ಬೆಂಗಳೂರು, ಮಾರ್ಚ್ 28: ವಿದ್ಯುತ್ ದರ ಹೆಚ್ಚಳದಿಂದಜನ ಮಾತ್ರವಲ್ಲ, ಈಗ ಬೆಂಗಳೂರಿನ ಕೈಗಾರಿಕೆಗಳು ಕೂಡ ಕಂಗಲಾಗಿವೆ. ಪಿಂಚಣಿ ಹಾಗೂ ಗ್ರಾಚ್ಯುಟಿಗಾಗಿ ದರ ಏರಿಕೆ ಮಾಡಿದ್ದ ಇಂಧನ ಇಲಾಖೆ, ಈಗ ಮತ್ತೆ ವಾರ್ಷಿಕ ದರ ಏರಿಕೆಗೂ ಸಜ್ಜಾಗಿದೆ. ಇದರ ಪರಿಣಾಮವಾಗಿ ಕೈಗಾರಕೆಗಳು ಸಿಬ್ಬಂದಿಗೆ ಕೋಕ್ ಕೊಡುವ ಪರಿಸ್ಥಿತಿ ಉದ್ಭವಿಸಿದೆ ಎಂದು ಕೈಗಾರಿಕೋದ್ಯಮಿಗಳುಅಳಲು ತೋಡಿಕೊಂಡಿದ್ದಾರೆ.
ಈಗಾಗಲೇ ಅನೇಕ ಕೈಗಾರಿಕೆಗಳು ಅನ್ಯ ರಾಜ್ಯಕ್ಕೆ ವಲಸೆ ಹೋಗಿದ್ದು, ಪರಿಸ್ಥಿತಿ ಹೀಗೆ ಮುಂದುವರೆದರೆ ಬಹುತೇಕ ಕೈಗಾರಿಕೆಗಳು ವಲಸೆ ಹೋಗಲಿವೆ ಎಂದು ಕೈಗಾರಿಕೋದ್ಯಮಿಗಳು ಹೇಳಿದ್ದಾರೆ. ಪಿಂಚಣಿ, ಗ್ರಾಚ್ಯುಟಿಗಾಗಿ ಗ್ರಾಹಕರಿಗೆ ದರ ಏರಿಕೆ ಮಾಡಿದ್ದು, ಕೈಗಾರಿಕೋದ್ಯಮಿಗಳ ಸಿಟ್ಟಿಗೆ ಕಾರಣವಾಗಿದೆ. ಹೀಗಾಗಿ ಈ ಅವೈಜ್ಞಾನಿಕ ನೀತಿಯನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನೆ ಮಾಡಲಿದ್ದೇವೆ ಎಂದು ಕೈಗಾರಿಕೋದ್ಯಮಿಗಳು ಹೇಳಿದ್ದಾರೆ. ಈ ಬಗ್ಗೆ ಎಫ್ಕೆಸಿಸಿಐ ಅಧ್ಯಕ್ಷ ಬಾಲಕೃಷ್ಣ ಮಾಹಿತಿ ನೀಡಿದ್ದಾರೆ.
ದರ ಏರಿಕೆಯ ಬಾಣಲೆಯಲ್ಲಿ ಜನರ ಜೊತೆ ಈಗ ಕೈಗಾರಿಕೆಗಳು ಕೂಡ ಬೆಂದು ಹೋಗಿದೆ. ರಾಜ್ಯದಲ್ಲಿ 5.54 ಲಕ್ಷ ಎಂಎಸ್ಎಂಇ ಗಳಿವೆ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ವಾರ್ಷಿಕವಾಗಿ 13110 ಮಿಲಿಯನ್ ಯೂನಿಟ್ ವಿದ್ಯುತ್ ಬಳಕೆ ಮಾಡುತ್ತದೆ. ಇಷ್ಟು ದಿನ ಇದರ ವೆಚ್ಚ 13,110 ಕೋಟಿ ರೂಪಾಯಿ ಆಗ್ತಿತ್ತು. ಆದರೆ ಸದ್ಯ 0.36 ಪೈಸೆ ವಿದ್ಯುತ್ ದರ ಹೆಚ್ಚಳದಿಂದ ವಾರ್ಷಿಕವಾಗಿ 1200 ಕೋಟಿ ರೂ ಹೆಚ್ಚುವರಿ ಹೊರೆಯಾಗಿದೆ ಎಂದು ಪೀಣ್ಯ ಕೈಗಾರಿಕಾ ಪ್ರದೇಶ ಅಧ್ಯಕ್ಷ ಆರ್. ಶಿವಕುಮಾರ್ ಹೇಳಿದ್ದಾರೆ.
ವಿದ್ಯುತ್ ದರ ಹೆಚ್ಚಳ ಬಗ್ಗೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್ಸಿ) ಮಾರ್ಚ್ 27ರಂದು ಅಧಿಕೃತ ಆದೇಶ ಹೊರಡಿಸಿದೆ. ಪ್ರತಿ ಯೂನಿಟ್ಗೆ 36 ಪೈಸೆ ಹೆಚ್ಚಳ ಮಾಡಲಾಗಿದೆ. ಪರಿಷ್ಕೃತ ವಿದ್ಯುತ್ ದರ ಏಪ್ರಿಲ್ 1ರಿಂದಲೇ ಅನ್ವಯವಾಗಲಿದೆ. ಮುಂದಿನ ಮೂರು ವರ್ಷಗಳಿಗೆ ದರ ಏರಿಕೆ ಮಾಡಲಾಗಿದೆ.