ನಾಯಿ ಕಚ್ಚಿದಲ್ಲಿ ಕೂಡಲೇ ರೇಬಿಸ್ ಲಸಿಕೆ ಹಾಕಿಸಿರಿ: ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ ವಿ.ಕೆ

Pratibha Boi
ನಾಯಿ ಕಚ್ಚಿದಲ್ಲಿ ಕೂಡಲೇ ರೇಬಿಸ್ ಲಸಿಕೆ ಹಾಕಿಸಿರಿ: ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ ವಿ.ಕೆ
WhatsApp Group Join Now
Telegram Group Join Now

ಬಳ್ಳಾರಿ,ಸೆ.೧೨ಸಾಕಿದ ಅಥವಾ ಬೀದಿ ನಾಯಿ ಕಚ್ಚಿದಲ್ಲಿ, ಉಗುರಿನಿಂದ ಗಿರಿದರೆ, ನಮ್ಮ ಮೈಮೇಲೆ ಈಗಾಗಲೇ ಇರುವ ಗಾಯವನ್ನು ನಾಲಿಗೆಯಿಂದ ನೆಕ್ಕಿದರೆ ಏನೂ ಆಗುವುದಿಲ್ಲವೆಂದು ನಿರ್ಲಕ್ಷ?ಯ ವಹಿಸದೇ ನಾಯಿ ಕಚ್ಚಿದ ಜಾಗವನ್ನು ಸೋಪು ಮತ್ತು ನೀರಿನಿಂದ ತೊಳೆದು, ಕೂಡಲೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ತೆರಳಿ ವೈದ್ಯರ ಸಲಹೆಯಂತೆ ಮಾರಣಾಂತಿಕವಾದ ರೇಬಿಸ್ ರೋಗ ತಡೆಗಟ್ಟುವ ಲಸಿಕೆ ಪಡೆಯಬೇಕು ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ ವಿ.ಕೆ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ ಮತ್ತು ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಕೌಲ್‌ಬಜಾರ್ ಇವರ ಸಂಯುಕ್ತಾಶ್ರಯದಲ್ಲಿ ಕೌಲ್‌ಬಜಾರ್ ನ ಆರೋಗ್ಯ ಕೇಂದ್ರದಲ್ಲಿ ನಾಯಿ ಕಡಿತ ಹಾಗೂ ಹಾವು ಕಡಿತ ಕುರಿತು ಬುಧವಾರ ಏರ್ಪಡಿಸಿದ್ದ ಜನಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ರೇಬೀಸ್ ಸೋಂಕುಳ್ಳ ನಾಯಿ ಕಚ್ಚಿದಾಗ ರೇಬೀಸ್ ನಿರೋಧಕ ಚುಚ್ಚುಮದ್ದು ಪಡೆಯದಿದ್ದರೆ ಅಂತಹ ವ್ಯಕ್ತಿಯು ರೇಬೀಸ್ ಕಾಯಿಲೆಯ ಸೋಂಕಿಗೆ ಒಳಗಾಗಿ ರೋಗ ದೀರ್ಘವಾದಾಗ ಮರಣ ಸಂಭವಿಸಬಹುದು ಎಂದು ತಿಳಿಸಿದರು.
ಆ ರೋಗಿಯು ಬಹುತೇಕ ಕ್ರಮೇಣ ನೀರು ಕುಡಿಯುವುದಿಲ್ಲ, ಗಾಳಿ ಬಿಸಿದರೆ ಹೆದರುತ್ತಾರೆ, ಬೆಳಕು ಕಂಡರೆ ಭಯ ಪಡುತ್ತಾರೆ, ಅಲ್ಲದೆ ನಾಯಿ ಕಡಿತ ಮೆದುಳಿಗೆ (ತಲೆಗೆ) ಹತ್ತಿರವಾಗಿದ್ದಲ್ಲಿ ಅಪಾಯ ಹೆಚ್ಚು. ಈ ನಿಟ್ಟಿನಲ್ಲಿ ಮಾರಣಾಂತಿಕ ರೇಬೀಸ್ ಕಾಯಿಲೆ ತಡೆಗಟ್ಟಲು, ವೈದ್ಯರ ಸಲಹೆಯಂತೆ ರೇಬಿಸ್ ಚುಚ್ಚುಮದ್ದನ್ನು ಕಚ್ಚಿದ ಮೊದಲ ದಿನ, ೩ನೇ ದಿನ, ೭ನೇ ದಿನ, ೨೮ನೇ ದಿನ ತಪ್ಪದೇ ಲಸಿಕೆ ಪಡೆಯಬೇಕು ಹಾಗೂ ಸಾಕು ನಾಯಿಗಳಿಗೆ ತಪ್ಪದೇ ಚುಚ್ಚುಮದ್ದನ್ನು ಹಾಕಿಸಬೇಕು ಎಂದು ಕೋರಿದರು.
*ಹಾವು ಕಡಿತ ಜಾಗೃತಿ:*
ಹಾವು ಕಡಿತ ಜಾಗೃತಿ ಕುರಿತು ಮಾತನಾಡಿದ ಡಾ.ಮರಿಯಂಬಿ ವಿ.ಕೆ ಅವರು, ಹಾವು ಕಚ್ಚಿದಾಗ ಗಾಬರಿಯಾಗುವುದು ಸಾಮಾನ್ಯ. ಆ ಸಂದರ್ಭದಲ್ಲಿ ಸಮಾಧಾನದಿಂದ ಕಚ್ಚಿರುವ ಭಾಗ ಹೃದಯದ ಕೆಳಗೆ ಬರುವ ರೀತಿಯಲ್ಲಿ ನಿಗಾವಹಿಸಿ, ಆ ವ್ಯಕ್ತಿಯನ್ನು ಯಾವುದೇ ವಾಹನ ಅಥವಾ ೧೦೮ ಅಂಬುಲೇನ್ಸ್ ಮೂಲಕ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಎಂದು ಹೇಳಿದರು.
ಹಾವು ಕಚ್ಚಿದಾಗ ಕಚ್ಚಿದ ಜಾಗದ ಪಕ್ಕದಲ್ಲಿ ಬಟ್ಟೆಯನ್ನು ಕಟ್ಟುವುದು, ಬ್ಲೇಡ್ ಅಥವಾ ಚಾಕುವಿನಿಂದ ಗಾಯ ಮಾಡುವುದು, ಗಾಯವನ್ನು ಸುಡುವುದು, ನಾಟಿ ಔಷಧಿಗಳನ್ನು ನೀಡುವುದು ಮುಂತಾದವುಗಳನ್ನು ಮಾಡಬಾರದು ಎಂದು ವಿನಂತಿಸಿದರು.
ರೋಗಿಯನ್ನು ಕೂರಿಸಿ ಹಾವು ಕಚ್ಚಿದ ಭಾಗದಿಂದ ರಕ್ತ ಪರಿಚಲನೆಗೆ ತಡೆಯಾಗುವಂತಹ ಕೈ ಗಡಿಯಾರ, ಬಳೆ, ಉಂಗುರ ಮುಂತಾದವುಗಳನ್ನು ತೆಗೆಯಬೇಕು. ಕಚ್ಚಿದ ಭಾಗ ಅಲುಗಾಡಿಸಬಾರದು. ಆ ಸಂದರ್ಭದಲ್ಲಿ ರೋಗ ಲಕ್ಷಣಗಳಾದ ತೇಲುಗಣ್ಣು, ಕಣ್ಣುಮುಚ್ಚುವುದು, ನಾಲಿಗೆ ತೊದಲುವಿಕೆ, ನುಂಗಲು ಕಷ್ಟವಾಗುವುದು, ಉಸಿರಾಡಲು ಕಷ್ಟವಾಗಬಹುದು. ಹಾಗೆಯೇ ಗಾಯದ ಜಾಗದಲ್ಲಿ ತೀವ್ರ ಉರಿ, ನೋವು ಹರಡುವಿಕೆ ಅಥವಾ ಊದುವಿಕೆ ಗಾಯದ ಸುತ್ತ ಬಣ್ಣಹೀನವಾಗುವುದು, ಕೆಳಬೆನ್ನಿನಲ್ಲಿ ನೋವು ಮುಂತಾದ ಲಕ್ಷಣಗಳು ಅಂಗಾಂಗಕ್ಕೆ ಹಾನಿ ಮಾಡುವ ವಿಷದ ಅಂಶವಾಗಿರುತ್ತದೆ. ಈ ಲಕ್ಷಣಗಳು ಕಂಡುಬಂದಲ್ಲಿ ವೈದ್ಯರಿಗೆ ತಿಳಿಸಿದರೆ ವ್ಯಕ್ತಿಯ ಜೀವ ಕಾಪಾಡಲು ಸಾಧ್ಯವಾಗುವ ಚಿಕಿತ್ಸೆ ಒದಗಿಸಲು ಸಹಾಯಕವಾಗುತ್ತದೆ ಎಂದರು.ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಉಪಮೇಯರ್ ಡಿ.ಸುಕುಂ, ವೈದ್ಯಾಧಿಕಾರಿಗಳಾದ ಡಾ.ನವೀದ್ ಆಲಮ್, ಡಾ.ವಿಶಾಲಾಕ್ಷಿ, ಡಾ.ಸ್ವಪ್ನ, ಎನ್.ಸಿ.ಡಿ ಸಲಹೆಗಾರರಾದ ಜಬೀನಾ ತಾಜ್, ಮೈಕ್ರೊಬಯಾಲಜಿಸ್ಟ್ ಶರತ್, ಎನ್.ಟಿ.ಸಿ.ಪಿ ಪ್ರಶಾಂತ್ ಸೇರಿದಂತೆ ಆಸ್ಪತ್ರೆಯ ಎಲ್ಲಾ ಸಿಬ್ಬಂದಿ ವರ್ಗದವರು ಆಶಾ ಕಾರ್ಯಕರ್ತೆಯರು, ತಾಯಂದಿರು, ಸಾರ್ವಜನಿಕರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article