ಬಳ್ಳಾರಿ: 20.ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಳೆದ ಮೂರು ವರ್ಷಗಳಲ್ಲಿ ವಿಜಯನಗರ ಸಾಮ್ರಾಜ್ಯದ ಮೊದಲ ರಾಜಧಾನಿಯಾದ ಆನೆಗುಂದಿಯಲ್ಲಿ ಉತ್ಸವವನ್ನು ಕೇವಲ ಒಂದೇ ಬಾರಿ ಮಾತ್ರ ಆಚರಿಸಿರುವುದು ರಾಜ್ಯದ ಸಾಂಸ್ಕೃತಿಕ ಪರಂಪರೆಯ ಮೇಲಿನ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಮಾಜಿ ಸಚಿವ ಹಾಲಿ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಸಭಾ ಅಧಿವೇಶನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಅವರು, “ವಿಜಯನಗರ ಸಾಮ್ರಾಜ್ಯದ ಇತಿಹಾಸವನ್ನು ಪ್ರತಿಬಿಂಬಿಸುವ ಆನೆಗುಂದಿ ಉತ್ಸವವು ಕೇವಲ ಒಂದು ಕಾರ್ಯಕ್ರಮವಲ್ಲ, ಅದು ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಗೌರವದ ಪ್ರತೀಕ. ಆದರೆ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯದಿಂದ ಈ ಮಹತ್ವದ ಉತ್ಸವವೇ ಮಂಕಾಗುತ್ತಿದೆ” ಎಂದು ಕಿಡಿಕಾರಿದರು.
ಕಳೆದ ವರ್ಷ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರು ಆನೆಗುಂದಿ ಉತ್ಸವವನ್ನು ಭರ್ಜರಿಯಾಗಿ ಆಚರಿಸುವುದಾಗಿ ಸಾರ್ವಜನಿಕವಾಗಿ ಭರವಸೆ ನೀಡಿದ್ದರು. ಆದರೆ ಆ ಭರವಸೆ ಕಾಗದದಲ್ಲೇ ಉಳಿದುಕೊಂಡಿದ್ದು, ಕಾರ್ಯರೂಪಕ್ಕೆ ಬರದೇ ಇರುವುದನ್ನು ರೆಡ್ಡಿ ಅವರು ತೀವ್ರವಾಗಿ ಪ್ರಶ್ನಿಸಿದರು.
“ಜನತೆಗೆ ಕೊಟ್ಟ ಮಾತು ಉಳಿಸಿಕೊಳ್ಳುವುದು ಸರ್ಕಾರದ ಕರ್ತವ್ಯ. ಉತ್ಸವವನ್ನು ನಡೆಸುವುದಾಗಿ ಹೇಳಿ ನಂತರ ಮೌನವಾಗಿರುವುದು ಜನರನ್ನು ಮೋಸಗೊಳಿಸುವಂತಾಗಿದೆ. ಇದು ಸರ್ಕಾರದ ನಿರ್ಲಕ್ಷ್ಯವೋ, ಅಸಮರ್ಥತೆಯೋ?” ಎಂದು ಅವರು ಪ್ರಶ್ನೆಗಳ ಮಳೆಗರೆದರು.
ಇದೇ ವೇಳೆ, ಈ ವರ್ಷವಾದರೂ ಆನೆಗುಂದಿ ಉತ್ಸವವನ್ನು ಆಯೋಜಿಸುವ ಬಗ್ಗೆ ಸರ್ಕಾರದ ಸ್ಪಷ್ಟ ನಿಲುವೇನು ಎಂಬುದನ್ನು ತಿಳಿಯಲು ಅವರು ಸಭೆಯಲ್ಲಿ ನೇರ ಪ್ರಶ್ನೆ ಕೇಳಿದರು. “ಇನ್ನೂ ಎಷ್ಟು ಕಾಲ ಆನೆಗುಂದಿಯಂತಹ ಐತಿಹಾಸಿಕ ನೆಲೆಯನ್ನು ಕಡೆಗಣಿಸಲಾಗುತ್ತದೆ? ಈ ವರ್ಷ ಉತ್ಸವ ನಡೆಯುತ್ತದೆಯೇ ಇಲ್ಲವೇ?” ಎಂದು ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಸ್ಥಳೀಯರ ಆಶಾಭಾವನೆಗೂ ಧಕ್ಕೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. “ಆನೆಗುಂದಿ ಉತ್ಸವವು ಸ್ಥಳೀಯ ಜನತೆಗೆ ಆರ್ಥಿಕ ಹಾಗೂ ಸಾಂಸ್ಕೃತಿಕವಾಗಿ ದೊಡ್ಡ ಶಕ್ತಿಯಾಗಿತ್ತು. ಆದರೆ ಕಳೆದ ಮೂರು ವರ್ಷಗಳಿಂದ ಸರ್ಕಾರದ ನಿರ್ಲಕ್ಷ್ಯದಿಂದ ಜನರಲ್ಲಿ ನಿರಾಸೆ ಮನೆ ಮಾಡಿದೆ” ಎಂದು ಹೇಳಿದರು.
ಸರ್ಕಾರ ತಕ್ಷಣವೇ ಸ್ಪಷ್ಟ ನಿರ್ಧಾರ ತೆಗೆದುಕೊಂಡು ಆನೆಗುಂದಿ ಉತ್ಸವವನ್ನು ಭರ್ಜರಿಯಾಗಿ ನಡೆಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಜನರ ಆಕ್ರೋಶವನ್ನು ಎದುರಿಸಬೇಕಾಗುತ್ತದೆ ಎಂದು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಎಚ್ಚರಿಕೆ ನೀಡಿದರು.


