ಬಳ್ಳಾರಿ, ಮ.21..: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಳ್ಳಾರಿ ವತಿಯಿಂದ ನಶಾಮುಕ್ತ ಕ್ಯಾಂಪಸ್ ಜಾಗೃತಿ ಅಭಿಯಾನವನ್ನು ನಗರದ ಸರಳಾದೇವಿ ಕಾಲೇಜಿನಿಂದ ಸಂಗಮ್ ವೃತ್ತ ಮಾರ್ಗವಾಗಿ ರಾಯಲ್ ಸರ್ಕಲ್ ವರೆಗೂ ಜಾಥಾ ಮಾಡಿ ಗಾಂಧಿಭವನದಲ್ಲಿ ಸಭಾ ಕಾರ್ಯಕ್ರಮ ಮಾಡಲಾಯಿತು.
ಜಾಗೃತಿ ಅಭಿಯಾನಕ್ಕೆ ಎಬಿವಿಪಿ ರಾಜ್ಯಕಾರ್ಯದರ್ಶಿ ದರ್ಶನ್ ಹೆಗಡೆ ಅವರು ಚಾಲನೆಯನ್ನು ನೀಡಿದರು. ವಿದ್ಯಾರ್ಥಿಗಳು ನಶಾಮುಕ್ತ ಕ್ಯಾಂಪಸ್ ನಮ್ಮೆಲ್ಲರ ಹೊಣೆ ಎಂದು ಘೋಷಣೆಯನ್ನು ಕೂಗುತ್ತಾ ಉತ್ಸಾಹದಿಂದ ಭಾಗವಹಿಸಿದರು.
ಸಭೆಯನ್ನು ಉದ್ದೇಶಸಿ ಮಾತನಾಡಿದ ದರ್ಶನ್ ಹೆಗಡೆ ಯವರು “ಗಾಂಜಾ ಮತ್ತು ಡ್ರಗ್ಸ್ ನ ಹಾವಳಿಯಿಂದಾಗಿ ಬಳ್ಳಾರಿಯ ಪ್ರತಿಷ್ಠೆಯು ರಾಜ್ಯದಲ್ಲಿ ಕುಗ್ಗಿದಂತಾಗಿದೆ.ಶಾಲಾ ಮತ್ತು ಕಾಲೇಜಿನಲ್ಲಿ ಮಾದಕ ವಸ್ತುಗಳ ಪೂರೈಕೆಯಾಗುತ್ತಿದೆ ಎಂದು ಕೇಳಿಬರುತ್ತಿರುವ ಸುದ್ದಿ ಶೋಚನೀಯ ಸಂಗತಿಯಾಗಿದೆ.ಇತ್ತೀಚಿಗಿ ಪ್ಯುಪಿಲ್ ಟ್ರೀ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಮಾದಕ ವಸ್ತು ಸೇವನೆ ಮಾಡುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ, ಮಾಧ್ಯಮಗಳಲ್ಲಿ ಬಂದರು ಕೂಡಾ ಯಾವುದೆ ಕ್ರಮ ಕೈಗೊಳ್ಳದೆ ಇರೋದು ಅನುಮಾನವನ್ನು ಹುಟ್ಟಿಸಿದೆ. ನಶಾಮುಕ್ತ ಕ್ಯಾಂಪಸ್ ಅಭಿಯಾನವನ್ನು ಇಡಿ ರಾಜ್ಯಾದ್ಯಂತ ಎಬಿವಿಪಿ ಮಾಡಲು ಯೋಜನೆ ಮಾಡಿದ್ದೇವೆ. ಸದೃಢ ರಾಷ್ಟ್ರ ನಿರ್ಮಾಣಕ್ಕೆ – ಸಶಕ್ತ ವಿದ್ಯಾರ್ಥಿ ಸಮುದಾಯ ತಯಾರಾಗಬೇಕು ಎಂದು” ಹೇಳಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತೀಥಿಗಳಾಗಿ ಆಗಮಿಸಿ ಮಾತನಾಡಿದ ಡಾ.ಬಿ.ಕೆ ಸುಂದರ್ ರವರು “ಮಾದಕ ವಸ್ತುಗಳು ಸಮಾಜಕ್ಕೆ, ದೇಶಕ್ಕೆ ಮಾರಕವಾಗಿದೆ.ಯುವಕರು ಡ್ರಗ್ಸ್ ಮತ್ತು ಗಾಂಜಾ ವಸ್ತುಗಳಿಂದ ದೂರವಿರಬೇಕು. ಅದರಿಂದ ಆರೋಗ್ಯದ ಮೇಲೆ ವಿಪರೀತಿ ಪರಿಣಾಮ ಬೀರಲಿದೆ. ಇದರಿಂದಾಗಿ ಕುಟುಂಬದ ನೆಮ್ಮದಿಯು ಹಾಳಾಗುತ್ತಿದೆ. ದೇಹಕ್ಕೆ ನಶೆಯುಂಟು ಮಾಡುವ ವಸ್ತುಗಳಿಗೆ ಯುವಕರು ಬಲಿಯಾಗಬೇಡಿ. ಸ್ವಸ್ಥ ಸಮಾಜ ನಿರ್ಮಾಣ ಮಾಡಲು ಎಲ್ಲ ವಿದ್ಯಾರ್ಥಿಗಳು ಎಬಿವಿಪಿ ನಡೆಸುತ್ತಿರುವ ನಶಾಮುಕ್ತ ಕ್ಯಾಂಪಸ್ ಜಾಗೃತಿ ಅಭಿಯಾನಕ್ಕೆ ಕೈಜೋಡಿಸಿ. ಜೊತೆಗೆ ಮಾದಕ ವಸ್ತುಗಳ ಪೂರೈಕೆ ಮತ್ತು ಸೇವನೆಯಿಂದ ಕಾನೂನು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಎಬಿವಿಪಿ ವಿಭಾಗ ಸಂಘಟನಾ ಕಾರ್ಯದರ್ಶಿ ನಾಗರಾಜ ಬಟಗೇರಾ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಭರತ್.ಟಿ, ಜಿಲ್ಲಾ ಸಂಚಾಲಕ ಕೆ.ದಿಲಿಪ್ ಕುಮಾರ್, ಕಾರ್ಯಕರ್ತರಾದ ರಘು, ಮಹೇಶ, ಚೇತನ್, ಶಿವಕುಮಾರ, ಶರಣಬಸವ ಉಪಸ್ಥಿತರಿದ್ದರು. ದಿಲಿಪ್ ಅವರು ಸ್ವಾಗತಿಸಿದರು, ಕುಮಾರಿ ಇಂದಿರಾಶ್ರೀ ನಿರುಪಿಸಿ ವಂದಿಸಿದರು.


