ಧಾರವಾಡ, ಸೆಪ್ಟೆಂಬರ್ 29: ಸೇನೆಯಿಂದ ನಿವೃತ್ತಿಹೊಂದಿದ್ದ ಸೈನಿಕರೊಬ್ಬರು ಧಾರವಾಡದಲ್ಲಿ ವಿದ್ಯಾರ್ಥಿಗಳಿಗಾಗಿ ಪಿಜಿ ಮತ್ತು ಮೆಸ್ ನಡೆಸುತ್ತಿದ್ದರು. ಕಡಿಮೆ ದರದಲ್ಲಿ ಊಟ, ವಸತಿ ಕೊಡುತ್ತಿದ್ದರು. ಆದರೆ ಅವರ ಮೇಲೆ ಕಳೆದ ರಾತ್ರಿ ಅಟ್ಯಾಕ್ ಆಗಿದ್ದು, ಎಂಟರಿಂದ ಹತ್ತು ಜನ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಕೃತ್ಯ ಎಸಗಿದವರು ಸ್ವತಃ ಪೊಲೀಸರೇ. ಹಪ್ತಾ ಕೊಡದೇ ಇದ್ದಿದ್ದಕ್ಕೆ ಪೊಲೀಸರು ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ಮಾಜಿ ಸೈನಿಕ ಆರೋಪ ಮಾಡಿದ್ದಾರೆ.
ದೇಶ ಸೇವೆ ಮಾಡಿ ನಿವೃತ್ತಿಯಾದ ನಂತರ ರಾಮಪ್ಪ ನಿಪ್ಪಾಣಿ, ಧಾರವಾಡದ ಸಪ್ತಾಪುರ ಬಾವಿ ಬಳಿ ಪಿಜಿ ಮತ್ತು ಮೆಸ್ ನಡೆಸಿಕೊಂಡು ಜೀವನ ನಡೆಸುತ್ತಿದ್ದರು. ಕಡಿಮೆ ದರಕ್ಕೆ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಿದ್ದರಿಂದ ಹೆಚ್ಚಿನ ವಿದ್ಯಾರ್ಥಿಗಳು ಇಲ್ಲಿ ಊಟಕ್ಕೆ ಬರುತ್ತಿದ್ದರು. ಆದರೆ ಕಳೆದ ರಾತ್ರಿ (ಸೆ.28) ಹನ್ನೊಂದು ಗಂಟೆ ಸಮಯದ್ಲಲಿ ಸಪ್ತಾಪುರ ಬಾವಿ ಬಳೀಯಿರುವ ಸೈನಿಕ್ ಮೆಸ್ಗೆ ಆಗಮಿಸಿದ್ದ ಧಾರವಾಡ ಉಪನಗರ ಠಾಣೆಯ ಪೊಲೀಸರು ಮೆಸ್ ಗೇಟ್ ಹಾಕುವಂತೆ ರಾಮಪ್ಪಗೆ ಹೇಳಿದ್ದಾರೆ.
ಇನ್ನೂ ನಾಲ್ಕೈದು ವಿದ್ಯಾರ್ಥಿಗಳು ಊಟಕ್ಕೆ ಬರುವವರಿದ್ದಾರೆ ಸರ್ ಎಂದು ಹೇಳಿದ್ದಾರೆ. ಇದೇ ವಿಚಾರಕ್ಕೆ ಪೊಲೀಸರು ಮತ್ತು ರಾಮಪ್ಪನ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಸಮಯದಲ್ಲಿ ರಾಮಪ್ಪ ನಿಪ್ಪಾಣಿ ಮೇಲೆ ಉಪನಗರ ಠಾಣೆಯ ಎಂಟರಿಂದ ಹತ್ತು ಪೊಲೀಸರು ಹೆಲ್ಮೆಟ್ ಸೇರಿದಂತೆ ಅನೇಕ ವಸ್ತುಗಳಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ರಾಮಪ್ಪಗೆ ಥಳಿಸಿದ್ದಲ್ಲದೇ, ಮೆಸ್ನಲ್ಲಿ ಕೆಲಸ ಮಾಡುತ್ತಿದ್ದ ಹುಡುಗರಿಗೆ ಕೂಡಾ ಥಳಿಸಿದ್ದಾರೆ. ಮೆಸ್ನಲ್ಲಿರುವ ಟೇಬಲ್, ಕುರ್ಚಿಗಳನ್ನು ಮುರಿದು, ನಂತರ ಮೆಸ್ನಲ್ಲಿದ್ದ ಸಿಸಿಟಿವಿ ಫುಟೇಜ್, ಮೊಬೈಲ್ಗಳನ್ನು ತಗೆದುಕೊಂಡು ಹೋಗಿದ್ದಾರೆ.


