ನಗರಕ್ಕೆ ಮಾಸ್ಟರ್‌ ಪ್ಲಾನ್‌ ಅವಶ್ಯ – ಜಗದೀಶ ಗುಡಗುಂಟಿ

Pratibha Boi
ನಗರಕ್ಕೆ ಮಾಸ್ಟರ್‌ ಪ್ಲಾನ್‌ ಅವಶ್ಯ – ಜಗದೀಶ ಗುಡಗುಂಟಿ
WhatsApp Group Join Now
Telegram Group Join Now

ಜಮಖಂಡಿ;ನಗರಕ್ಕೆ ಮಾಸ್ಟರ್‌ ಪ್ಲಾನ್‌ ಅವಶ್ಯವಾಗಿದೆ. ನಗರದ ಸುತ್ತಮುತ್ತ ನಾಲ್ಕಾರು ಪುನರ್ವಸತಿ ಕೇಂದ್ರಗಳು ಬಂದಿರುವದರಿಂದ ಜನ ದಟ್ಟನೆ ಹೆಚ್ಚಾಗಿದ್ದು ಜನಸಂಖ್ಯೆಗೆ ಅನುಗುಣವಾಗಿ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕಾದ ಅನಿವಾರ್ಯತೆ ಇದೆ ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು. ಗುರುವಾರ ನಡೆದ ನಗರಸಭೆಯ ಸಾಮಾನ್ಯಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರ ದಿಂದನಿರೀಕ್ಷಿತ ಅನುದಾನ ಬಿಡುಗಡೆ ಆಗಿಲ್ಲ, ಬಿಡುಗಡೆ ಯಾಗಿರುವ ಅನುದಾನದಲ್ಲಿ 20 ಕೋಟಿ 40 ಲಕ್ಷರೂಗಳನ್ನು ಕುಡಿಯುವ ನೀರು ಸರಬರಾಜಿಗೆ ನೀಡಲಾಗಿದೆ. ನಗರಕ್ಕೆ 6 ಸಾವಿರ ಎಕರೆ ಜಮೀನು ಮಂಜೂರು ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಜಮಖಂಡಿ ಕ್ಷೇತ್ರದಲ್ಲಿ 320 ಕೋಟಿರೂ ವೆಚ್ಚದಲ್ಲಿ ನೀರು ಸರಬರಾಜು ಯೋಜನೆಯ ಕೆಲಸ ನಡೆದಿದೆ. ನಗರಪ್ರದೇಶದ ರಸ್ತೆಗಳ ಅಭಿವೃದ್ಧಿ ಮತ್ತು ಅಗಲೀಕರಣಕ್ಕೆ ನಾಲ್ಕುವರೆ ಕೋಟಿರೂಗಳ ಅನುದಾನ ಬಿಡುಗಡೆ ಮಾಡಲಾಗಿದೆ. ಕುಂಚನೂರು ರಸ್ರೆ ಹಾಗೂ ಸಜ್ಜಿಹನುಮಾನ ದೇವಸ್ಥಾನದ ಹತ್ತಿರ ಪುಡ್‌ಪಾರ್ಕಗಳನ್ನು ಸ್ಥಾಪಿಸುವ ಕೆಲಸ ಪ್ರಾರಂಭವಾಗಲಿದೆ ಎಂದು ವಿವರಿಸಿದರು. ಹಣದ ಕೊರತೆ- ಜಿಲ್ಲಾಮಟ್ಟದ ಕ್ರೀಡಾಕೂಟಗಳಲ್ಲಿ ನಗರದ ಮಕ್ಕಳು ಪ್ರಶಸ್ತಿ ಪಡೆದಿದ್ದಾರೆ ಆದರೆ ಕ್ರೀಡಾ ಇಲಾಖೆಯವರು ಕೇವಲ ಒಂದು ಪ್ರಶಸ್ತಿ ಪತ್ರವನ್ನು ನೀಡಿಲ್ಲ ಕೇಳಿದರೆ ಕೇವಲ 40 ಸಾವಿರ ರೂಗಳವೆಚ್ಚದಲ್ಲಿ ಕಾರ್ಯಕ್ರಮ ಮಾಡಿದ್ದೇವೆ. ಪ್ರಮಾಣಪತ್ರ, ಮೆಡಲ್‌ಗಳನ್ನು ನೀಡಲು ಹಣವಿಲ್ಲ ಎಂದು ಹೇಳುತ್ತಿದ್ದು ಸರ್ಕಾರದ ಅನುದಾನ ನೀಡುತ್ತಿಲ್ಲ ಎಂಬುದಕ್ಕೆ ನಿದರ್ಶನವಾಗಿದೆ.

ಸ್ವಂತ ಧನಸಹಾಯ- ಪೌರ ಕಾರ್ಮಿಕರ ಮಕ್ಕಳಿಗೆ 10 ಹಾಗೂ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದವರಿಗೆ ಸ್ವಂತ ಹಣ ದಿಂದ ಧನಸಹಾಯ ಮಾಡುವದಾಗಿ ತಿಳಿಸಿದ ಅವರು ಪೌರಕಾರ್ಮಿಕರ ಕುಟುಂಬದಲ್ಲಿ ಯಾರಾದರೂ ಮೃತ ಪಟ್ಟರೆ ಅವರಿಗೆ 5 ಸಾವಿರ ರೂಗಳನ್ನು ಅಂತ್ಯಸಂಸ್ಕಾರಕ್ಕೆ ನೀಡಲಾಗುವದು ಎಂದು ತಿಳಿಸಿದರು.

ನಗರದ ಅಭಿವೃದ್ಧಿಗೆ ಒಗ್ಗಟ್ಟಾಗಿ – ನಗರಸಭೆಯ ಚುನಾಯಿತ ಎಲ್ಲ ಸದಸ್ಯರು ನಗರದ ಅಭಿವೃದ್ಧಿಗೆ ಒಗ್ಗಟ್ಟಾಗಿ ಶ್ರಮಿಸಬೇಕು ಅತಿ ಬಡ ಕುಟುಂಂಬಗಳಿಗೆ ಬಿಪಿಎಲ್‌ ಕಾರ್ಡ್‌ಗಳು ತಮ್ಮ ವಾರ್ಡಗಳಲ್ಲಿರುವ ಸಮಸ್ಯೆಗಳ ಬಗ್ಗೆ ಗಮನ ತರುವ ಕೆಲಸ ಮಾಡಿದರೆ ತಾವುಕೂಡಾ ಅದಕ್ಕೆ ಸಹಕಾರ ನೀಡುವದಾಗಿ ಹೇಳಿದರು.

ಪೌರಾಯುಕ್ತ ಜ್ಯೋತಿಗಿರೀಶ ಮಾತನಾಡಿ ನಗರದ ದೇಸಾಯಿವೃತ್ತ ಹಾಗೂ ಟಿಪ್ಪು ವೃತ್ತದಲ್ಲಿ ಟ್ರಾಫಿಕ್‌ ಸಿಗ್ನಲ್‌ಗಳ ಅಳವಡಿಕೆ, ಹಿಂದು ರುದ್ರಭೂಮಿ ಹತ್ತಿರ ಹೊಸ ಕಾಂಪ್ಲೆಕ್ಸಗಳ ನಿರ್ಮಾಣ, ಉದ್ಯಾನಗಳ ಅಭಿವೃದ್ಧಿಗೆ ಟೆಂಡರ್‌ ಕರೆಯಲಾಗಿದೆ. ನಗರದಲ್ಲಿ ಅವಶ್ಯವಿರುವ ಕಡೆಗಳಲ್ಲಿ ವಿದ್ಯುತ್‌ ದೀಪಗಳನ್ನು ಅಳವಡಿಸುವದು, ಐಡಿಎಸ್‌ಎಂಟಿಯ ಉಳಿದ ನಿವೇಶನಗಳನ್ನು ಹರಾಜು ಮಾಡುವದು, ಖಾಲಿ ಉಳಿದಿರುವ ನಗರಸಭೆಯ ಅಂಗಡಿಗಳ ಹರಾಜಿಗೆ ಕ್ರಮ ಜರುಗಿಸಲಾಗುವದು, ಎಂದು ತಿಳಿಸಿದರು. ನಗರಸಭೆಯ ಅಧ್ಯಕ್ಷ ಈಶ್ವರ ವಾಳೆಣ್ಣವರ ಮಾತನಾಡಿ, ತಮ್ಮ ಅಧಿಕಾರ ಅವಧಿ ನ.3ಕ್ಕೆ ಮುಕ್ತಾಯವಾಗಲಿದೆ ಎಂದರು ಅವಧಿ ವಿಸ್ತರಣೆಗೆ ಕೋರ್ಟ ಮೊರೆ ಹೋಗಲು ಸದಸ್ಯ ದಿಲಾವರ ಶಿರೋಳ ಠರಾವು ಮಾಡಿಕೊಡಿ ಎಂದು ಪ್ರಶ್ನಿಸಿದರು. ಸಾಮಾನ್ಯ ಸಭೆಗೆ ಒಂದು ತಿಂಗಳ ಅವಧಿ ಬೇಕು ಎಂದು ಪೌರಾಯುಕ್ತರು ಉತ್ತರಿಸಿದರು. ಇ-ಖಾತೆಗಳನ್ನು ಪಡೆಯಲು ಆನ್‌ಲೈನ್‌ ನಲ್ಲಿ ಸರಿಯಾದ ಪ್ರಮಾಣ ಪತ್ರಗಳ ಸಹಿತ ಅರ್ಜಿ ಸಲ್ಲಿಸಬಹುದಾಗಿದೆ, ಆಸ್ತಿ ತೆರಿಗೆ ಪಾವತಿ, ಖಾತಾ ಬದಲಾವಣೆಗೆ ಆನ್‌ಲೈನ್‌ ಅರ್ಜಿಸಲ್ಲಿಸಬಹುದೆಂದು ಮಾಹಿತಿ ನೀಡಿದರು. ಸದಸ್ಯರಾದ ಗುರುಪಾದಪ್ಪ ಮೆಂಡಿಗೇರಿ, ಪರಮಾನಂದ ಗೌರೋಜಿ, ಕುಶಾಲ ವಾಘಮೊರೆ, ಶ್ರೀಧರ ಕೊಣ್ಣೂರ, ಪ್ರಶಾಂತ ಚರಕಿ. ಸುನೀಲ ಸಿಂಧೆ ಮುಂತಾದವರು ಚರ್ಚೆಯಲ್ಲಿ ಭಾಗವಹಿಸಿದರು.

ಸರಿಯಾದ ಪ್ರಮಾಣ ಕೊಡಿ ಸುಳ್ಳು ಆರೋಪ ಬೇಡ ;-

ನಗರಸಭೆ ಸದಸ್ಯೆ ಮಲ್ಲಮ್ಮ ಪಾಯಗೊಂಡ ನಗರಸಭೆಯಲ್ಲಿ ಕೆಲಸ ಮಾಡಿಕೊಡಲು ಲಂಚ ಕೇಳುತ್ತಾರೆ ಎಂದಾಗ ಸಭೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಸರಿಯಾದ ಪ್ರಮಾಣ ಕೊಡಿ ಸುಳ್ಳು ಆರೋಪಗಳನ್ನು ಮಾಡಬೇಡಿ ಎಂದು ಪೌರಾಯುಕ್ತ ತಿಳಿಸಿದರು. ಸರಿಯಾದ ದಾಖಲೆ ಕೊಟ್ಟರೆ ಅಂಥಹ ಅಧಿಕಾರಿಗಳ ವಿರುದ್ದಕೂಡಲೇ ಸೂಕ್ತ ಕ್ರಮ ಕೈಗೊಳ್ಳಲಾಗುವದೆಂದು ತಿಳಿಸಿದರು. 2022ರಲ್ಲಿ  ಪತ್ರಿಕೆಯಲ್ಲಿ ವರದಿ ಪ್ರಕಟವಾಗಿದ್ದರಿಂದ ಮೇಲಾಧಿಕಾರಿಗಳಿಗೆ ಉತ್ತರಿಸಲು ಕಷ್ಟ ಪಡಬೇಕಾಯಿತು. ಸತ್ಯವಾದ ಆರೋಪಗಳನ್ನು ಮಾಡಿ ತಿದ್ದಿಕೊಳ್ಳುತ್ತೇವೆ ವೃಥಾ ಆರೋಪಗಳು ಬೇಡ . ಮಾಧ್ಯಮ ದವರಿದ್ದಾರೆ. ಸಭೆಯ ವಿಷಯಗಳೆಲ್ಲ ಉಳಿದು ಹೋಗಿ ಆರೋಪಗಳು ಮಾತ್ರ ಸುದ್ದಿಯಾಗುತ್ತವೆ ಎಂದು ಸಮಝಾಯಿಸಿ ನೀಡಿದರು. ಇದರಿಂದ ಕೋಪಗೊಂಡ ಸದಸ್ಯೆ ಪಾಯಗೊಂಡ ಸಭಾತ್ಯಾಗ ಮಾಡಿದ ಘಟನೆ ನಡೆಯಿತು.

WhatsApp Group Join Now
Telegram Group Join Now
Share This Article