ಬೆಳಗಾವಿ : ಜೈನ್ ಹೆರಿಟೇಜ್ ಸ್ಕೂಲ್ ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಒತ್ತು ನೀಡುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಹೇಳಿದ್ದಾರೆ.
ಶುಕ್ರವಾರ ಸಂಜೆ, ರಾಣಿ ಚನ್ನಮ್ಮ ನಗರದ ಜೈನ್ ಹೆರಿಟೇಜ್ ಸ್ಕೂಲ್ ನ 15ನೇ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿ, ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡುತ್ತಿದ್ದರು. ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಸೇರಿದಂತೆ ಎಲ್ಲ ವಿಭಾಗಗಳಲ್ಲಿ ಒತ್ತು ಕೊಟ್ಟು ಮಕ್ಕಳನ್ನು ಬೆಳೆಸಲಾಗುತ್ತಿದೆ. ಇಂದಿನ ಸ್ಫರ್ಧಾತ್ಮಕ ಯುಗದಲ್ಲಿ ಇದು ಅಗತ್ಯ ಎಂದು ಅವರು ಹೇಳಿದರು.
ನಾವು ಚಿಕ್ಕವರಿದ್ದಾಗ ಅವಕಾಶಗಳು ಸಿಗುತ್ತಿರಲಿಲ್ಲ. ಅಂದಿನ ಪರಿಸ್ಥಿತಿಯನ್ನು ಇಂದಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ನಾನು 11ನೇ ತರಗತಿಯಲ್ಲಿ ಮೊದಲ ಬಾರಿಗೆ ಕಂಪ್ಯೂಟರ್ ಮುಟ್ಟಿದ್ದು, ಆದರೆ ಇಂದು ನರ್ಸರಿಯಲ್ಲೇ ಮಕ್ಕಳು ಕಂಪ್ಯೂಟರ್ ಉಪಯೋಗಿಸುತ್ತಾರೆ. ಹಿಂದೆ ನಾವು ಕೇವಲ ದೃಶ್ಯ ಮಾಧ್ಯಮದಲ್ಲಿ ನೋಡುತ್ತಿದ್ದುದನ್ನು ಇಂದು ಮಕ್ಕಳು ಸ್ವತಃ ಮಾಡುತ್ತಿದ್ದಾರೆ. ಇದು ಗಮನಾರ್ಹ ಬೆಳವಣಿಗೆಯಾಗಿದೆ ಎಂದು ಗುಳೇದ ಹೇಳಿದರು.
ಪಾಲಕರು ಎಷ್ಟೇ ಬ್ಯುಸಿಯಾಗಿದ್ದರೂ ಮಕ್ಕಳ ಚಟುವಟಿಕೆಗಳ ಕಡೆಗೆ ಗಮನ ನೀಡಬೇಕು. ಮಕ್ಕಳ ಕಲಿಕೆ, ಬೆಳೆವಣಿಗೆಯಲ್ಲಿ ಪಾಲಕರ ಪಾತ್ರ ಅತ್ಯಂತ ಅಗತ್ಯವಾಗಿದೆ ಎಂದೂ ಅವರು ಹೇಳಿದರು.


