ಬೈಲಹೊಂಗಲ-ಪ್ರಸ್ತುತ ದಿನಮಾನಗಳಲ್ಲಿ ನಮ್ಮ ಸಂಸ್ಕೃತಿ ಆಚರಣೆಗೆ ದುಶ್ಚಟ ಅಡ್ಡಿಯಾಗಿರುವುದನ್ನು ನಾವೆಲ್ಲರೂ ಕಾಣಬಹುದಾಗಿದೆ. ಇದರಿಂದ ಹೊರಬರಬೇಕಿದ್ದಲ್ಲಿ ಧರ್ಮವೊಂದೇ ಸೂಕ್ತ ಮಾರ್ಗವೆಂದು ಚಾಮುಂಡೇಶ್ವರಿ ದೇವಸ್ಥಾನದ ಪ್ರಮುಖ ಹಾಗೂ ಪತ್ರಕರ್ತ ಈಶ್ವರ ಶಿಲ್ಲೇದಾರ ಹೇಳಿದರು.
ಪಟ್ಟಣದ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಕುಲಕರ್ಣಿ ಗಲ್ಲಿಯಲ್ಲಿ ಇತ್ತೀಚಿಗೆ ನಿರ್ಮಾಣಗೊಂಡಿರುವ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ದೀಪೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿ ದೀಪಗಳನ್ನು ಹಚ್ಚಿ ಬಾಳು ಬೆಳಗಿಸುವಂತಹ ಸಂಸ್ಕೃತಿ ನಮ್ಮದಾಗಿದ್ದು,ದುಶ್ಚಟಗಳೆoಬ ಪಿಡುಗು ನಮ್ಮ ಸಂಸ್ಕೃತಿ ಆಚರಣೆಗಳಿಗೆ ಅಡ್ಡಿಯಾಗಿರುವುದು ದುರದೃಷ್ಟಕರ ಸಂಗತಿ.
ಮುಂಬರುವ ಪೀಳಿಗೆಗೆ ಪಾಶ್ಚಿಮಾತ್ಯರ ಮತ್ತಿಗೆ ಬಲಿಯಾಗಿಸದೆ ನಮ್ಮ ಅರ್ಥಪೂರ್ಣ ಆಚರಣೆಗಳ ಅಮೃತವನ್ನು ಉಣಬಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
ಪತ್ರಕರ್ತ ರವಿ ಹುಲಕುಂದ ಮಾತನಾಡಿ ಜಿಲ್ಲೆಯ ಪತ್ರಿಕಾ ಬಳಗದ ಸಹಕಾರದಿಂದಾಗಿ ಉನ್ನತ ಸ್ಥಾನ ಲಭಿಸಿದ್ದು, ಅಧಿಕಾರದ ಅವಧಿಯಲ್ಲಿ ಪತ್ರಕರ್ತರ ನ್ಯಾಯಯುತ ಹಕ್ಕಿಗಾಗಿ ಶ್ರಮಿಸುವುದಾಗಿ ತಿಳಿಸಿದರು.
ಸಾನಿಧ್ಯ ವಹಿಸಿದ್ದ ವೇ.ಮೂ. ವಿರೇಶ್ ನಂದಳ್ಳಿಮಠ ಶಾಸ್ತ್ರಿಗಳು ಮಾತನಾಡಿ ನಾಡ ದೇವತೆ ಚಾಮುಂಡೇಶ್ವರಿ ಅಮ್ಮನವರ ಆರಾಧನೆಯಿಂದ ಸರ್ವ ಇಷ್ಟಾರ್ಥಗಳನ್ನು ಪಡೆದು ನೆಮ್ಮದಿ ಬದುಕು ತಮ್ಮದಾಗಿಸುವಂತೆ ಕರೆ ನೀಡಿದರು.
ಇದೇ ವೇಳೆ ನೂರಾರು ಭಕ್ತರ ಸಮ್ಮುಖದಲ್ಲಿ ದೇವಸ್ಥಾನದಲ್ಲಿ ದೀಪೋತ್ಸವ ನೆರವೇರಿಸಲಾಯಿತು.
ಪ್ರಥಮ ವರ್ಷದ ದೀಪೋತ್ಸವದ ಪ್ರಯುಕ್ತ ಪತ್ರಕರ್ತರಾದ ಕುಮಾರ ರೇಶ್ಮಿ, ರವಿಕುಮಾರ ಹುಲಕುಂದ, ಶಿವು ಜೋಳದ ಅವರನ್ನು ಸನ್ಮಾನಿಸಲಾಯಿತು.
ಉಳವಪ್ಪ ಶಿಲ್ಲೇದಾರ,ಮಹಾಂತೇಶ ಅಂಬಡಗಟ್ಟಿ,ಸಂಗಮೇಶ ಹುಲಗನ್ನವರ,ರಾಮು ರಜಪೂತ, ಕಲ್ಮೇಶ ದೇಮಕ್ಕನವರ,ಸಿದ್ದು ಶಿರವಂತಿ, ಮಂಜು ಒರ್ಕಿ, ಆನಂದ ಮರಡಿ, ಸುರೇಶ ಹೋಟಿ, ಮಂಜುನಾಥ್ ಹಂಪಿಹೊಳಿ,ಸಾಹಿಲ್ ಪಕಾಲಿ, ಪ್ರವೀಣ್ ವ್ಯಾಪಾರಿ ಸೇರಿದಂತೆ ಭಕ್ತರು ಇದ್ದರು.


