ಬೆಂಗಳೂರು: ಸರ್ಕಾರದ ಅಭಿವೃದ್ಧಿ ಯೋಜನೆಗಳಿಗೆ ರೈತರು ಸೇರಿದಂತೆ ಇತರರಿಂದ ಭೂಮಿ ವಶಪಡಿಸಿಕೊಳ್ಳುವವರಿಗೆ ಪರಿಹಾರ ರೂಪದಲ್ಲಿ ನೀಡುವ ಮೊತ್ತಕ್ಕೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವಿಧಿಸುವಂತಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ವಾಣಿಜ್ಯ ತೆರಿಗೆ ಇಲಾಖೆ ನೀಡಿದ್ದ ಶೋಕಾಸ್ ನೋಟಿಸ್ಗಳನ್ನು ಪ್ರಶ್ನಿಸಿ ಬೆಂಗಳೂರಿನ ನಿವಾಸಿಗಳಾದ ಆರ್.ಆಶಾ ಮತ್ತಿತರರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್.ಕೃಷ್ಣ ಕುಮಾರ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಈ ಆದೇಶದಿಂದ ರೈತರು ತಾವು ಪಡೆಯುವ ಪರಿಹಾರಕ್ಕೆ ಜಿಎಸ್ಟಿ ತೆರಿಗೆ ಪಾವತಿಸುವ ಅಗತ್ಯ ವಿರುವುದಿಲ್ಲ. ಅಲ್ಲದೆ, ಇಷ್ಟವಿಲ್ಲದಿದ್ದರೂ ಭೂಮಿಯನ್ನು ಕಳೆದುಕೊಂಡಿರುವ ಮತ್ತು ಅದರ ಜತೆ ಭಾವನಾತ್ಮಕ ಸಂಬಂಧ ಹೊಂದಿರುವ ರೈತರು ಕಳೆದುಕೊಳ್ಳುವ ಭೂಮಿಗೆ ಪರ್ಯಾಯವಾಗಿ ನಷ್ಟ ತುಂಬಿಕೊಡಲು ಪರಿಹಾರ ಪಡೆಯುತ್ತಾರೆ. ಅದಕ್ಕೆ ಜಿಎಸ್ಟಿ ಅಡಿ ತೆರಿಗೆ ವಿಧಿಸುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಿದೆ.
ಅರ್ಜಿದಾರರು ಮತ್ತು ಕೆಐಎಡಿಬಿಇ ನಡುವೆ ಆಗಿರುವ ಒಪ್ಪಂದದಲ್ಲಿ ಹಲವು ಷರತ್ತುಗಳು ಒಳಗೊಂಡಿರಬಹುದು. ಆದರೆ ಅದಕ್ಕೂ ಅರ್ಜಿದಾರರಿಗೆ ನೀಡುವ ಪರಿಹಾರ ಮೊತ್ತಕ್ಕೂ ಸಂಬಂಧವಿಲ್ಲ. ಅದನ್ನು ಸಿಜಿಎಸ್ಟಿ/ಕೆಜಿಎಸ್ಟಿ ಶೆಡ್ಯೂಲ್-2ರಡಿ ಎಂಟ್ರಿ 5(ಇ) ಅಡಿ ಸೇವೆ ಎಂದು ಪರಿಗಣಿಸಲಾಗದು ಎಂದು ತಿಳಿಸಿದೆ.