ಬೆಂಗಳೂರು, ಜುಲೈ 26: ‘ಹಲ್ಲಿದ್ದರೆ ಕಡಲೆ ಇಲ್ಲ, ಕಡಲೆ ಇದ್ದರೆ ಹಲ್ಲಿಲ್ಲ’ ಎಂಬ ನಾಣ್ನುಡಿಯಂತಾಗಿದೆ ಕರ್ನಾಟಕದ ರೈತರ ಸ್ಥಿತಿ. ಈ ವರ್ಷ ರಾಜ್ಯದಾದ್ಯಂತ ಉತ್ತಮ ಮುಂಗಾರುಮಳೆಯಾಗುತ್ತಿದ್ದು, ಬಿತ್ತನೆ ಕಾರ್ಯ ಆರಂಭವಾಗಿದೆ. ಆದರೆ, ರೈತರಿಗೆ ಗೊಬ್ಬರವೇ ಸಿಕ್ಕಿಲ್ಲ, ಸಿಗುತ್ತಿಲ್ಲ. ಮಳೆ ಬಂದಾಗ ಗೊಬ್ಬರ ಸಿಗುವುದಿಲ್ಲ, ಗೊಬ್ಬರ ಸಿಕ್ಕಾಗ ಮಳೆ ಬರುವುದಿಲ್ಲ ಎಂಬ ಸ್ಥಿತಿ ಎದುರಿಸುತ್ತಿರುವ ರೈತರು, ಬೆಳಗ್ಗೆ 5 ಗಂಟೆಯಿಂದಲೇ ಸಹಕಾರ ಸಂಘಗಳ ಮುಂದೆ ರಸಗೊಬ್ಬರಕ್ಕಾಗಿ ಸರದಿಯಲ್ಲಿ ನಿಲ್ಲುತ್ತಿದ್ದಾರೆ.
ರಸಗೊಬ್ಬರದ ಬರ: ರೈತರು ಕಂಗಾಲು

ಕೊಪ್ಪಳದ ಬಸವೇಶ್ವರ ವೃತ್ತದ ಬಳಿ ಇರುವ ಹುಟ್ಟುವಳಿ ಸಹಕಾರಿ ಸಂಘದ ಮುಂಭಾಗ ರೈತರು ಗೊಬ್ಬರಕ್ಕಾಗಿ ಕಾಯುತ್ತಿದ್ದಾರೆ. ಗೊಬ್ಬರ ಸಿಗದ್ದಕ್ಕೆ ರೈತರು ಮಣ್ಣು ತಿಂದು ಆಕ್ರೋಶ ಹೊರಹಾಕಿದ್ದಾರೆ. ಕಲಬುರಗಿಯಲ್ಲಿ ಪರಿಸ್ಥಿತಿ ಭಿನ್ನವಾಗಿಲ್ಲ. ಗೊಬ್ಬರ ಮತ್ತು ಬಿತ್ತನೆ ಬೀಜಕ್ಕೆ ಕೃತಕ ಅಭಾವ ಸೃಷ್ಟಿಯಾಗಿದೆ. ದುಪ್ಪಟ್ಟು ಬೆಲೆ ವಸೂಲಿ ಮಾಡಲಾಗುತ್ತಿದೆ. ದುಪ್ಪಟ್ಟು ಬೆಲೆಗೆ ಮಾರಾಟ ಮಾಡುವ ವಿಡಿಯೋ ‘ಟಿವಿ9’ಗೆ ಲಭ್ಯವಾಗಿದೆ.