೀಜಿ ಪೀಠದ ಕಡೆ ಬರಬಾರದೆಂದು ಟ್ರಸ್ಟ್ನ ಅಧ್ಯಕ್ಷ ಕಾಶಪ್ಪನವರ್ ಹೇಳಿದ್ದರು.
ಉಚ್ಚಾಟನೆ ಬಳಿಕ ಶ್ರೀಗಳು ಕೂಡಲಸಂಗಮಕ್ಕೆ ಧಾವಿಸಿದ್ದಾರೆ. ಆದರೆ, ಸ್ವಾಮೀಜಿಗೆ ಸಭೆ ನಡೆಸಲು ಎಲ್ಲೂ ಅವಕಾಶ ಸಿಗಲಿಲ್ಲ. ಕಾಶಪ್ಪನವರ ಪರೋಕ್ಷ ಸೂಚನೆಯಿಂದಾಗಿ ಎಲ್ಲೂ ಹಾಲ್ಗಳನ್ನು ನೀಡಿಲ್ಲ. ಹಾಗಾಗಿ, ಆಲದಮರದ ಕೆಳಗೆ ಭಕ್ತರ ಜತೆ ಶ್ರೀಗಳು ಸಭೆ ನಡೆಸಿದ್ದು, ಈ ವೇಳೆ ಭಾವುಕರಾದರು.
ಈ ಮಧ್ಯೆ, ಶ್ರೀಗಳ ಉಚ್ಚಾಟನೆ ಬಗ್ಗೆ ದಾವಣಗೆರೆಯಲ್ಲಿ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಜಯಮೃತ್ಯುಂಜಯ ಸ್ವಾಮೀಜಿ ಭಕ್ತರು, ಸಮುದಾಯದ ಮುಖಂಡರ ಜತೆ ಸಭೆ ನಡೆಸಲು ನಿರ್ಧರಿಸಿದ್ದಾರೆ. ಕೂಡಲಸಂಗಮದಲ್ಲೇ ಹೊಸ ಪೀಠ ಕಟ್ಟುವ ಬಗ್ಗೆ ಮಾತಾಡಿದ್ದಾರೆ.
ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಸ್ಥಾನದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಭಾನುವಾರ ಉಚ್ಚಾಟನೆ ಮಾಡಲಾಗಿತ್ತು. ಇದರ ಬೆನ್ನಲ್ಲೇ, ಪಂಚಮಸಾಲಿ ಟ್ರಸ್ಟ್ ವಿರುದ್ಧ ಬಸವ ಜಯಮೃತ್ಯುಂಜಯ ಶ್ರೀ ಗುಡುಗಿದ್ದಾರೆ. ತಮ್ಮನ್ನು ಉಚ್ಟಾಟಿಸುವ ಅಧಿಕಾರ ಯಾರಿಗೂ ಇಲ್ಲ ಎಂದಿದ್ದಾರೆ. ಭಕ್ತರ ಜತೆ ಕೂಡಲಸಂಗಮದಲ್ಲೇ ಕಣ್ಣೀರಿಟ್ಟಿದ್ದಾರೆ. ಹೊಸ ಪೀಠ ಕಟ್ಟುವುದಾಗಿ ಹೇಳಿಕೊಂಡಿದ್ದಾರೆ.


