ಬೈಲಹೊಂಗಲ: ಈ ಭಾಗದ ಜನತೆ ಅನುಕೂಲಕ್ಕಾಗಿ ಸುಸಜ್ಜಿತವಾದ ಮಲಪ್ರಭಾ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ನಾಳೆ ಜೂ. 22 ರಂದು ಮುಂಜಾನೆ 10.30 ಕ್ಕೆ ಪಟ್ಟಣದ ಸೋಮವಾರ ಪೇಟೆಯ ಶ್ರೀ ದಾನಮ್ಮದೇವಿ ದೇವಸ್ಥಾನದ ಹತ್ತಿರ ಅದ್ದೂರಿಯಾಗಿ ಜರುಗಲಿದೆ ಎಂದು ಎಲುವು ಕೀಲು ರೋಗ ಶಸ್ತ್ರಜ್ಞ ಡಾ| ಮಂಜುನಾಥ ಮುದಕನಗೌಡರ ಹೇಳಿದರು.ಅವರು ಗುರುವಾರ ಪಟ್ಟಣದ ನೂತನ ಮಲಪ್ರಭಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಪಟ್ಟಣದಲ್ಲಿ ಕಳೆದ 13 ವರ್ಷಗಳಿಂದ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವ ಮೂಲಕ ಆಸ್ಪತ್ರೆ ಮನೆ ಮಾತಾಗಿದ್ದು, 12 ಗುಂಟೆ ಜಾಗೆಯಲ್ಲಿ ನಿರ್ಮಿಸಿದ ನಮ್ಮನೂತನ 100 ಹಾಸಿಗೆಯ ಸುಸಜ್ಜಿತ ಆಸ್ಪತ್ರೆಯಲ್ಲಿ ಎಲ್ಲ ತರಹದ ಚಿಕಿತ್ಸೆಗೆ ಸಕಲ ಸೌಲಭ್ಯ ನೀಡಲು ಸಿದ್ಧತೆ ಕೈಗೊಳ್ಳಲಾಗಿದೆ. ಸುಸಜ್ಜಿತವಾದ ಹೆರಿಗೆ ವಿಭಾಗ, ಹೈಟೆಕ್ ಶಸ್ತ್ರ ಚಿಕಿತ್ಸಾ ನಿಗಾ ಘಟಕ, 24X7 ತುರ್ತು ನಿಗಾ ಸೇವೆ ಇನ್ನಿತರ ಸೌಲಭ್ಯ ದೊರಕಲಿದೆ. ಅಲ್ಲದೇ ಸರ್ಕಾರದ ಆರೋಗ್ಯ ಯೋಜನೆಗಳನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ಈ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಉದ್ಘಾಟನಾ ಸಮಾರಂಭದ ಸಾನ್ನಿಧ್ಯವನ್ನು ಸುಕ್ಷೇತ್ರ ಇಂಚಲದ ಡಾ.ಶಿವಾನಂದ ಭಾರತಿ ಸ್ವಾಮೀಜಿ, ಮುರಗೋಡದ ನೀಲಕಂಠ ಸ್ವಾಮೀಜಿ, ಮೂರುಸಾವಿರ ಮಠದ ಪ್ರಭು ನೀಲಕಂಠ ಸ್ವಾಮೀಜಿ, ನಯಾನಗರದ ಅಭಿನವ ಸಿದ್ದಲಿಂಗ ಸ್ವಾಮೀಜಿ, ಧಾರ್ಮಿಕ ದತ್ತಿ ಇಲಾಖೆ ನಿರ್ದೇಶಕ ಮಹಾಂತಯ್ಯ ಶಾಸ್ತ್ರಿ ಆರಾದ್ರಿಮಠ, ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗಿನಿ ಬಿ ಕೆ ಪ್ರಭಾ ಅಕ್ಕಾ ಮುಸ್ಲಿಂ ಧರ್ಮಗುರು ಮೌಲಾನಾ ಶೌಕತಅಲಿ ಬಾದಿ ವಹಿಸಲಿದ್ದಾರೆ ಎಂದರು.
ಶಾಸಕ ಮಹಾಂತೇಶ ಕೌಜಲಗಿ ಅಧ್ಯಕ್ಷತೆ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಸಂಸದರಾದ ಜಗದೀಶ ಶೆಟ್ಟರ, ಈರಣ್ಣ ಕಡಾಡಿ, ಕೆಎಲ್ಇ ಕಾರ್ಯಾಧ್ಯಕ್ಷಡಾ| ಪ್ರಭಾಕರ ಕೋರೆ ಹಾಗೂ ಅತಿಥಿಗಳಾಗಿ ಶಾಸಕರಾದ ಬಾಬಾಸಾಹೇಬ ಪಾಟೀಲ, ವಿಶ್ವಾಸ ವೈದ್ಯ, ಮಾಜಿ ಶಾಸಕರಾದ ಜಗದೀಶ ಮೆಟಗುಡ್ಡ, ಡಾ|ವಿಶ್ವನಾಥ ಪಾಟೀಲ, ಮಹಾಂತೇಶ ದೊಡಗೌಡ್ರ, ಜಿಪಂ. ಮಾಜಿ ಸದಸ್ಯ ಶಂಕರ ಮಾಡಲಗಿ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಈಶ್ವರಪ್ಪ ಗಡಾದ, ತಾಲೂಕು ಆರೋಗ್ಯಾಧಿಕಾರಿ ಡಾ.ಸಂಜಯ ಸಿದ್ದನ್ನವರ, ಪುರಸಭೆ ಅಧ್ಯಕ್ಷ ವಿಜಯ ಬೋಳನ್ನವರ, ವಿಶೇಷ ಸನ್ಮಾನಿತರಾಗಿ ಡಾ। ಬಿ.ಎಸ್.ಮಹಾಂತಶೆಟ್ಟಿ ಹಿರಿಯ ವೈದ್ಯ ಡಾ|ಎ. ಎನ್.ಬಾಳಿ ಆಗಮಿಸಲಿದ್ದಾರೆ ಎಂದರು.
ಚಿಕ್ಕಮಕ್ಕಳ ತಜ್ಞ ಡಾ| ಶರಣಕುಮಾರ ಅಂಗಡಿ, ಸ್ತ್ರೀರೋಗ ತಜ್ಞ ಡಾ। ಅಶೋಕ ದೊಡವಾಡ ಮಾತನಾಡಿ, ನಾಡಿನ ಜನತೆ ಅನೂಕೂಲಕ್ಕಾಗಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಲಾಗಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು. ಕರೆಯ ಮೇರೆಗೆ ನುರಿತ ತಜ್ಞ ವೈದ್ಯರು ಸೌಲಭ್ಯ ಒದಗಿಸಲಿದ್ದಾರೆ ಎಂದರು.
ಡಾ| ರವೀಂದ್ರಕುಮಾರ ಜಕನೂರ ಹಾಗೂ ಸಿಬ್ಬಂದಿ ಇದ್ದರು.