‘ಜಲ ಜೀವನ್ ಮಿಷನ್‌’ ಅಕ್ರಮ ಪ್ರಕರಣದಲ್ಲಿ ನಾಲ್ಕನೇ ಆರೋಪಿ ಬಂಧನ

Ravi Talawar
‘ಜಲ ಜೀವನ್ ಮಿಷನ್‌’ ಅಕ್ರಮ ಪ್ರಕರಣದಲ್ಲಿ ನಾಲ್ಕನೇ ಆರೋಪಿ ಬಂಧನ
WhatsApp Group Join Now
Telegram Group Join Now

ಜೈಪುರ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ‘ಜಲ ಜೀವನ್ ಮಿಷನ್‌’ನಲ್ಲಿ ನಡೆದಿದೆ ಎನ್ನಲಾದ 20 ಸಾವಿರ ಕೋಟಿ ರೂಪಾಯಿ ಹಗರಣದಲ್ಲಿ ಮತ್ತೊಬ್ಬ ಆರೋಪಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಮಂಗಳವಾರ ಬಂಧಿಸಿದೆ. ಮಧ್ಯವರ್ತಿ ಸಂಜಯ್ ಬಡಾಯ ಬಂಧಿತ ಆರೋಪಿ. ಈತ ಸಾರ್ವಜನಿಕ ಆರೋಗ್ಯ ಇಂಜಿನಿಯರ್ ಇಲಾಖೆಯ (ಪಿಎಚ್‌ಇಡಿ) ಮಾಜಿ ಸಚಿವ ಮಹೇಶ್ ಜೋಶಿ ಅವರ ಆಪ್ತ ಎನ್ನಲಾಗಿದೆ.

ಪ್ರತಿ ಮನೆಗೆ ನಲ್ಲಿ ನೀರು ಒದಗಿಸುವುದು ‘ಜಲ ಜೀವನ್ ಮಿಷನ್‌’ ಉದ್ದೇಶ. ರಾಜಸ್ಥಾನದಲ್ಲಿ ಈ ಯೋಜನೆಯನ್ನು ಸಾರ್ವಜನಿಕ ಆರೋಗ್ಯ ಇಂಜಿನಿಯರ್​ ಇಲಾಖೆ ಅನುಷ್ಠಾನಗೊಳಿಸುತ್ತಿದೆ. 2023ರ ಆಗಸ್ಟ್ 6ರಂದು ಗುತ್ತಿಗೆದಾರ ಪದ್ಮಚಂದ್ ಜೈನ್ ಎಂಬವರಿಂದ 2.20 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದ ಪಿಎಚ್‌ಇಡಿಯ ಇಬ್ಬರನ್ನು ರಾಜಸ್ಥಾನದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಂಧಿಸಿತ್ತು. ಇದರ ನಂತರ ಜಲಜೀವನ್ ಮಿಷನ್‌ನಲ್ಲಿನ ಅಕ್ರಮಗಳು ಬೆಳಕಿಗೆ ಬಂದಿವೆ. ಇದರಲ್ಲಿ ಅಕ್ರಮ ಹಣ ವರ್ಗಾವಣೆಯೂ ಬಯಲಾಗಿದೆ.

ಬಂಧಿತರ ಸಂಖ್ಯೆ 4ಕ್ಕೇರಿಕೆ: ಎಸಿಬಿ ದಾಖಲಿಸಿದ ಎಫ್‌ಐಆರ್‌ ಆಧಾರದ ಮೇರೆಗೆ ಜಾರಿ ನಿರ್ದೇಶನಾಲಯ ತನಿಖೆ ಕೈಗೆತ್ತಿಕೊಂಡಿದೆ. ಈಗಾಗಲೇ ಶ್ರೀ ಗಣಪತಿ ಟ್ಯೂಬ್‌ವೆಲ್ ಕಂಪನಿಯ ಮಾಲೀಕ ಮಹೇಶ್ ಮಿತ್ತಲ್, ಶ್ರೀ ಶ್ಯಾಮ್ ಟ್ಯೂಬ್‌ವೆಲ್ ಕಂಪನಿಯ ಮಾಲೀಕ ಪದ್ಮಚಂದ್ ಜೈನ್ ಮತ್ತು ಪಿಯೂಷ್ ಜೈನ್ ಎಂಬವರನ್ನು ಇಡಿ ಬಂಧಿಸಿದೆ. ಇದೀಗ ಮಂಗಳವಾರ, ಮಧ್ಯವರ್ತಿ ಸಂಜಯ್ ಬಡಾಯ ಅವರನ್ನು ಸತತವಾಗಿ ವಿಚಾರಣೆಗೆ ಒಳಪಡಿಸಿ ತನಿಖಾಧಿಕಾರಿಗಳು ಬಂಧಿಸಿದ್ದಾರೆ. ಈ ಮೂಲಕ ಬಂಧಿತರ ಸಂಖ್ಯೆ 4ಕ್ಕೇರಿದೆ.

WhatsApp Group Join Now
Telegram Group Join Now
Share This Article