ಬಳ್ಳಾರಿ,ಮಾ.13..: ಶಿಕ್ಷಣದಿಂದ ಮಾತ್ರ ನಿಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಲು ಸಾಧ್ಯ. ಶಿಕ್ಷಣದಿಂದಲೇ ವಿಮೋಚನೆಗೆ ದಾರಿ ಎಂದು ಚಿತ್ರದುರ್ಗದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ||ಕರಿಯಪ್ಪ ಮಾಳಗಿ ತಿಳಿಸಿದರು.
ಜೆಟಿ ಫೌಂಡೇಶನ್ ವತಿಯಿಂದ ನಗರದ ಕರ್ನಾಟಕ ಪಬ್ಲಿಕ್ ಪ್ರೌಢಶಾಲೆಯಲ್ಲಿ (ಗರ್ಲ್ಸ್
ಹೈಸ್ಕೂಲ್) ಜರುಗಿದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಉಚಿತ ಪರೀಕ್ಷಾ ಪ್ಯಾಡ್ ಹಾಗೂ ಪೆನ್ನುಗಳ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಹಿಳೆಯರ ಸಬಲೀಕರಣಕ್ಕೂ ಶಿಕ್ಷಣವೇ ಮೂಲಾಧಾರವಾಗಿದೆ. ಶಿಕ್ಷಣ ಪಡೆದ ಮಹಿಳೆ ತನ್ನ ಜೀವನವನ್ನು ಸ್ವತಂತ್ರವಾಗಿ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಜ್ಞಾನ, ವಿಜ್ಞಾನ, ತಂತ್ರಜ್ಞಾನ ಮತ್ತು ಸಂಸ್ಕೃತಿಯ ಬೆಳವಣಿಗೆ ಶಿಕ್ಷಣದ ಮೂಲಕವೇ ಸಾಧ್ಯ ಎಂದರು. ಎಸ್ಎಸ್ಎಲ್ಸಿ ಪರೀಕ್ಷೆ ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ವದ ಹಂತವಾಗಿದೆ. ಈ ಹಂತದಲ್ಲಿ ಪಡೆದ ಜ್ಞಾನ ಮತ್ತು ಸಾಧನೆ ಅವರ ಮುಂದಿನ ವಿದ್ಯಾಭ್ಯಾಸದ ದಾರಿಯನ್ನು ನಿರ್ಧರಿಸುತ್ತದೆ. ಆದ್ದರಿಂದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ನಿರಂತರ ಅಧ್ಯಯನ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ನಿರಂತರ ಅಧ್ಯಯನದಿಂದ ವಿದ್ಯಾರ್ಥಿಗಳಲ್ಲಿ ವಿಷಯಗಳ ಬಗ್ಗೆ ಸ್ಪಷ್ಟತೆ ಮತ್ತು ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಪರೀಕ್ಷೆಯ ಸಮಯದಲ್ಲಿ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುವುದಕ್ಕೂ ನಿರಂತರ ಅಧ್ಯಯನ ಸಹಕಾರಿಯಾಗಿದೆ ಎಂದು ತಿಳಿಸಿದರು. ವಿದ್ಯಾರ್ಥಿಗಳಲ್ಲಿನ ಪ್ರಜ್ಞೆ ಎಚ್ಚರಗೊಳ್ಳಬೇಕು. ದೊಡ್ಡ ದೊಡ್ಡ ಕನಸು ಕಂಡು,
ನನಸಾಗಿಸಿಕೊಳ್ಳಲು ಪ್ರಯತ್ನಿಸಬೇಕು. ನಿಮ್ಮ ನನಸಾಗಿಸಲು ಬೇರೆ ಯಾವ ಮಾರ್ಗಗಳು ಇಲ್ಲ. ನಿರಂತರ ಅಧ್ಯಯನ ಮಾತ್ರ ನಿಮ್ಮ ಬದುಕನ್ನು ಹಸನು ಮಾಡಲು ಸಾಧ್ಯ. ದೊಡ್ಡ ದೊಡ್ಡ ಹುದ್ದೆಗಳನ್ನು ಪಡೆದು ಸಮಾಜದಲ್ಲಿ ದೊಡ್ಡ ಗೌರವ ಸ್ಥಾನ ಮಾನಗಳನ್ನು ಪಡೆದುಕೊಳ್ಳಲು ಸಾಧ್ಯ ಎಂದು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.
ಹಿರಿಯ ಮಹಿಳಾ ಸಂಘಟಕಿ ಕಮಲಾ ಮರಿಸ್ವಾಮಿ ಹಾಗೂ ಪುಷ್ಪಲತಾ ಚಂದ್ರಶೇಖರ್ ಮಾತನಾಡಿ, ವಿದ್ಯಾರ್ಥಿನಿಯರು ಮೊಬೈಲ್ನಿಂದ ದೂರ ಇರಿ. ಮೊಬೈಲ್ ನಿಮಗೆ ದೊಡ್ಡ ಶತೃಎಂಬುದನ್ನು ಮರೆಯದಿರಿ. ಉನ್ನತ ಶಿಕ್ಷಣ ಪಡೆದುಕೊಳ್ಳಲು ಎಸ್ಸೆಸ್ಸೆಲ್ಸಿ ಪರೀಕ್ಷೆ ಹೆಚ್ಚು ಪ್ರಮುಖವಾಗುತ್ತದೆ. ಹೆಚ್ಚುತ್ತಿರುವ ಪೈಪೋಟಿಗಳ ನಡುವೆ ಸರ್ಕಾರಿ ಶಾಲೆಯ
ಬಾಲಕಿಯರು ಉತ್ತಮ ಅಂಕಗಳನ್ನು ಪಡೆಯಬೇಕು. ಖಾಸಗಿ ಶಾಲೆ ವಿದ್ಯಾರ್ಥಿಗಳ ಮೀರಿ ಬೆಳೆಯಬೇಕು ಎಂದು ಆಶಿಸಿದರು.
ಜೆಟಿ ಫೌಂಡೇಶನ್ನ ಮುಖ್ಯಸ್ಥ ತಿಮ್ಮಪ್ಪ ಜೋಳದರಾಶಿ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಸರ್ಕಾರಿ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಉಚಿತ ಪರೀಕ್ಷಾ
ಪ್ಯಾಡ್ ಹಾಗೂ ಪೆನ್ನುಗಳನ್ನು ವಿತರಣೆ ಮಾಡಲಾಗುತ್ತಿದ್ದು, ಈ ನೆಪದಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಭಯ ಹೋಗಲಾಡಿಸುವುದು ಹಾಗೂ ಅವರಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವ ಆಶಯ ನಮ್ಮದಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಚಿತ್ರದುರ್ಗದ ಅಧ್ಯಾಪಕರಾದ ಪ್ರೊ.ನಯಾಜ್ ಅಹ್ಮದ್, ಪ್ರಶಾಂತ್ ನಾಯಕ್, ಲೇಖಕಿ ಡಾ.ಸಿದ್ದೇಶ್ವರಿ, ಭೀಮೇಶ ಸ್ವಾಮಿ, ಹಿರಿಯ ಪತ್ರಕರ್ತ ಮಂಜುನಾಥ ಕೆ.ಎಂ, ಉದ್ಯಮಿ ಚಂದ್ರಶೇಖರ ಜೋಳದರಾಶಿ, ಮನೋಜ್, ಪ್ರಸಾದ್ ಬಳ್ಳಾರಿ, ಬಸವರಾಜ್, ಪೋತಪ್ಪ ಜೋಳದರಾಶಿ, ದೇವರಾಜ್ ಬ್ಯಾಲಚಿಂತೆ ಮತ್ತಿತರರಿದ್ದರು.ಈ ದಿನ ಸರಕಾರಿ ಪ್ರೌಡಶಾಲೆ ಮೋಕ ಶಾಲೆಯಲ್ಲಿ ಸಹಾ ಪರೀಕ್ಷೆ ಪ್ಯಾಡ್ ಹಾಗೂ ಪೆನ್ನುಗಳನ್ನು ವಿತರಿಸಲಾಯಿತು.
ಶಾಲೆಯ ಕನ್ನಡ ಶಿಕ್ಷಕ ಹರಿಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು.


