ಬಳ್ಳಾರಿ, ಮಾ.14: ಸರಿಯಾಗಿ ರಕ್ತ ಹೆಪ್ಪುಗಟ್ಟದ, ಕೀಲು ಸ್ನಾಯಿಗಳಲ್ಲಿ ರಕ್ತ ಸ್ರಾವ ಆಗುವ, ಮೈ ಜಜ್ಜುಗಟ್ಟುವಿಕೆಯ ಲಕ್ಷಣಗಳ ಹಿಮೋಫಿಲಿಯಾ ಕಾಯಿಲೆಯ ಚಿಕಿತ್ಸೆಗೆ ಲಕ್ಷಾಂತರ ರೂ ಬೇಕು. ಆದರೆ ಇಂತಹ ಚಿಕಿತ್ಸೆಯನ್ನು ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಉಚಿತವಾಗಿ ನೀಡುವ ಕಾರ್ಯಕ್ಕೆ ಚಾಲನೆ ದೊರೆತಿದೆ.
ಜಿಲ್ಲಾ ಆಸ್ಪತ್ರೆಯಲ್ಲಿ ಕೆಲ ದಿನಗಳ ಹಿಂದೆ ಜಿಪಂ ಸಿಇಓ ಮಹಮ್ಮದ್ ಹಾರೀಸ್ ಸುಮೇರ, ರಾಜೇಶ್ ನ್ಯಾಯಾಧೀಶ ಹೊಸಮನಿ ಹಿಮೋಫಿಲಿಯಾ ಸೋಂಕಿತ ಮಗುವಿಗೆ ಲಸಿಕೆ ನೀಡುವ ಮೂಲಕ ಆರು ತಿಂಗಳ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಈ ವೇಳೆ ಡಿಹೆಚ್ಓ ಡಾ.ಯಲ್ಲಾ ರಮೇಶ್ ಬಾಬು, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸಾರೆಡ್ಡಿ ಮೊದಲಾದವರು ಇದ್ದರು.
ಸಾಮಾನ್ಯ ಆರೋಗ್ಯವಂತ ಮನುಷ್ಯನ ದೇಹದಿಂದ ರಕ್ತ ಹೊರ ಬಂದಾಗ 11 ಸೆಕೆಂಡ್ ನಲ್ಲಿ ಹೆಪ್ಪುಗಟ್ಟಬೇಕು. ಆದರೆ ಈ ಹಿಮೋಫಿಲಿಯಾ ಸೋಂಕು ಇರುವ ರೋಗಿಗಳಲ್ಲಿ ರಕ್ತಸ್ರಾವ ನಿರಂತರವಾಗಿರುತ್ತದೆ. ಇದಕ್ಕೆ ಕಾರಣ ರಕ್ತದಲ್ಲಿನ 8 ಮತ್ತು 9 ನೇ ಅಂಶಗಳ ಕೊರತೆಯಾಗಿದೆ. ಜೊತೆಗೆ ಇದು ಅನುವಂಶೀಯ ಕಾಯಿಲೆಯಾಗಿದ್ದು. ಪುರುಷರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಇದರ ಚಿಕಿತ್ಸೆಯು ಕೊರತೆಯಿರುವ ಹೆಪ್ಪುಗಟ್ಟುವಿಕೆಯನ್ನು ಹೊರಗಿನಿಂದ ನೀಡುವುದನ್ನು ಒಳಗೊಂಡಿರುತ್ತದೆ.
ರೋಗಲಕ್ಷಣಗಳು: ರಕ್ತಸ್ರಾವ, ಗಾಯಗಳಾಗುವುದು, ಶಸ್ತ್ರಚಿಕಿತ್ಸೆಯ ನಂತರ ಅತಿಯಾದ, ದೀರ್ಘಕಾಲದವರೆಗೆ ರಕ್ತಸ್ರಾವವಾಗುತ್ತದೆ. ತೀವ್ರತರವಾದ ಪ್ರಕರಣಗಳಲ್ಲಿ ಮಿದುಳಿನೊಳಗೆ ಸಹ ರಕ್ತಸ್ರಾವ ಆಗಬಹುದು, ಇದು ತಲೆನೋವು, ವಾಂತಿ ಅಥವಾ ಫಿಟ್ಸ್ ಗೂ ಕಾರಣವಾಗುತ್ತದೆ.
ಸರಿಯಾದ ಚಿಕಿತ್ಸೆ ಇಲ್ಲದಿದ್ದರೆ, ದೀರ್ಘಕಾಲದ ಕೀಲು ಕಾಯಿಲೆ ದೇಹದ ಆಳವಾದ ಆಂತರಿಕ ರಕ್ತಸ್ರಾವ ಮತ್ತು ಅಪರೂಪದ ಸಂದರ್ಭಗಳಲ್ಲಿ ಜೀವಕ್ಕೆ ಅಪಾಯಕಾರಿ ಮಿದುಳಿನ ರಕ್ತಸ್ರಾವ ಸಂಭವಿಸಬಹುದು.
ಚಿಕಿತ್ಸೆ:
ಅಧುನಿಕ, ಸಕ್ರಿಯ ಚಿಕಿತ್ಸೆ (ಪ್ರೊಫಿಲ್ಯಾಕ್ಸಿಸ್ – ರಕ್ತಸ್ರಾವವಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ನೀಡುವ ಚಿಕಿತ್ಸೆ)ಯಾಗಿದೆ
ದೇಹದಿಂದ ರಕ್ತಸ್ರಾವ ಆಗುವುದನ್ನು ತಡೆಯಲು ಹೆಪ್ಪುಗಟ್ಟುವ ಅಂಶಗಳನ್ನು ಲಸಿಕೆ ಮೂಲಕ (ಫ್ಯಾಕ್ಟರ್ ರಿಪ್ಲೇಸ್ಮೆಂಟ್ ಥೆರಪಿ) ನೀಡಲಾಗುತ್ತದೆ.
ಸ್ನಾಯುಗಳು ಮತ್ತು ಕೀಲುಗಳನ್ನು ಬಲಪಡಿಸಲು ನಿಯಮಿತವಾಗಿ ವ್ಯಾಯಾಮ ಮಾಡಬೇಕಿದೆ. ರಕ್ತ ತೆಳುವಾಗಿಸುವ ಔಷಧಿಗಳನ್ನು ತೆಗೆದುಕೊಳ್ಳಬಾರದು.
ಚಿಕಿತ್ಸೆ ವೆಚ್ಚ :
ವಿವಿಧ ರೂಪಾಂತರಗಳು ಮತ್ತು ಗಾತ್ರಗಳ ಆಧಾರದ ಮೇಲೆ ಬೆಲೆಗಳು ಬದಲಾಗುತ್ತದೆ. ಹೆಚ್ಚು ಎಂದರೆ ಸ 2.35 ಲಕ್ಷ ರೂ ಕಡಿಮೆ ಎಂದರೆ 1,20 ಲಕ್ಷ ರೂ ವರೆಗೆ ಒಬ್ಬರಿಗೆ ವೆಚ್ಚವಾಗುತ್ತದೆ. ಒಬ್ಬರಿಗೆ ತಿಂಗಳಿಗೆ ಒಂದು ಇಂಜೆಕ್ಷನ್ ಕೊಡಬೇಕಾಗುತ್ತದೆ ಮತ್ತು ಇದು ಜೀವನ ಪೂರ್ತಿ ಕೊಡಬೇಕಾಗುತ್ತದೆ.
ಈ ದುಬಾರಿ ಚಿಕಿತ್ಸೆಯನ್ನು ಸರ್ಕಾರಗಳು ಉಚಿತವಾಗಿ ನೀಡಲು ಈ ವರ್ಷ ಅಭಿಯಾನ ಹಮ್ಮಿಕೊಂಡಿದೆ ಇದರಡಿ ಆರು ತಿಂಗಳು ಉಚಿತ ಚಿಕಿತ್ಸೆ ನೀಡಲಾಗುತ್ತದೆ.
ಕೋಟ್ :
ಬಳ್ಳಾರಿ ಜಿಲ್ಲೆಯಿಂದ ಈ ಉಚಿತ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಯಲ್ಲಿ 22 ರೋಗಿಗಳನ್ನು ನೋಂದಾಯಿಸಲಾಗಿದೆ. 11 ಮಕ್ಕಳಿಗೆ (ವಯಸ್ಸು 18 ವರ್ಷದೊಳಗಿನವವರಿಗೆ ಮಾತ್ರ) ಉಳಿದ 11ಹಿರಿಯ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಆರು ತಿಂಗಳು ನಿರಂತರವಾಗಿ ಲಸಿಕೆ ಪಡೆಯಬೇಕು. ಇದರಿಂದ ಒಂದಿಷ್ಟು ಕಡಿಮೆಯಾಗುವ ಸಾಧ್ಯತೆ ಇದೆ. ಸರ್ಕಾರ ಪ್ರಾಯೋಗಿಕವಾಗಿ ಇದನ್ನು ಹಮ್ಮಿಕೊಂಡಿದೆ. ಒಂದು ಲಸಿಕೆ 50 ರಿಂದ 60 ಸಾವಿರ ರೂ ವೆಚ್ಚದ್ದಾಗಿದೆ. ಇದನ್ನು ಸರ್ಕಾರ ಮುಂದುವರಿಸಬಹುದು.
ಡಾ.ಎನ್.ಬಸಾರೆಡ್ಡಿ
ಜಿಲ್ಲಾ ಶಸ್ತ್ರಚಿಕಿತ್ಸಕರು, ಬಳ್ಳಾರಿ.
One attachment • Scanned by Gmail


