ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಎಷ್ಟು ಮುಖ್ಯವೋ ಪೋಷಕರ ಪಾತ್ರವೂ ಸಹ ಅಷ್ಟೇ ಮಹತ್ವದ್ದಾಗಿದೆ. ಮಕ್ಕಳು ಮನೆಯಲ್ಲಿಯಲ್ಲಿದ್ದಾಗ ಉತ್ತಮ ಸಂಸ್ಕಾರದ ಗುಣಗಳನ್ನು ಪೋಷಕರು ಕಲಿಸಿಕೊಡಬೇಕು. ವ್ಯಕ್ತಿಯ ವ್ಯಕ್ತಿತ್ವ ವಿಕಸನವಾಗಬೇಕಾದರೆ ಶಿಕ್ಷಣದ ಜೊತೆಗೆ ಸಂಸ್ಕಾರವು ಅತ್ಯವಶ್ಯ. ಶಿಕ್ಷಣ ಮತ್ತು ಸಂಸ್ಕಾರ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ನಾಗನೂರು ರುದ್ರಾಕ್ಷಿ ಮಠದ ಡಾ ಅಲ್ಲಮಪ್ರಭು ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು. ಅವರು ಇಂದು ಶಿವಬಸವ ನಗರದ ಆರ್. ಎನ್. ಶೆಟ್ಟಿ ಪಾಲಿಟೆಕ್ನಿಕ್ ಮಹಾವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಎಸ್ ಜಿ ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದ ಸಾನಿಧ್ಯವಯಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕೆ. ಎ. ಎಸ್. ಅಧಿಕಾರಿ ಬಲರಾಮ ಚೌಹಾನ ಮಾತನಾಡಿ ಇಂದಿನಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ನಿರ್ಧಿಷ್ಟ ಗುರಿಯನ್ನು ಹೊಂದಿರುವುದಷ್ಟೆ ಅಲ್ಲದೆ ಅದನ್ನು ಇಡೇರಿಸಿಕೊಳ್ಳಲು ಸತತ ಪ್ರಯತ್ನದ ಜೊತೆಗೆ ಸಮಯ ಪ್ರಜ್ಞೆ, ಶಿಸ್ತು , ತಾಳ್ಮೆಯಿಂದ ವರ್ತಿಸಬೇಕು. ಇದರಿಂದ ಮಾತ್ರ ಯಶಸ್ಸು ಸಾದ್ಯ ಎಂದರು.
ಇನ್ನೋರ್ವ ಅತಿಥಿ ಸೈಬರ್ ಸೆಕ್ಯೂರಿಟಿಯ ಸ್ಥಾಪಕ ಮತ್ತು ಸಿಇಓ ಹಿತೇಶ್ ಧರ್ಮದಾಸನಿ ನೆಟ್ಸನ್ಸ್ ಅವರು ವಿದ್ಯಾರ್ಥಿಗಳನ್ನು ಭವಿಷ್ಯದ ಉತ್ತಮ ಎಂಜಿನಿಯರಗಳಾಗುವಂತೆ ಪ್ರೇರೇಪಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಎಫ್.ವ್ಹಿ.ಮಾನ್ವಿ, ಸದಸ್ಯ ವಿಲಾಸ ಬಾದಾಮಿ ಉಪಸ್ಥಿತರಿದ್ದರು. ಪ್ರಾಚಾರ್ಯ ಡಾ. ಬಿ.ಆರ್.ಪಟಗುಂದಿ ಸ್ವಾಗತಿಸಿದರು. ಪ್ರಾದ್ಯಾಪಕ ಮಂಜುನಾಥ ಶರಣಪ್ಪನ್ನವರ ನಿರೂಪಿಸಿದರು. ಕೊನೆಗೆ ಮೂಲ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಅಶೋಕ ಹುಲಗಬಾಳಿ ವಂದಿಸಿದರು.