ಬಳ್ಳಾರಿ : ನಗರದ ಹೃದಯ ಭಾಗದ ನಟರಾಜ್ ಚಿತ್ರಮಂದಿರದ ಎದುರುಗಡೆ ಇರುವ ಹಳೆ ಮುನಿಸಿಪಾಲಿಟಿ ಮಳಿಗೆಗಳನ್ನು ತೆರವುಗೊಳಿಸಲು ಪಾಲಿಕೆ ಅಧಿಕಾರಿಗಳು ನಿನ್ನೆ ಗುಂಡಾ ವರ್ತನೆ ತೋರಿದ್ದಾರೆ ಅಷ್ಟೇ ಅಲ್ಲದೆ ಮಳಿಗೆಗಳ ಶೆಟ್ಟರ್ ಗೇಟ್ಗಳನ್ನು ಮುರಿದು ಹಾಕಿದ್ದಾರೆ ಇದು ಪಾಲಿಕೆಯ ಗುಂಡಾ ವರ್ತನೆಯಾಗಿದೆ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಸಿದಲ್ಲಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಬೇಕೆಂದು ಮಾಜಿ ಸಚಿವ ಬಿ ಶ್ರೀರಾಮುಲು ಮಾಜಿನಗರ ಶಾಸಕ ಸೋಮಶೇಖರ ರೆಡ್ಡಿ ನೇತೃತ್ವದಲ್ಲಿ ಇಂದು ಮಳಿಗೆಗಳ ವ್ಯಾಪಾರಸ್ಥರು ಮುಖ್ಯ ರಸ್ತೆಯಲ್ಲಿ ಧರಣಿಯನ್ನು ನಡೆಸಿದರು.
ನಗರ ಅಭಿವೃದ್ಧಿಯನ್ನು ನಾವು ವಿರೋಧಿಸುವುದಿಲ್ಲ ಆದರೆ ಕಾನೂನಿನ ಪ್ರಕಾರ ವ್ಯಾಪಾರಸ್ಥರಿಗೆ ಮೂರು ತಿಂಗಳ ಮೊದಲು ಖಾಲಿ ಮಾಡುವಂತೆ ನೋಟಿಸ್ ನೀಡಬೇಕಾಗಿತ್ತು ಜೊತೆಗೆ ಇಲ್ಲಿ ನಿರ್ಮಾಣವಾಗಲಿರುವ ವಾಣಿಜ್ಯ ಮಳಿಗೆಗಳಲ್ಲಿ ಅಥವಾ ಪಾಲಿಕೆಗೆ ಸಂಬಂಧಿಸಿದ ಯಾವುದೇ ಮಳಿಗೆಗಳಲ್ಲಿ ವ್ಯಾಪಾರಕ್ಕಾಗಿ ಅನುಕೂಲ ಮಾಡಿ ಕೊಡಲಾಗುವುದೆಂದು ಆಶ್ವಾಸನೆ ನೀಡಬೇಕು ಇದ್ಯಾವುದನ್ನು ಮಾಡದೆ ಪಾಲಿಕೆ ಅಧಿಕಾರಿಗಳು ರಾತ್ರೋರಾತ್ರಿ ವ್ಯಾಪಾರಸ್ಥ ಮಳಿಗೆಗಳ ಗೇಟ್ಗಳನ್ನು ಮುರಿದು ಗೂಂಡಾ ವರ್ತನೆ ಮಾಡಿದ್ದಾರೆ ಇವರ ಮೇಲೆ ಮತ್ತು ಇದಕ್ಕೆ ಬಳಸಿದ ವಾಹನಗಳ ಮೇಲೆ ಪೊಲೀಸರು ಮೊಕದ್ದಮೆಯನ್ನು ದಾಖಲಿಸಬೇಕೆಂದು ಮಾಜಿ ಸಚಿವ ಶ್ರೀರಾಮುಲು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಸೋಮಶೇಖರ ರೆಡ್ಡಿ ಮಾತನಾಡಿ, ಯಾವುದೇ ಅಭಿವೃದ್ಧಿ ಕಾಮಗಾರಿಯನ್ನು ನಡೆಸುವುದು ಮುಖ್ಯವಲ್ಲ ಅದರ ಜೊತೆಗೆ ಮಾನವೀಯತೆಯನ್ನು ಸಹ ಹೊಂದಿರಬೇಕು ಹಲವಾರು ವರ್ಷಗಳಿಂದ ಈ ಮಳಿಗೆಯಲ್ಲಿ ವ್ಯಾಪಾರ ಮಾಡುವ ವ್ಯಾಪಾರಸ್ಥರು ಈ ಮಳಿಗೆಗಳ ತೆರವುನಿಂದ ಬೀದಿಗೆ ಬೀಳಲಿದ್ದಾರೆ ಜೊತೆಗೆ ಅವರ ಕುಟುಂಬಗಳು ಸಹ ಬೀದಿ ಪಾಲಾಗಲಿವೆ ಅಷ್ಟೇ ಅಲ್ಲದೆ ಸಾಲ ಸೋಲ ಮಾಡಿಕೊಂಡು ವ್ಯಾಪಾರ ನಡೆಸುತ್ತಿದ್ದಾರೆ ಏಕಾಏಕಿ ಅವರನ್ನು ತೆರವುಗೊಳಿಸುವುದರಿಂದ ಆರ್ಥಿಕ ನಷ್ಟ ಹೊಂದಿ ಸಾಲಗಾರರಾಗುವ ಅಪಾಯವಿದೆ ಕಾರಣ ಅವರಿಗೆ ಪರ್ಯಾಯ ವ್ಯವಸ್ಥೆಯನ್ನು ಪಾಲಿಕೆ ಅಧಿಕಾರಿಗಳು ಮಾಡಿಕೊಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಹಳೆ ಮುನಿಸಿಪಾಲಿಟಿ ಮಳಿಗೆಗಳಲ್ಲಿ ವ್ಯಾಪಾರ ನಡೆಸುತ್ತಿರುವ ವರ್ತಕರು, ಮಹಾನಗರ ಪಾಲಿಕೆ ಸದಸ್ಯರುಗಳು ಹಲವಾರು ಜನ ಭಾಜಪ ಕಾರ್ಯಕರ್ತರು, ಶ್ರೀರಾಮುಲು ವಾನರ ಸೇನೆಯ ರಾಜ್ಯಧ್ಯಕ್ಷ ನಾರಾಯಣಸ್ವಾಮಿ, ಸಾಮಾಜಿಕ ಹೋರಾಟಗಾರ ಊಳೂರು ಸಿದ್ದೇಶ್ ಸೇರಿದಂತೆ ಹಲವರಿದ್ದರು.