ಬೇಲೂರು, ಮೇ 13: ಪಾಶ್ಚತ್ಯರ ಅನುಕರಣೆಯನ್ನು ಬಿಟ್ಟು, ನಮ್ಮ ಪ್ರಾಚೀನ ಶ್ರೀಮಂತ ಪರಂಪರೆಯನ್ನು ಇಂದಿನ ಯುವಜನರು ಎತ್ತಿ ಹಿಡಿಯಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಕರೆ ನೀಡಿದ್ದಾರೆ.
ಹಳೆಬೀಡು ಹೋಬಳಿ, ಗೋಣಿಸೋಮನಹಳ್ಳಿಯ ಶ್ರೀ ಹುಲಿಕಲ್ಲು ವೀರಭದ್ರೇಶ್ವರಸ್ವಾಮಿ ದೇವಸ್ಥಾನದ ದಶಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕರುನಾಡನ್ನಾಳಿದ ಹೊಯ್ಸಳರು ಶಿಲೆಯಲ್ಲಿ ಕಲೆಯನ್ನು ಅರಳಿಸಿದ್ದಾರೆ. ಕಲಾಪರಂಪರೆಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಕರ್ನಾಟಕದ ಪರಂಪರೆ ಶ್ರೀಮಂತವಾಗಿದ್ದು, ಇದನ್ನು ಇಂದಿನ ಯುವಜನರಿಗೆ ತಿಳಿಹೇಳುವ ಅಗತ್ಯವಿದೆ ಎಂದರು.
ಸರ್ವರಿಗೂ ಸಮಪಾಲು, ಸಮಸಮಾಜದ ಕಲ್ಪನೆಯನ್ನು ಬಸವಾದಿ ಶರಣರು 12ನೇ ಶತಮಾನದಲ್ಲೇ ಪ್ರತಿಪಾದಿಸಿದರು, ಸಾಮಾಜಿಕ ಬದಲಾವಣೆಗೆ ಅವರು ನೀಡಿದ ಕೊಡುಗೆ ಅನುಪಮವಾದ್ದು ಎಂದ ಅವರು ಆಧುನಿಕ ಕರ್ನಾಟಕದ ಪ್ರಗತಿಗೆ ವೀರಶೈವ ಲಿಂಗಾಯತ ಮಠ ಮಾನ್ಯಗಳು ನೀಡಿರುವ ಕೊಡುಗೆಯೂ ಅನುಪಮವಾದ್ದು ಎಂದರು.
ಯಾವುದೇ ಜಾತಿ, ಧರ್ಮ, ಜನಾಂಗದ ಭೇದವಿಲ್ಲದೆ ಸರ್ವರಿಗೂ ಆಶ್ರಯ, ಅನ್ನ, ಅಕ್ಷರವೆಂಬ ತ್ರಿವಿಧ ದಾಸೋಹ ಮಾಡುತ್ತಿರುವ ನಮ್ಮ ಮಠ ಮಾನ್ಯಗಳು ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿವೆ ಎಂದರು.
ಸಂಸ್ಕೃತಿ ಬೆಳೆಸಲು ಕರೆ:ಮಕ್ಕಳಿಗೆ ಸಂಸ್ಕೃತಿಯ ಪರಿಚಯ ಮಾಡಿಸಬೇಕು. ಇಂದು ಯುವಜನರು ಮದ್ಯ, ಮಾದಕ ದ್ರವ್ಯ ವ್ಯಸನಿಗಳಾಗುತ್ತಿದ್ದಾರೆ. ತಾಯಂದಿರು ಮಕ್ಕಳಿಗೆ ಬಾಲ್ಯದಿಂದಲೇ ವಚನಗಳನ್ನು ಕಲಿಸಿದರೆ ಜೀವನದರ್ಶನ ಆಗುತ್ತದೆ. ಮಕ್ಕಳ ಬದುಕು ಹಸನಾಗುತ್ತದೆ ಎಂದರು.
ಸುಂದರ ಬದುಕಿಗೆ ಸೋಪಾನ ಅರಣ್ಯ: ಅರಣ್ಯ ಉಳಿದರಷ್ಟೇ ಮಾನವ ಉಳಿಯಲು ಸಾಧ್ಯ ಎಂದು ಪ್ರತಿಪಾದಿಸಿದ ಈಶ್ವರ ಖಂಡ್ರೆ, ಕಾಡಿದ್ದರೆ ಮಳೆ ಆಗುತ್ತದೆ, ಕಾಡಿದ್ದರೆ ಹಸಿರು ಹೊದಿಕೆ ಹೆಚ್ಚುತ್ತದೆ, ಈ ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಕಾಲಘಟ್ಟದಲ್ಲಿ ಸುಂದರ ಬದುಕಿಗೆ ಸೋಪಾನವಾಗುತ್ತದೆ ಎಂದರು.
ನಮ್ಮ ಪೂರ್ವಿಕರು ಬೆಟ್ಟ, ಗುಡ್ಡಗಳ ಮೇಲೆ ದೇವಾಲಯ ನಿರ್ಮಿಸುವ ಮೂಲಕ ಪ್ರಕೃತಿ ಪರಿಸರ ಉಳಿಸಿದ್ದಾರೆ. ಬೆಟ್ಟದ ಮೇಲೆ ದೇವಾಲಯ ಇರುವ ಕಾರಣ ಆ ಗುಡ್ಡಗಳನ್ನು, ಬೆಟ್ಟಗಳನ್ನು ಯಾರೂ ನಾಶ ಮಾಡಿಲ್ಲ. ನಮ್ಮ ಪೂರ್ವಿಕರ ದೂರದರ್ಶಿತ್ವ ಅಮೂಲ್ಯವಾದ್ದು ಎಂದರು.
ತಾವು ಅರಣ್ಯ ಸಚಿವರಾದ ತರುವಾಯ 7ನೇ ಬಾರಿಗೆ ಹಾಸನ ಜಿಲ್ಲೆಗೆ ಬಂದಿದ್ದು, ಇಲ್ಲಿನ ಮಾನವ- ವನ್ಯಜೀವಿ ಸಂಘರ್ಷವನ್ನು ನಿಯಂತ್ರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸತ್ ಸದಸ್ಯ ಶ್ರೇಯಸ್ ಪಟೇಲ್, ಶಾಸಕ ಎಚ್.ಕೆ. ಸುರೇಶ್, ಮಾಜಿ ಶಾಸಕ ಲಿಂಗೇಶ್ ಮತ್ತಿತರರು ಪಾಲ್ಗೊಂಡಿದ್ದರು. ತಿಪಟೂರು ತಾಲೂಕು ಕೆರಗೋಡಿ ರಂಗಾಪುರದ ಶ್ರೀ ಗುರುಪರದೇಶಿಕೇಂದ್ರ ಮಹಾಸ್ವಾಮೀಜಿ, ಪುಷ್ಪಗಿರಿ ಮಹಾ ಸಂಸ್ಥಾನ, ಹಳೇಬೀಡಿನ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಮೊದಲಾದವರು ಸಾನ್ನಿಧ್ಯ ವಹಿಸಿದ್ದರು.