ವಿಜಯಪುರ: ಭೀಮಾತೀರದಲ್ಲಿ ಮತ್ತೆ ಗುಂಡಿನ ಮೊರೆತ ಕೇಳಿ ಬಂದಿದೆ. ಮಹಾದೇವ ಬೈರಗೊಂಡನ ಆಪ್ತ ಭೀಮನಗೌಡ ಬಿರಾದಾರ್ ಮೇಲೆ ದುಷ್ಕರ್ಮಿಗಳು ಮೂರು ಸುತ್ತು ಗುಂಡು ಹಾರಿಸಿದ ಘಟನೆ ಜಿಲ್ಲೆಯ ಚಡಚಣ ತಾಲೂಕಿನ ದೇವರ ನಿಂಬರಗಿ ಗ್ರಾಮದಲ್ಲಿ ನಡೆದಿದೆ.
ಘಟನೆಯಲ್ಲಿ, ಭೀಮನಗೌಡನ ತಲೆ ಹಾಗೂ ಎದೆಗೆ ಗುಂಡುಗಳು ತಗುಲಿವೆ. ಈತ ಮಹಾದೇವ ಬೈರಗೊಂಡನ ಪರಮಾಪ್ತ ಹಾಗೂ ಬಲಗೈ ಬಂಟನಾಗಿದ್ದಾನೆ. ಮೂರರಿಂದ ನಾಲ್ವರು ಮುಸುಕುಧಾರಿಗಳಿಂದ ಈ ಕೃತ್ಯ ನಡೆದಿದೆ. ಗುಂಡು ಹಾರಿಸಿದ ಬಳಿಕ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ದೇವರ ನಿಂಬರಗಿ ಗ್ರಾಮದ ಕಟಿಂಗ್ ಶಾಪ್ನಲ್ಲಿ ಕಟಿಂಗ್ ಮಾಡಿಸಿಕೊಳ್ಳಲು ಆಗಮಿಸಿದ್ದ ವೇಳೆ ಭೀಮನಗೌಡ ಬಿರಾದಾರ್ ಮೇಲೆ ದಾಳಿ ನಡೆದಿದೆ. ಕಟಿಂಗ್ ಮಾಡುತ್ತಿದ್ದ ಕಣ್ಣಿಗೆ ಖಾರದ ಪುಡಿ ಎರಚಿ ಕೃತ್ಯ ಎಸಗಲಾಗಿದೆ. ತೀವ್ರ ಗಾಯಗೊಂಡ ಭೀಮನಗೌಡನನ್ನು ವಿಜಯಪುರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ, ಗುಂಡು ಹಾರಿಸಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಚಡಚಣ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸುರೇಶ್ ಬೆಂಡೆಗುಂಬಳ್ ಹಾಗೂ ಇನ್ನಿತರ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಚಡಚಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ. ಇದರಿಂದ ದೇವರನಿಂಬರಗಿ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.