ಬಳ್ಳಾರಿ, ಆ.11: ಹರ್ ಘರ್ ತಿರಂಗಾ ಅಭಿಯಾನವು ದೇಶದ ಜನತೆಯಲ್ಲಿ ರಾಷ್ಟ್ರ ಪ್ರೇಮ, ದೇಶಭಕ್ತಿಯನ್ನು ಉದ್ದೀಪಿಸುತ್ತದೆ ಎಂದು ಸೇವಾ ರತ್ನ ಪ್ರಶಸ್ತಿ ಪುರಸ್ಕೃತ ಮಾಜಿ ಸೈನಿಕರಾದ ಬಿ. ಪ್ರಹ್ಲಾದ ರೆಡ್ಡಿ ಅವರು ತಿಳಿಸಿದರು.ತಂಜಾವೂರಿನ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ, ನಗರದ ಎಸ್.ಜಿ.ಟಿ ಸಮೂಹ ಸಂಸ್ಥೆ ಹಾಗೂ ಮನುಕುಲ ಆಶ್ರಮ ಟ್ರಸ್ಟ್ ಸಹಯೋಗದಲ್ಲಿ ಸ್ಥಳೀಯ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಹರ್ ಘರ್ ತಿರಂಗಾ ಪ್ರಚಾರ 2025ರ ಅಂಗವಾಗಿ ಸಾಂಸ್ಕೃತಿಕ ಹಾಗೂ ತೊಗಲು ಗೊಂಬೆಯಾಟ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ರಾಷ್ಟ್ರಧ್ವಜದ ಮೂರು ಬಣ್ಣಗಳಾದ ಕೇಸರಿ, ಬಿಳಿ ಮತ್ತು ಹಸಿರು ತ್ಯಾಗ, ಶಾಂತಿ ಮತ್ತು ಸಮೃದ್ಧಿಯ ಸಂಕೇತವಾಗಿವೆ ಎಂದು ಹೇಳಿದರು.
ಯಾವುದೇ ಜಾತಿ, ಧರ್ಮದವರಿದ್ದರೂ ನಾವೆಲ್ಲರೂ ಮೊದಲು ಭಾರತೀಯರು ಎಂಬ ಅಂಶವನ್ನು ಮರೆಯಬಾರದು ಎಂದರು.ರಾಷ್ಟ್ರೀಯ ಹಬ್ಬಗಳು ಶಾಲಾ ಕಾಲೇಜು, ಸರಕಾರಿ ಸಂಸ್ಥೆಗಳಿಗೆ ಸೀಮಿತವಾಗ ಬಾರದು. ಪ್ರತಿಯೊಬ್ಬ ಸಾರ್ವಜನಿಕರು ಮನೆ ಹಬ್ಬಗಳಿಗೂ ಮಿಗಿಲಾಗಿ ಸಂಭ್ರಮ, ಸಡಗರಗಳಿಂದ ಆಚರಿಸ ಬೇಕು ಎಂದು ಮನವಿ ಮಾಡಿದರು.ಮತ್ತೋರ್ವ ಮಾಜಿ ಸೈನಿಕ ಶೇಕ್ ಸಾಬ್ ಮಾತಾನಾಡಿ ಕರ್ನಾಟಕ ಸರ್ವ ಜನಾಂಗದ ಶಾಂತಿ ತೋಟವಾಗಿದೆ. ವಿಶ್ವದಲ್ಲಿ ಭಾರತ, ಭಾರತದಲ್ಲಿ ಕರ್ನಾಟಕ ಶ್ರೇಷ್ಠ ರಾಜ್ಯವೆಂದು 22 ವರ್ಷಗಳ ಕಾಲ ಬಾಂಗ್ಲಾ, ಪಾಕಿಸ್ತಾನದ ಗಡಿಗಳಲ್ಲಿ ಕಾರ್ಯನಿರ್ವಹಿಸಿರುವ ತಮಗೆ ಅನುಭವಕ್ಕೆ ಬಂದಿದೆ ಎಂದರು.
ಬ್ರಹ್ಮ ಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ನಗರ ಸಂಚಾಲಕಿ ಬಿ.ಕೆ.ನಿರ್ಮಲ ಅಕ್ಕ, ತಂಜಾವೂರು ದಕ್ಷಿಣ ಭಾರತ ಸಾಂಸ್ಕೃತಿಕ ಕೇಂದ್ರದ ಕಾರ್ಯಕ್ರಮ ಅಧಿಕಾರಿ ಟಿ.ಸುಂದರ, ಕಲ್ಯಾಣ ಸ್ವಾಮಿ, ಭಾಸ್ಕರ
ಅಧ್ಯಕ್ಷತೆ ವಹಿಸಿದ್ದ ಎಸ್ ಜಿ ಟಿ ಸಮೂಹ ಸಂಸ್ಥೆಯ ಕಾರ್ಯದರ್ಶಿ ಜಿ. ನಾಗರಾಜ್ ಅವರು ಮಾತನಾಡಿದರು.ವೇದಿಕೆಯಲ್ಲಿ ಎಸ್ ಜಿ ಟಿ ಸಮೂಹ ಸಂಸ್ಥೆಯ ಅಧ್ಯಕ್ಷ ಎಸ್ ಎನ್ ರುದ್ರಪ್ಪ ಉಪಸ್ಥಿತರಿದ್ದರು.
ಎಸ್ ಜಿ ಟಿ ಪದವಿ ಕಾಲೇಜಿನ ಪ್ರಾಚಾರ್ಯರಾದ ಡಾ. ರೀನಾ ರೆಡ್ಡಿ ಸ್ವಾಗತಿಸಿದರು. ಕರ್ನಾಟಕ ಜಾನಪದ ಪರಿಷತ್ತು, ಜಿಲ್ಲಾ ಘಟಕದ ಅಧ್ಯಕ್ಷ, ಹಿರಿಯ ಪತ್ರಕರ್ತ ಸಿ. ಮಂಜುನಾಥ ಪ್ರಾಸ್ತಾವಿಕವಾಗಿ ಮಾತನಾಡಿದರು. ಮನುಕುಲ ಆಶ್ರಮ ಟ್ರಸ್ಟ್ ಸಂಸ್ಥಾಪಕ ಬಿವಿ ಮಲ್ಲಿಕಾರ್ಜುನ ವಂದಿಸಿದರು. ಪವಿತ್ರ, ಬಿಎಂ ಕಲ್ಯಾಣಿ ನಿರ್ವಹಿಸಿದರು.
ತೊಗಲು ಗೊಂಬೆಯಾಟ: ಮನುಕುಲ ಆಶ್ರಮ ಟ್ರಸ್ಟ್ ವತಿಯಿಂದ ಪ್ರದರ್ಶಿಸಿದ ಕನಕದಾಸ ತೊಗಲುಗೊಂಬೆಯಾಟ ಗಮನ ಸೆಳೆಯಿತು. ರಾಷ್ಟ್ರ ನಾಯಕರ ಪೋಷಾಕು ಧರಿಸಿದ ಚಿಣ್ಣರು, ವಿದ್ಯಾರ್ಥಿಗಳು ಮೆಚ್ಚುಗೆ ಗಳಿಸಿದರು.ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಲ್ಲಾ ಸಭಿಕರು, ವಿದ್ಯಾರ್ಥಿಗಳಿಗೆ ತಿರಂಗಾಗಳನ್ನು ವಿತರಿಸಲಾಯಿತು.