ಬೆಳಗಾವಿ: ಖಾನಾಪುರ ತಾಲೂಕಿನ ಕೊಡಚವಾಡ ಗ್ರಾಮದಲ್ಲಿ ನಡೆದ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮದಲ್ಲಿ ರೈತರ ಪ್ರಶ್ನೆಗಳಿಗೆ ಉತ್ತರಿಸುತ್ತ ಕೇಂದ್ರದ ಸಸ್ಯ ಸಂರಕ್ಷಣಾ ತಜ್ಞ ಡಾ. ಎಸ್. ಎಸ್. ಹಿರೇಮಠ ಇವರು ಖಾನಾಪುರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮೆಣಸಿನಕಾಯಿ ಬೆಳೆಯುತ್ತಿದ್ದು, ಸದರಿ ಬೆಳೆಯು ಮುಟುರು ರೋಗದಿಂದ ಬಾಧೆಗೆ ಒಳಪಡುತ್ತಿದೆ. ಈ ಹಿನ್ನಲೆಯಲ್ಲಿ ರೈತರು ಮೆಣಸು ಬೀಜ ಬಿತ್ತನೆ ಸಂದರ್ಭದಲ್ಲಿ ಪ್ರತಿ ಕಿಲೋ ಬೀಜಕ್ಕೆ ೧೦ ಗ್ರಾಂ ಥಯೋಮೆಥಾಕ್ಸಾಮ್ ೩೦ ಎಫ್.ಎಸ್. ಕೀಟನಾಶಕದಿಂದ ಬೀಜೋಪಚಾರ ಮಾಡಿ ಬಿತ್ತಲು ಸಲಹೆ ನೀಡಿದರು. ಬೆಳೆಯನ್ನು ಮುಖ್ಯ ಕ್ಷೇತ್ರಕ್ಕೆ ನಾಟಿ ಮಾಡುವಾಗ ಹೊಲದ ಸುತ್ತಲೂ ಮೂರು ಸಾಲು ಎತ್ತರವಾಗಿ ಬೆಳೆಯುವ ಗೋವಿನ ಜೋಳ ಅಥವಾ ಜೋಳದ ಬೆಳೆಯನ್ನು ಬಿತ್ತಬೇಕು. ಇದರಿಂದ ಥ್ರೀಪ್ಸ್ ಹಾಗೂ ಮೈಟ್ಸ್ ನುಸಿಗಳು ಗಾಳಿ ಮೂಲಕ ಹರಡುವುದನ್ನು ನಿಯಂತ್ರಿಸಬಹುದಾಗಿದೆ. ಖರ್ಚಿಲ್ಲದ ಕ್ರಮವಾಗಿ ಮೆಣಸಿನಕಾಯಿ ಬೆಳೆ ನಾಟಿ ಮಾಡುವ ಸಂದರ್ಭದಲ್ಲಿ ಕೊತ್ತಂಬರಿ, ಚಂಡು ಹೂ ನಾಟಿ ಮಾಡುವುದರಿಂದ ನೈಸರ್ಗಿಕವಾಗಿ ಕೀಟ ನಿಯಂತ್ರಣ ಸಾಧ್ಯವಾಗುತ್ತದೆ ಎಂದರು. ತಾವು ಬಿತ್ತುವ ಮೆಣಸಿನಕಾಯಿ ಬೀಜವು ಗುಣಮಟ್ಟದ್ದಾಗಿರಬೇಕು ಎಂಬುದನ್ನು ರೈತರು ಮನಗಾನಬೇಕು. ಮೆಣಸಿನಕಾಯಿ ಬೆಳೆಯಲ್ಲಿ ಬೆಳೆಗಿಂತ ಒಂದು ಅಡಿ ಎತ್ತರದಲ್ಲಿ ಹಳದಿ ಅಂಟು ಬಲೆ ಮತ್ತು ನೀಲಿ ಅಂಟು ಬಲೆಗಳನ್ನು ಪ್ರತಿ ಎಕರೆಗೆ ೨೦ ರಂತೆ ತೂಗು ಹಾಕುವುದರಿಂದ ರಸಹೀರುವ ಕೀಟಗಳ ನಿರ್ವಹಣೆ ಮಾಡಬಹುದು. ಮುಟುರು ರೋಗ ಕಂಡುಬಂದಲ್ಲಿ ಪ್ರತಿ ಲೀಟರ ನೀರಿಗೆ ೦.೫ ಮಿಲೀ ಅಬಾಮೆಕ್ಟಿನ್ ೧.೯ ಇ.ಸಿ. ಅಥವಾ ೨ ಮಿಲೀ ಪ್ರೊಪರ್ಗೈಟ್ ೫೭ ಇ.ಸಿ. ಅಥವಾ ೧.೫ ಮಿಲೀ ಫೆಂಜಾಕ್ವೀನ್ ೧೦ ಇ. ಸಿ. ಕೀಟನಾಶಕಗಳನ್ನು ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಕೀಟಗಳ ಚಟುವಟಿಕೆಯನ್ನು ನೋಡಿಕೊಂಡು ಕೀಟನಾಶಕ ಬಳಸಬೇಕು. ಯಾವುದೇ ಕಾರಣಕ್ಕೂ ಮೊನೊಕ್ರೋಟೊಫಾಸ್ ಕೀಟನಾಶಕ ಬಳಸಬಾರದು. ಒಂದೇ ತರಹದ ಕೀಟನಾಶಕವನ್ನು ಪದೇಪದೇ ಸಿಂಪಡಿಸಬಾರದು ಹಾಗೂ ೨ ಅಥವಾ ೩ ಕೀಟನಾಶಕಗಳನ್ನು ಬೆರೆಸಿ ಬಳಸಬಾರದು. ಹೆಚ್ಚಿನ ಮಾಹಿತಿಗೆ ಕೆಎಲ್ಇ ಕೃಷಿ ವಿಜ್ಞಾನ ಕೇಂದ್ರದ ತಜ್ಞರನ್ನು ಅಥವಾ ತಮ್ಮ ಸಮೀಪದ ತೋಟಗಾರಿಕೆ ಇಲ್ಲವೇ ಕೃಷಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಕೋರಿದರು. ಉತ್ತಮ ಗುಣಮಟ್ಟದ ಇಳುವರಿ ಪಡೆಯಲು ಮೆಣಸಿನಕಾಯಿ ಬೆಳೆಗೆ ಶಿಫಾರಸ್ಸು ಮಾಡಿದ ರಸಗೊಬ್ಬರಗಳನ್ನು ಹಂತಹಂತವಾಗಿ ನೀಡಬೇಕು. ಗಿಡಗಳ ನಿರ್ವಹಣೆಗೆ ಬೇವಿನ ಹಿಂಡಿ ಅಥವಾ ಹೊಂಗೆ ಹಿಂಡಿ ಬಳಸುವುದು ಸೂಕ್ತ. ಪೊಟ್ಯಾಷ್ ಗೊಬ್ಬರ ಬಳಸುವುದರಿಂದ ಗಿಡಗಳಿಗೆ ರೋಗ ನಿರೋಧಕ ಶಕ್ತಿ ಸಿಗುವುದೆಂದು ಕೇಂದ್ರದ ಬೇಸಾಯ ತಜ್ಞ ಜಿ. ಬಿ. ವಿಶ್ವನಾಥ ತಿಳಿಸಿದರು.
ಇದೇ ಸಂದರ್ಭದಲ್ಲಿ ಭಾರತೀಯ ಕೃಷಿ ಅನುಸಂಧಾನ ಪರಿಷತ್ನ ಹಿರಿಯ ವಿಜ್ಞಾನಿಗಳಾದ ಡಾ. ಅತುಲ್ ಕೊಲ್ಟೆ ಅವರು ರೈತರು ಮಾಡಿದ ಅವಿಷ್ಕಾರಿ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ದಾಖಲಿಸಿಕೊಂಡರು. ಇಫ್ಕೋ ರಸಗೊಬ್ಬರ ಸಂಸ್ಥೆಯ ಪದಾಧಿಕಾರಿಗಳಾದ ನವೀನ ಪಾಟೀಲ ಇವರು ನ್ಯಾನೋ, ಡಿಎಪಿ ಹಾಗೂ ನಾನ್ಯೋ ಯೂರಿಯಾ ಬಳಕೆ ಬಗ್ಗೆ ಪಾತ್ಯಕ್ಷಿಕೆ ತೋರಿಸಿದರು. ಕೃಷಿ ಇಲಾಖೆಯ ಅಧಿಕಾರಿಗಳು, ಕೃಷಿ ಸಂಜೀವಿನಿ ಯೋಜನೆಯ ತಾಂತ್ರಿಕ ಸಹಾಯಕರು ಮತ್ತು ಕೃಷಿ ಸಖಿಯರು ಉಪಸ್ಥಿತರಿದ್ದು ಮಾಹಿತಿ ನೀಡಿದರು. ಒಟ್ಟು ೨೨೩ ರೈತರು, ರೈತ ಮಹಿಳೆಯರು, ಕೃಷಿ ಯುವಕರು ಈ ಕಾರ್ಯಕ್ರಮದ ಲಾಭ ಪಡೆದುಕೊಂಡರು.
ಮೇಲಿನ ಮಾಹಿತಿಯನ್ನು ತಮ್ಮ ಘನ ಪತ್ರಿಕೆಯಲ್ಲಿ ಸುದ್ದಿಯಾಗಿ ಉಚಿತವಾಗಿ ರೈತರ ಉಪಯೋಗಕ್ಕಾಗಿ ಪ್ರಕಟಿಸುವಂತೆ ಕೋರಿದೆ.
ಮೆಣಸಿನಕಾಯಿ ಬೆಳೆಯಲ್ಲಿ ಮುಟುರು ರೋಗ ನಿರ್ವಹಿಸಿ: ಡಾ. ಎಸ್. ಎಸ್. ಹಿರೇಮಠ
