ಇಂಡಿ: ಭಗವಾನ್ ಮಹಾವೀರರು ಮಾನವನ ಸುಂದರ ಬದುಕಿಗೆ ಬೇಕಾದ ಐದು ತತ್ವಗಳನ್ನು ತಿಳಿಸಿದ್ದು, ಅವನ್ನು ಅಳವಡಿಸಿಕೊಂಡರೆ ಇಡೀ ವಿಶ್ವವೇ ನೆಮ್ಮದಿಯ ಜೀವನ ನಡೆಸಲು ಸಾಧ್ಯ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ವರ್ಧಮಾನ ಮಹಾವೀರರ ಜಯಂತಿ ಆಚರಣೆಯಲ್ಲಿ, ಮಹಾವೀರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಮಹಾವೀರರ ಬೋಧನೆಯೇ ನಮಗೆಲ್ಲ ಸ್ಪೂರ್ತಿ. ಪ್ರತಿ ಜೀವಿಗೂ ಕೂಡ ಜೀವನದ ಮೌಲ್ಯಗಳನ್ನು ಬೋಧಿಸುತ್ತಾ, ಪ್ರೀತಿ ಸಾಮರಸ್ಯದಿಂದ ಬಾಳಿದರೆ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ. ಸರಳತೆ, ವಿನಯಶೀಲತೆಯೇ ಬದುಕಿಗೆ ಶ್ರೀರಕ್ಷೆ ಎಂಬ ಅವರ ತತ್ವಾದರ್ಶ ಇಂದಿನ ಬದುಕಿಗೆ ಪ್ರಸ್ತುತ. ಅವರ ತತ್ವ ಅರಿತರೆ ಜಗವೆಲ್ಲ ಶಾಂತಿಯ ಸ್ವತ್ತು ಎಂದು ಹೇಳಿದರು.
ಸುಳ್ಳು, ಕಳ್ಳತನಕ್ಕೆ ಅವಕಾಶವಿಲ್ಲದೆ, ಸರಿ ಮಾರ್ಗದಲ್ಲಿ, ಅಗತ್ಯಕ್ಕೆ ತಕ್ಕಷ್ಟು ಸಂಪತ್ತು ಸಂಗ್ರಹಿಸಿದಾಗ ಅದು ನೆಮ್ಮದಿಯ ಜೀವನಕ್ಕೆ ದಾರಿಯಾಗುತ್ತದೆ. ನೀನು ಬದುಕು, ಇತರರನ್ನು ಬದುಕಲು ಬಿಡು ಎಂಬ ಮಹಾವೀರರ ತತ್ವದಡಿಯಲ್ಲಿ ನಾವೆಲ್ಲರೂ ಸಾಗಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕ ಕೆ ಐ ಮಕಾನದಾರ ಮಾತನಾಡಿ, ಜೀವನದ ಸಂತೋಷ, ವಿಶ್ವಶಾಂತಿ ಮತ್ತು ಸಮಸ್ತ ಮಾನವ ಕಲ್ಯಾಣಕ್ಕಾಗಿ ಮಹಾವೀರರ ಬೋಧನೆಗಳನ್ನು ಅರ್ಥೈಸಿಕೊಂಡು,ಅನುಸರಿಸಬೇಕು. ಅವರ ತತ್ವಗಳು ವಿಶ್ವಮಾನ್ಯವಾಗಿದ್ದು, ಸಾರ್ವಕಾಲಿಕ ಮೌಲ್ಯ ಹೊಂದಿವೆ ಎಂದು ಹೇಳಿದರು.
ಶಿಕ್ಷಕರಾದ ಎಸ್ ಎಸ್ ಅರಬ, ಎನ್ ಬಿ ಚೌಧರಿ, ಎಸ್ ಪಿ ಪೂಜಾರಿ ಸೇರಿದಂತೆ ಮಕ್ಕಳು ಪಾಲ್ಗೊಂಡಿದ್ದರು.


