ಅವರಾದಿ ಗ್ರಾಮದಲ್ಲಿ ನೂತನ ಪ್ರೌಢಶಾಲೆ ಉದ್ಘಾಟನೆ; ಐತಿಹಾಸಿಕ ಕಿತ್ತೂರು ತಾಲೂಕಿನಲ್ಲಿ ಹೊಸ ಅದ್ಯಾಯ

Hasiru Kranti
ಅವರಾದಿ ಗ್ರಾಮದಲ್ಲಿ ನೂತನ ಪ್ರೌಢಶಾಲೆ ಉದ್ಘಾಟನೆ; ಐತಿಹಾಸಿಕ ಕಿತ್ತೂರು ತಾಲೂಕಿನಲ್ಲಿ ಹೊಸ ಅದ್ಯಾಯ
WhatsApp Group Join Now
Telegram Group Join Now

ಚನ್ನಮ್ಮನ ಕಿತ್ತೂರು: “ಗ್ರಾಮದ ಯೋಜನೆಗಳಿಗೆ ಅನುದಾನದಲ್ಲಿ ಕೊರತೆಯಾಗಬಹುದು, ಆದರೆ ಶಾಲೆಯ ಶೈಕ್ಷಣಿಕ ಯೋಜನೆಗಳಿಗೆ ಅಗತ್ಯವಿರುವ ಅನುದಾನವನ್ನು ಯಾವುದೇ ರೀತಿಯಲ್ಲಿ ಕಡಿಮೆ ಮಾಡುವುದಿಲ್ಲ.” ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು

ಕಿತ್ತೂರು ತಾಲೂಕಿನ ಅವರಾದಿ ಗ್ರಾಮದಲ್ಲಿ ನೂತನ ಪ್ರೌಢಶಾಲೆಯ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿ ಅವರು ಮಾತನಾಡಿದರು.

ಹಲವು ವರ್ಷಗಳಿಂದ ಅವರಾದಿಯಲ್ಲಿ ಪ್ರೌಢಶಾಲೆ ಸ್ಥಾಪನೆಗೆ ಮಾಡಿದ ಪ್ರಯತ್ನ ಇಂದು ಫಲ ನೀಡಿದೆ. ಮಕ್ಕಳ ಭವಿಷ್ಯ ಉಜ್ವಲವಾಗಬೇಕಾದರೆ ಪ್ರಾಥಮಿಕ ಶಿಕ್ಷಣದಿಂದಲೇ ಗಟ್ಟಿಯಾದ ಫೌಂಡೇಶನ್‌ಕೊಡಬೇಕು. ಶಾಲೆಗೆ ಯಾವುದೇ ಕೊರತೆಯಾಗದಂತೆ ಎಲ್ಲ ಸೌಲಭ್ಯಗಳನ್ನು ಒದಗಿಸಲು ನಾನು ಸಿದ್ಧನಿದ್ದೇನೆ. ಶಿಕ್ಷಕರ ಜವಾಬ್ದಾರಿಯ ಕುರಿತು ಒತ್ತಿ ಹೇಳಿದ ಅವರು, “ಕೆಲವು ಶಿಕ್ಷಕರು ಶಾಲೆ ಬಿಡುವುದಿಕ್ಕಿಂತ ಮುಂಚೆ ಕಿತ್ತೂರು ಪಟ್ಟಣದ ಅಂಗಡಿ ಮುಗ್ಗಟ್ಟುಗಳ ಮುಂದೆ ಕಾಣಿಸಿಕೊಳ್ಳುತ್ತಿದ್ದಾರೆ ಅಂಥವರನ್ನು ಕರೆದು ಬುದ್ದಿ ಹೇಳಿ ಕೇಳದಿದ್ದರೆ ಸಸ್ಪೆಂಡ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ರಾಜಕೀಯ ಹಸ್ತಕ್ಷೇಪ ಮಾಟದೇ ಅವರಾದಿ ಪ್ರೌಢಶಾಲೆಗೆ ಶಿಕ್ಷಕರನ್ನ ನೇಮಕ ಮಾಡಿ ಎಂದರು.

ಪ್ರಾಸ್ತಾವಿಕವಾಗಿ ಕೆ.ಎಮ್.ಎಫ್‌ನಿರ್ದೇಶಕ ಡಾ. ಬಸವರಾಜ ಪರವಣ್ಣವರ ಮಾತನಾಡಿ, “2005 ರಿಂದ ಅವರಾದಿ ಗ್ರಾಮಕ್ಕೆ ಪ್ರೌಢಶಾಲೆ ಪ್ರಾರಂಭಿಸಲು ಸತತ ಪ್ರಯತ್ನ ಮಾಡಿದ್ದೇವೆ ಇಂದು ಶಾಸಕ ಬಾಬಾಸಾಹೇಬ ಪಾಟೀಲ ಅವರ ಸತತ ಪರಿಶ್ರಮದಿಂದ ನಮ್ಮ ಗ್ರಾಮದಲ್ಲಿ ನೂತನ ಪ್ರೌಢಶಾಲೆ ಉದ್ಘಾಟನೆಯಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಪ್ರೌಢಶಾಲೆಗಳು ಕಾರ್ಯಾರಂಭ ಮಾಡುವುದರಿಂದ ವಿಶೇಷವಾಗಿ ಹೆಣ್ಣುಮಕ್ಕಳಿಗೆ ಶಿಕ್ಷಣ ಪಡೆಯಲು ಅನುಕೂಲವಾಗುತ್ತದೆ ಎಂದರು.

ಡಿಡಿಪಿಐ ಲೀಲಾವತಿ ಹಿರೇಮಠ ಮಾತನಾಡಿ ಅವರು ಮಾತನಾಡಿ ಕಳೆದ ಏಳು ವರ್ಷಗಳ ಹಿಂದೆ ನಾನು ಅವರಾದಿಯಲ್ಲಿ ಪ್ರೌಢಶಾಲೆಯ ಅಗತ್ಯತೆಯನ್ನು ವಿವರವಾಗಿ ದಾಖಲಿಸಿದ್ದೆ. ಇಂದು ಈ ಕಾರ್ಯಕ್ರಮದಲ್ಲಿ ಆ ಖುಷಿಯನ್ನು ಹಂಚಿಕೊಳ್ಳಲು ಬಂದಿದ್ದೇನೆ. ಕಳೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕಿತ್ತೂರು ತಾಲೂಕು ಬೆಳಗಾವಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆಯಲು ಶಾಸಕ ಬಾಬಾಸಾಹೇಬ್ ಪಾಟೀಲ ಮತ್ತು ಬಿಇಓ ಚನ್ನಬಸಪ್ಪ ತುಬಾಕದ ಅವರ ಸತತ ಶ್ರಮ ಕಾರಣವಾಗಿದ್ದು ಮುಂಬರುವ ದಿನಗಳಲ್ಲಿ ಕಿತ್ತೂರು ತಾಲೂಕಿನ ಶೈಕ್ಷಣಿಕ ಪ್ರಗತಿ ನೂರಕ್ಕೆ ನೂರರಷ್ಟು ಧಾಖಲಾಗಲಿದೆ ಎಂದರು.

ಪಂಚಾಕ್ಷರಿ ಸ್ವಾಮಿಜಿ ಮಾತನಾಡಿ, “ಈ ಶಾಲೆಯ ಉದ್ಘಾಟನೆಯಿಂದ ಮಕ್ಕಳು, ಶಿಕ್ಷಕರು ಮಾತ್ರವಲ್ಲ, ಇಡೀ ಗ್ರಾಮವೇ ಸಂತೋಷದಲ್ಲಿದೆ. ಮಕ್ಕಳಿಗೆ ಮನೆಯಿಂದ ಪ್ರೋತ್ಸಾಹ, ಶಾಲೆಯಿಂದ ಗುಣಮಟ್ಟದ ಶಿಕ್ಷಣ ಸಿಕ್ಕರೆ ಅವರ ಭವಿಷ್ಯ ಉಜ್ವಲವಾಗುತ್ತದೆ,” ಎಂದರು.

ರಾಜಗುರು ಸಂಸ್ಥಾನ ಕಲ್ಮಠದ ಶ್ರೀ ರಾಜಯೋಗೀಂದ್ರ ಮಹಾಸ್ವಾಮಿಗಳು ತಮ್ಮ ಆಶೀರ್ವಚನದಲ್ಲಿ ಹತ್ತು ದೇವಸ್ಥಾನ ಕಟ್ಟುವ ಬದಲು ಒಂದು ಶಾಲೆ ಕಟ್ಟುವುದು ಉತ್ತಮ. ಜಗತ್ತನ್ನು ಅಕ್ಷರವೇ ಆಳುತ್ತದೆ, ಆದ್ದರಿಂದ ಎಲ್ಲರೂ ಶಿಕ್ಷಣ ಪಡೆಯಬೇಕು. ಪಾಲಕರು ಶಾಲೆಗೆ ಭೇಟಿ ನೀಡಿ ಮಕ್ಕಳ ಶಿಕ್ಷಣದ ಗುಣಮಟ್ಟವನ್ನು ಗಮನಿಸಬೇಕು ಎಂದರು.

ಶಾಲೆಯ ಉದ್ಘಾಟನ ಮೆರವಣಿಗೆಯಲ್ಲಿ ವರ್ಣರಂಜಿತ ಬಲೂನುಗಳಿಂದ ಅಲಂಕೃತವಾದ ಚಕ್ಕಡಿಗಳಲ್ಲಿ ಮಕ್ಕಳು, ಶಿಕ್ಷಕರು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕುಳಿತು‌ ಶಾಲೆಗೆ ಬಂದರು. ಈ ದೃಶ್ಯವು ನೋಡುಗರ ಗಮನವನ್ನು ಸೆಳೆಯಿತು. ಗ್ರಾಮಸ್ಥರು ಜಾತ್ರೆಯಂತೆ ಶಾಲಾ ಉದ್ಘಾಟನಾ ಕಾರ್ಯಕ್ರಮವನ್ನು ಆಚರಿಸಿದರು, ಮತ್ತು ಮಕ್ಕಳು ವಿವಿಧ ಬಣ್ಣದ ಉಡುಪುಗಳನ್ನು ಧರಿಸಿ ಸಂಭ್ರಮಿಸಿದರು. ಶಾಲಾ ಆವರಣದಲ್ಲಿ ಶಾಸಕರು, ಗಣ್ಯಮಾನ್ಯರು ಮತ್ತು ರೈತರ ಜೊತೆ ಶಾಲಾ ಮಕ್ಕಳು ಮತ್ತು ಅಭಿಮಾನಿಗಳು ಸೆಲ್ಪಿ ತೆಗೆದುಕೊಂಡರು

ಕಾರ್ಯಕ್ರಮದಲ್ಲಿ ನಿರ್ಮಲಾ ಕಲ್ಲಿ ಪ್ರಾರ್ಥನಾ ಗೀತೆ ಹಾಡಿದರು. ರೇಣುಕಾ ಕರವೀಣ ಮತ್ತು ಸಂಗಡಿಗರು “ಶರಣ ಸಂಸ್ಕೃತಿ ಕನ್ನಡ ನಾಡಿದು” ಎಂಬ ಸ್ವಾಗತ ಗೀತೆಯನ್ನು ಸುಶ್ರಾವ್ಯವಾಗಿ ಪ್ರಸ್ತುತಪಡಿಸಿದರು. ಮುಖ್ಯೋಪಾಧ್ಯಾಯ ಎಸ್. ಆರ್. ದಿನ್ನಿಮನಿ ಸ್ವಾಗತಿಸಿದರು.

ಈ ವೇಳೆ ತಾಲೂಕಾ ದಂಡಾಧಿಕಾರಿ ರವೀಂದ್ರ ಹಾದಿಮನಿ, ಸಿಪಿಐ ಶೀವಾನಂದ ಗುಡಗನಟ್ಟಿ, ತಾಲೂಕಾ ಕಾರ್ಯ ನಿರ್ವಾಹಕ ಅಧಿಕಾರಿ ಮಹೇಶ ಹೂಲಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಪ್ರಕಾಶ ಮೆಳವಂಕಿ, ಗ್ರಾಪಂ ಅಧ್ಯಕ್ಷೆ ಮಹಾದೇವಿ ಪಾಟೀಲ, ಪಿಡಿಓ ಶಿವಲಿಂಗಯ್ಯಾ ಗುರವೈನವರ, ಎಸ್.ಡಿ.ಎಮ್.ಸಿ ಅಧ್ಯಕ್ಷ ಬಸವರಾಜ ಪರವಣ್ಣವರ, ಸಿಆರ್‌ಪಿ ಎಸ್‌ಎಚ್‌ಪಾಟೀಲ, ಅಶೋಕ ಅಳ್ನಾವರ, ಉಮೇಶ ಹುಂಬಿ, ಚಿದಾನಂದ ಪರವಣ್ಣವರ ಸೇರಿಂತೆ ಶಾಲೆಯ ಸಹ ಶಿಕ್ಷಕರು ಮತ್ತು ಗ್ರಾಮಸ್ಥರು ಇದ್ದರು.

WhatsApp Group Join Now
Telegram Group Join Now
Share This Article