ಸೂಡಿ ಗ್ರಾಮದಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಸ್ವಚ್ಛತೆಯೊಂದಿಗೆ ಸ್ವಾತಂತ್ರ್ಯ ಅಭಿಯಾನ

Ravi Talawar
ಸೂಡಿ ಗ್ರಾಮದಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಸ್ವಚ್ಛತೆಯೊಂದಿಗೆ ಸ್ವಾತಂತ್ರ್ಯ ಅಭಿಯಾನ
WhatsApp Group Join Now
Telegram Group Join Now

ಗಜೇಂದ್ರಗಡ: ೭೯ ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಸ್ವಚ್ಛತೆಯೊಂದಿಗೆ ಸ್ವಾತಂತ್ರ್ಯ ದಿನಾಚರಣೆ ಅಭಿಯಾನ ನಡೆಸಲಾಗುತ್ತಿದೆ. ತಾಲೂಕಿನ ಸೂಡಿ ಗ್ರಾಪಂ ವ್ಯಾಪ್ತಿಯಲ್ಲಿ ಇಂದು ಖುದ್ದಾಗಿ ತಾಲೂಕು ಪಂಚಾಯತ ಇಒ ಚಂದ್ರಶೇಖರ ಕಂದಕೂರು ಮತ್ತು ಎಡಿ ಬಸವರಾಜ ಬಡಿಗೇರ ಅವರು ಕಸದ ವಾಹನ ಡ್ರೈವಿಂಗ್ ಮಾಡಿ ಸೂಡಿ ಗ್ರಾಮಸ್ಥರಲ್ಲಿ ಸ್ವಚ್ಛತೆ ಅರಿವು ಮೂಡಿಸಿದಷ್ಟೇ ಅಲ್ಲದೆ ಮನೆಗಳಿಂದ ಸ್ವತಃ ಒಣ ಕಸ ಮತ್ತು ಹಸಿ ಕಸ ಪ್ರತ್ಯೇಕಿಸಿ ಕಸದವಾಹನಕ್ಕೆ ಕಸ ಹಾಕುವುದರ ಮೂಲಕ ಸೂಡಿ ಗ್ರಾಮದಲ್ಲಿ ಸಾರ್ವಜನಿಕರಿಗೆ ಜಂಟಿಯಾಗಿ ಸ್ವಾತಂತ್ರ್ಯ ದಿನಾಚರಣೆಯ ಮಹತ್ವ ಸಾರುವ ಮೂಲಕ ಸ್ವಚ್ಛತೆಯ ಬಗ್ಗೆ ತಿಳುವಳಿಕೆ ಮೂಡಿಸಿದರು.

ಸೂಡಿ ಗ್ರಾಮದ ವಿದ್ಯಾನಗರ, ಶೆಟ್ಟರ ಕಾಲೋನಿ, ಬಜಾರ್ ಮುಖ್ಯ ರಸ್ತೆ, ಬಡಿಕಟ್ಟೆ ಓಣಿ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಸಂಚರಿಸುವುದರ ಮೂಲಕ ಸ್ವಾತಂತ್ರ್ಯ ದಿನಾಚರಣೆ ಸಂದೇಶ ಸಾರುವುದರೊಂದಿಗೆ ಸ್ವಚ್ಛತೆಗಾಗಿ ಗ್ರಾಪಂ ಸಿಬ್ಬಂದಿ ಜೊತೆ ಕೈಜೋಡಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿಕೊಂಡರು. ಪ್ರತಿ ಮನೆಗಳಿಗೆ ತೆರಳಿದ ಇಒ ಮತ್ತು ಎಡಿ ಅವರು, ೭೯ ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿರುವ ನಾವೆಲ್ಲರೂ ನಮ್ಮ ಗ್ರಾಮವನ್ನು ಕಸಮುಕ್ತ ಮಾಡೋಣ ಎಂದರು. ಮನೆಯ ಗ್ರಹಿಣಿಯರನ್ನು ಭೇಟಿಯಾಗಿ ಹಸಿ ಕಸ ಮತ್ತು ಒಣ ಕಸ ಪ್ರತ್ಯೇಕಗೊಳಿಸಿ ಕಸದ ವಾಹನದಲ್ಲೇ ಕಸ ಹಾಕಿ ಅಂತ ಮನವಿ ಮಾಡಿಕೊಂಡರು. ಅಲ್ಲದೇ ಗ್ರಾಮದ ಕಿರಾಣಿ ಅಂಗಡಿ ಮಾಲೀಕರನ್ನು ಭೇಟಿಯಾಗಿ ಗುಟ್ಕಾ, ದಿನಸಿ ಸಾಮಾಗ್ರಿಗಳ ಪ್ಲಾಸ್ಟಿಕ್ ಕವರ್ ಗಳನ್ನು ಎಲ್ಲೆಂದರಲ್ಲಿ ಬೀಸಾಡದೆ ಕಸದಬುಟ್ಟಿಯಲ್ಲಿ ಸಂಗ್ರಹಿಸಿ ಕಸದ ವಾಹನ ಬಂದಾಗ ಸ್ವಚ್ಛತೆಯಿಂದ ಹಾಕಿ ಅಂತ ತಿಳುವಳಿಕೆ ಮೂಡಿಸಿದರು.

ಅಗಸ್ಟ್-೦೮ ರಿಂದ ೧೫ ರವರೆಗೆ ನಡೆಯುತ್ತಿರುವ ಈ ಅಭಿಯಾನದಡಿ ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಬಗ್ಗೆ ತಿಳುವಳಿಕೆ ಮೂಡಿಸುವ ಕಾರ್ಯ ನಡೆಯುತ್ತಿದೆ. ಅದರಂತೆ ಸೂಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಇಒ ಕಂದಕೂರ ಅವರು ಆರೋಗ್ಯ ಕೇಂದ್ರದ ವಾತಾವರಣವನ್ನು ಪರಿಶೀಲಿಸಿದರು. ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಅಸ್ಪತ್ರೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಸೂಚಿಸಿದರು. ಆಸ್ಪತ್ರೆಯ ಬಳಿಯ ಶಿಥೀಲಾವಸ್ಥೆಯಲ್ಲಿರುವ ನೀರಿನ ಟ್ಯಾಂಕ್ ನ್ನು ಪರಿಶೀಲಿಸಿದ ಇಒ ಅವರು, ಸಂಬಂಧಿಸಿದ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಸಾರ್ವಜನಿಕರ ಹಿತದೃಷ್ಟಿಯಿಂದ ನೀರಿನ ಟ್ಯಾಂಕ್ ಗುಣಮಟ್ಟ ಪರಿಶೀಲಿಸಿ ವರದಿ ನೀಡುವಂತೆ ತಾಕೀತು ಮಾಡಿದರು.

ಈ ಸಂದರ್ಭದಲ್ಲಿ ಸೂಡಿ ಗ್ರಾಮ ಪಂಚಾಯತ ಪಿಡಿಒ ಅಶೋಕ್ ಕಂಬಿ, ಗ್ರಾಪಂ ಅಧ್ಯಕ್ಷೆ ಶ್ರೀಮತಿ ಆಶಾಬೇಗಂ ಮೂಕಾಶಿ, ಸದಸ್ಯರಾದ ರೇಣುಕಾ ಹರಮನಿ, ಶಾಂತವ್ವ ಕದುರಿಕೋಟೆ, ಕೆ.ಶರಣಬಸವ, ರುದ್ರಪ್ಪ ಮಾರನಬಸರಿ, ಚೆನ್ನಪ್ಪ ನೂಲ್ವಿ, ಎನ್.ಆರ್.ಎಲ್.ಎಂ ಸಿಬ್ಬಂದಿ ವರ್ಗ ಹಾಗೂ ಸೂಡಿ ಗ್ರಾಪಂ ಸಿಬ್ಬಂದಿ ವರ್ಗ ಹಾಜರಿದ್ದರು.

WhatsApp Group Join Now
Telegram Group Join Now
Share This Article