ಬಳ್ಳಾರಿ,ಆ.06: ಕಂಪ್ಲಿ ಪುರಸಭೆಯ ವ್ಯಾಪ್ತಿಯಲ್ಲಿ ಬರುವ ವಿವಿಧ ಬಡಾವಣೆ(ನಗರ)ಗಳ ಮುಖ್ಯ ರಸ್ತೆಗಳಲ್ಲಿನ ವೃತ್ತಗಳನ್ನು ಹೊಸದಾಗಿ ನಾಮಕರಣ ಮಾಡಲು ಪಟ್ಟಣದ ವಿವಿಧ ಸಮಾಜದವರು ಮನವಿ ಸಲ್ಲಿಸಿದ್ದು, ನಾಮಕರಣ ಕುರಿತು ಯಾರಿಂದಲಾದರೂ ಆಕ್ಷೇಪಣೆಗಳಿದ್ದಲ್ಲಿ ಲಿಖಿತ ಮತ್ತು ಸಮಂಜಸ ದಾಖಲೆಗಳೊಂದಿಗೆ ಪ್ರಕಟಣೆಗೊಂಡ 30 ದಿನದೊಳಗಾಗಿ ಕಂಪ್ಲಿ ಪುರಸಭೆ ಕಚೇರಿಗೆ ಸಲ್ಲಿಸಬಹುದು.
ಕಂಪ್ಲಿ ಪಟ್ಟಣದ ನಟರಾಜ ಕಲಾ ಮಂದಿರದ ಮುಂಭಾಗದಲ್ಲಿರುವ ಇರುವ ವೃತ್ತವನ್ನು ‘ದೇವರ ದಾಸಿಮಯ್ಯ ವೃತ್ತ’ ಎಂದು ನಾಮಕರಣ, ವಾರ್ಡ್ ನಂ.17 ರ ನಟರಾಜ ಕಲಾ ಮಂದಿರದ ಮುಂಭಾಗದಲ್ಲಿ ಇರುವ ಕಮಾನಿಗೆ ‘ಶ್ರೀ ಚೌಡೇಶ್ವರ ಮಹಾದ್ವಾರ’ ಎಂದು ನಾಮಕರಣ, ಪಟ್ಟಣದ ವಿನಾಯಕ ನಗರದ 05 ನೇ ಅಡ್ಡರಸ್ತೆಯ ಚತುರ್ಮುಖ ರಸ್ತೆಗೆ ‘ಶ್ರೀ ಮಹಾಯೋಗಿ ವೇಮನ ಮತ್ತು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ’ ವೃತ್ತ ಎಂದು ನಾಮಕರಣ, ಪಟ್ಟಣದ 05 ನೇ ವಾರ್ಡ್ನ್ನು ‘ಬೀರಲಿಂಗೇಶ್ವರ ನಗರ’ ಎಂದು ಸರ್ಕಾರದ ಸುತ್ತೋಲೆಗಳು ಮತ್ತು ಮಾರ್ಗಸೂಚಿ ಪ್ರಕಾರ ನಾಮಕರಣ ಮಾಡಲು ಉದ್ದೇಶಿಸಲಾಗಿದ್ದು, ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಬಹುದು. ಅವಧಿ ಮೀರಿ ಬಂದ ಮನವಿ ಅಥವಾ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಕಂಪ್ಲಿ ಪುರಸಭೆಯ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.