ವಿಜಯನಗರ(ಹೊಸಪೇಟೆ) : ನಿರಂತರ ರಸಗೊಬ್ಬರ ಬಳಕೆಯಿಂದಾಗಿ ಮಣ್ಣಿನ ಫಲವತ್ತತೆ ಕುಸಿತಗೊಳ್ಳಲಿದೆ. ಇದಕ್ಕಾಗಿ ಅನ್ನದಾತ ಸಾವಯವ ಕೃಷಿಗೆ ಆಸಕ್ತಿ ವಹಿಸುವ ಮೂಲಕ ಕೃಷಿ ಭೂಮಿ ಮಣ್ಣಿನ ಆರೋಗ್ಯ ವೃದ್ಧಿಗೆ ಆದ್ಯತೆ ನೀಡಬೇಕಿದೆ ಎಂದು ಶಾಸಕ ಹೆಚ್.ಆರ್.ಗವಿಯಪ್ಪ ಹೇಳಿದರು.
ನಗರದ ಎಪಿಎಂಸಿ ಆವರಣದ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಇಲಾಖೆ ಏರ್ಪಡಿಸಿದ್ದ ಕೃಷಿ ಉಪಕರಣಗಳ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಂಗಳವಾರ ಅವರು ಮಾತನಾಡಿದರು, ರೈತರು ತಮ್ಮ ಕೃಷಿ ಭೂಮಿಗಳ ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೊಣೆಗಾರಿಕೆ ಎಂದು ಭಾವಿಸಬೇಕು. ಹೆಚ್ಚುವರಿ ರಸಗೊಬ್ಬರ ಬಳಕೆ ಮತ್ತು ಕಳಪೆ ಮಣ್ಣಿನ ಆರೋಗ್ಯದಿಂದ ರೈತರಿಗೆ ನಷ್ಟವಾಗಲಿದೆ. ಮಣ್ಣಿನಲ್ಲಿ ಅನೇಕ ಗುಣಗಳು ಹಾನಿಯಾಗಲಿವೆ. ಮಣ್ಣಿನ ಗುಣ್ಣಮಟ್ಟ ಕುಸಿದರೇ ಭವಿಷ್ಯದಲ್ಲಿ ಬೆಳೆ ಇಳುವರಿಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಕೃಷಿ ಭೂಮಿಗಳು ಫಲವತ್ತತೆ ಕಳೆದುಕೊಂಡರೇ ಅಹಾರದ ಅಭದ್ರತೆ ಸೃಷ್ಟಿಯಾಗಲಿದೆ. ಹಾಗಾಗೀ ರೈತರು ಸಾವಯವ ಕೃಷಿಗೆ ಹೆಚ್ಚಿನ ಆಸಕ್ತಿ ವಹಿಸಿ ಆರ್ಥಿಕ ಅಭಿವೃದ್ಧಿ ಹೊಂದಬಹುದಾಗಿದೆ. ರಾಜ್ಯ ಸರ್ಕಾರ ಕೃಷಿಕರಿಗೆ ಸಾವಯವ ಪದ್ದತಿ ಅನುಸರಿಸಲು ಅನೇಕ ಯೋಜನೆಗಳನ್ನು ತರಲಾಗಿದೆ. ರೈತರು ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಬಳಿಕ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಬಿತ್ತನೆ ಬೀಜ ವಿತರಣೆ, ರಾಷ್ಟಿçÃಯ ಕೃಷಿ ವಿಕಾಸ ಯೋಜನೆಯಡಿ ಮಣ್ಣು ಆರೋಗ್ಯ ಕಾರ್ಡ್ ವಿತರಣೆ, ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ತುಂತುರು ನೀರಾವರಿ ಘಟಕಗಳ ವಿತರಣೆ, ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ನೀರಾವರಿ ಪಿವಿಸಿ ಪೈಪ್ಸ್ ಘಟಕಗಳ ವಿತರಣೆ ಸೇರಿ ಕೃಷಿ ಯಂತ್ರೋಪಕರಣ ಯೋಜನೆಯಡಿ ಕೃಷಿ ಉಪಕರಣಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಣೆ ಮಾಡಿದರು.
ಇದೇ ವೇಳೆ ಪ್ರಮುಖವಾಗಿ ಎಪಿಎಂಸಿ ಆವರಣದಲ್ಲಿ ವೇಬ್ರಿಡ್ಜ್ ನಿರ್ಮಾಣ, ಎರೆಹುಳ ಗೊಬ್ಬರ ಮರು ವಿತರಣೆಗೆ ಕ್ರಮ, ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಆದ್ಯತೆ, ಪಾಪಿನಾಯಕಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಕೃಷಿ ಭೂಮಿಗಳಿಗೆ ನೀರಾವರಿ ಸೌಲಭ್ಯ ಕುರಿತಂತೆ ರೈತರು ಶಾಸಕರಿಗೆ ಅಹವಾಲು ಸಲ್ಲಿಸಿದರು.
ಬೆಂಗಳೂರಿನಲ್ಲಿ ನಡೆದ ಅಂತರಾಷ್ಟಿçÃಯ ಸಿರಿಧಾನ್ಯ ಹಾಗೂ ಸಾವಯವ ಮೇಳದಲ್ಲಿ ನಡೆದ ರಾಜ್ಯಮಟ್ಟದ ಸಿರಿಧಾನ್ಯ ಪಾಕ ಸ್ಪರ್ಧೆಯಲ್ಲಿ ವಿಜಯನಗರ ಜಿಲ್ಲೆಯಿಂದ ಪ್ರಥಮ ಸ್ಥಾನ ಪಡೆದ ಹೊಸಪೇಟೆಯ ರೂಪ ಮತ್ತು 2023-24ನೇ ಸಾಲಿನ ರಾಜ್ಯಮಟ್ಟದ ಬೆಳೆ ಸ್ಪರ್ಧೆ ಯೋಜನೆಯಡಿ ಭಾಗವಹಿಸಿ ಪರಿಶಿಷ್ಟ ಜಾತಿ ಮಹಿಳಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಕೊಂಡನಾಯಕಹಳ್ಳಿ ಗ್ರಾಮದ ನಿವಾಸಿ ನಾಗಮ್ಮ ಇವರಿಗೆ ಗೌರವಿಸಿ ಸನ್ಮಾನಿಸಲಾಯಿತು.
ಈ ವೇಳೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಮನೋಹರ ಗೌಡ, ಕೃಷಿ ವಿಜ್ಞಾನಿಗಳಾದ ಭದ್ರೇಶ್, ಮಂಜುನಾಥ ಬಾನುವಳ್ಳಿ, ಕೃಷಿ ಇಲಾಖೆಯ ಪರಮೇಶ್ವರ ನಾಯ್ಕ, ಶರತ್ ಕುಮಾರ್, ಕೃಷಿ ಅಧಿಕಾರಿ ಎಲ್.ವೆಂಕಟೇಶ್ ಇದ್ದರು.