ಬಳ್ಳಾರಿ: ಕನ್ನಡ ಚೈತನ್ಯ ವೇದಿಕೆ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿದ್ದ 70ನೇ ಕರ್ನಾಟಕ ರಾಜ್ಯೋತ್ಸವವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಾ ಕನ್ನಡ ಚೈತನ್ಯ ವೇದಿಕೆಯು ಶಾಲಾ ಮಕ್ಕಳಿಗೆ ವಿವಿಧ ರೀತಿಯ ಸ್ಪರ್ಧೆಯನ್ನು ಏರ್ಪಡಿಸುವ ಮೂಲಕ ಹಾಗೂ ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಗಡಿ ಜಿಲ್ಲೆಯಲ್ಲಿ ಕನ್ನಡದ ಅಸ್ಮಿತೆಯನ್ನು ಜೀವಂತವಾಗಿ ಇರಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಾ ಬಂದಿದೆ ಎಂದು ಜಿ. ಸೋಮಶೇಖರರೆಡ್ಡಿ ತಿಳಿಸಿದರು. ಬಳ್ಳಾರಿ ಜಿಲ್ಲೆಯ ಕೋಮಸಾಮಾರಸ್ಯ, ಭಾಷಾ ಭಾವೈಕ್ಯತೆ ಇತರ ಜಿಲ್ಲೆಗಳಿಗೆ ಮಾದರಿಯಾಗಿದೆ ಎಂದರು.
ಅಖಂಡ ಬಳ್ಳಾರಿ ಜಿಲ್ಲಾ ಅಧ್ಯಕ್ಷರಾದ ಡಾ. ನಿಷ್ಠಿ ರುದ್ರಪ್ಪ ಮಾತನಾಡಿ ಕರ್ನಾಟಕ ಏಕೀಕರಣ ಹೋರಾಟದಲ್ಲಿ ಹುತಾತ್ಮರಾದ ಪೈಲ್ವಾನ್ ರಂಜಾನ್ ಸಾಬ್ ಮತ್ತು ಚುನಾವಣೆಯ ಮೂಲಕ ಬಳ್ಳಾರಿಯನ್ನು ಕರ್ನಾಟಕದಲ್ಲಿ ಉಳಿಯುವಂತೆ ಮಾಡಿದ ಹರಗಿನಡೋಣಿ ಸಣ್ಣ ಬಸವನಗೌಡರ ಮತ್ತು ಅನೇಕ ಹೋರಾಟಗಾರರ ಶ್ರಮವನ್ನು ನೆನಪಿಸಿಕೊಂಡರು.
ಕನ್ನಡ ಚೈತನ್ಯ ವೇದಿಕೆಯ ಅಧ್ಯಕ್ಷರಾದ ಬಿ.ಎಸ್. ಪ್ರಭುಕುಮಾರ್ ಅವರು ಮಾತನಾಡಿ 68 ವರ್ಷಗಳ ನಂತರ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಬಳ್ಳಾರಿಗೆ ದೊರೆತಿರುವುದು ನಮ್ಮ ಕಾಲಘಟ್ಟದ ಸುದೈವ ಅದನ್ನು ಅತ್ಯಂತ ಪ್ರಾಮಾಣಿಕವಾಗಿ ಮತ್ತು ಸೇವಾ ಮನೋಭಾವದಿಂದ ಜಿಲ್ಲೆಯ ಜನತೆ ಯಶಸ್ವಿಗೊಳಿಸಲು ಪಣತೋಡೋಣ ಎಂದರು.
ಕೆಎಂಎಫ್ ಮಾಜಿ ನಿರ್ದೇಶಕರಾದ ವೀರಶೇಖರ ರೆಡ್ಡಿ, ಕನ್ನಡ ಚೈತನ್ಯ ವೇದಿಕೆಯ ಮಹಿಳಾ ಅಧ್ಯಕ್ಷರಾದ ಜ್ಯೋತಿಪ್ರಕಾಶ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವೇದಿಕೆಯ ಕಾರ್ಯಕ್ರಮದ ನಂತರ ಕುಮಾರಿ ಕಾವೇರಿ, ಕುಮಾರಿ ನಕ್ಷತ್ರ, ಕುಮಾರಿ ಮನಸ್ವಿತ ಜೋಶಿ ಅವರಿಂದ ಭರತನಾಟ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕನ್ನಡ ಚೈತನ್ಯ ವೇದಿಕೆಯ ನೂರಾರು ಜನ ಸದಸ್ಯರು ಸಂಭ್ರಮದಿಂದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು


