ಶಿವಯೋಗದ ಸಾಧನೆಗೆ ಶರೀರ ಮುಖ್ಯಪಾತ್ರ : ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ

Ravi Talawar
ಶಿವಯೋಗದ ಸಾಧನೆಗೆ ಶರೀರ ಮುಖ್ಯಪಾತ್ರ : ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ
WhatsApp Group Join Now
Telegram Group Join Now
ಗದಗ:  ಶಿವಯೋಗದ ಸಾಧನೆಗೆ ಶರೀರ ಮುಖ್ಯಪಾತ್ರ ವಹಿಸಿತ್ತದೆ. ಶರೀರವನ್ನು ಉಳಿಸಿಕೊಂಡು ಕಾಪಾಡಿಕೊಂಡು ಹೋದಾಗ ಮಾತ್ರ ಶಿವಯೋಗ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಕಾಶೀ ಪೀಠದ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯರು ಹೇಳಿದರು.
ನಗರದ ಎಪಿಎಂಸಿ ಆವರಣದಲ್ಲಿರುವ ಕೆ.ಎಚ್. ಪಾಟೀಲ ಸಭಾಭವನದಲ್ಲಿ ಜಗದ್ಗುರು ಪಂಚಾಚಾರ್ಯ ಸೇವಾ ಸಂಘ, ಜಗದ್ಗುರು ವಿಶ್ವಾರಾಧ್ಯ ಜನಕಲ್ಯಾಣ ಪ್ರತಿಷ್ಠಾನ ಹಾಗೂ ಜಗದ್ಗುರು ವಿಶ್ವಾರಾಧ್ಯ ಎಜ್ಯೂಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಆಷಾಢ ಮಾಸದ ಅಂಗವಾಗಿ ಬುಧವಾರ ಜರುಗಿದ ‘ಸಿದ್ಧಾಂತ ಶಿಖಾಮಣಿ’ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಮಾನವ ಶರೀರದ ಮಹತ್ವ ಅರಿತುಕೊಳ್ಳಬೇಕಿದೆ. ಮಾನವ ಜನ್ಮ ತಾಳಿ ಏನು ಮಾಡಬೇಕು ಎಂಬುದನ್ನು ನಾವು ಮರೆತಿದ್ದೇವೆ. ಆದ್ದರಿಂದ ನಮ್ಮ ಸಂಸ್ಕೃತಿ, ವೀರಶೈವ ಪರಂಪರೆಯ ಸಂಪ್ರದಾಯವನ್ನು ಅರಿತುಕೊಂಡು ಶಿವಯೋಗ ಸಾಧನೆ ಮಾಡಬೇಕು ಎಂದು ಹೇಳಿದರು.
ಯುವಕರು-ಯುವತಿಯರು ಮನೆಯಲ್ಲಿ ಕುಳಿತಿದ್ದಾರೆ. ಜೇಷ್ಠರು ಪೂಜೆಗೆ ಆಗಮಿಸುತ್ತಿದ್ದಾರೆ. ಇಂದಿನ ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಮಕ್ಕಳಿಗೆ ದೇಶಾಭಿಮಾನ, ಧರ್ಮಾಭಿಮಾನ ಹಾಗೂ ಮಾನವೀಯತೆಯನ್ನು ಬೆಳೆಸಬೇಕಿದೆ ಎಂದು ಹೇಳಿದರು.
ನರೇಗಲ್ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಿದ್ಧಾಂತ ಶಿಖಾಮಣಿ ಗ್ರಂಥವು ಶಿವಯೋಗದ ಮಹತ್ವನ್ನು ತಿಳಿಸಿಕೊಂಡು ಬರುತ್ತಿದೆ. ನಾವು ಮಾಡುವ ಇಷ್ಟಲಿಂಗ ಪೂಜೆಯನ್ನು ಶಿವಯೋಗ ಎಂತಲೂ ಕರೆಯುತ್ತಾರೆ.
ಅಂಗಗುಣಗಳನ್ನು ಕಳೆದುಕೊಂಡು ಲಿಂಗಗುಣಗಳನ್ನು ಅಳವಡಿಸಿಕೊಳ್ಳುವವನು ಯೋಗಿಯಾಗುತ್ತಾನೆ. ಲಿಂಗಗುಣಗಳಾದ ಅಹಿಂಸೆ, ದಾನ, ಕ್ಷಮೆಯನ್ನು ಅಳವಡಿಸಿಕೊಂಡಾಗ ಜೀವಾತ್ಮ ಪರಮಾತ್ಮನಾಗುತ್ತಾನೆ ಎಂದು ಹೇಳಿದರು.
ಶರೀರಕ್ಕೆ ತನು, ದೇಹ, ಕಾಯ, ಭೋಗಾಯತನ, ಅಂಗ ಎಂಬ ಹೆಸರುಗಳಿವೆ. ಶರೀರಕ್ಕೆ ಮೊದಲನೇ ಹೆಸರು ತನು. ತನು ಎಂದರೆ ಚಿಕ್ಕದು, ಸಣ್ಣದು ಎಂಬ ಭಾವ ಬರುತ್ತದೆ. ನಿರಾಕಾರನಾಗಿರುವ ಪರಮಾತ್ಮ ಜೀವಾತ್ಮನಾಗಿ ಶರೀರ ಪ್ರವೇಶ ಮಾಡುವುದರಿಂದ ತನು ಎಂದು ಕರೆದರು.
ದೇಹ ಎಂದರೆ ದಹಿಸಲ್ಪಡುವುದರಿಂದ ಶರೀರವನ್ನು ದೇಹ ಎಂದು ಕರೆದರು. ಕಾಯ ಎಂದರೆ ಕಷ್ಟಗಳನ್ನು ಸಹಿಸಿಕೊಂಡು ಬರುವುದರಿಂದ ಕಾಯ. ಅಂಗ ಎಂದರೆ ವೀರೇಶ್ವರ ಧರ್ಮದ ಪಾರಮಾರ್ಥಿಕ ಭಾಷೆ ಪರಮಾತ್ಮನನ್ನು ಕೂಡುವ ಸ್ಥಳವಾಗಿದ್ದರಿಂದ ಶರೀರಕ್ಕೆ ಅಂಗ ಎಂದು ಕರೆಯಲಾಗಿದೆ. ಪರಮಾತ್ಮ ಕೊಟ್ಟಿರುವ ಈ ಶರೀರವನ್ನು ಶಿವಯೋಗ ಸಾಧನೆಗೆ ಬಳಸಿಕೊಳ್ಳಬೇಕು ಎಂದರು.
ಶಹಪೂರದ ಸೂಗೂರೇಶ್ವರ ಶಿವಾಚಾರ್ಯ ಸ್ವಾಮೀಜಿ, ನಾಗನಸೂರಿನ ಶ್ರೀಕಂಠ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಸಂಘದ ಅಧ್ಯಕ್ಷ ಮಂಜುನಾಥ ಬೇಲೇರಿ, ಕಾರ್ಯಾಧ್ಯಕ್ಷ ಸಿದ್ದಲಿಂಗಪ್ಪ ಚಳಗೇರಿ, ಉಮಾಪತಿ ಭೂಸನೂರಮಠ, ಎಸ್.ಎಸ್.  ಮೇಟಿ, ವೀರಭದ್ರಯ್ಯ ಧನ್ನೂರಹಿರೇಮಠ, ಆರ್.ಕೆ. ಮಠ, ಡಾ. ಶೇಖರ ಸಜ್ಜನರ ಸೇರಿ ಹಲವರು ಇದ್ದರು.
ಅಕ್ಷತಾ ಹಿರೇಮಠ ಪ್ರಾರ್ಥಿಸಿದರು. ವೀರೇಶ ಕೂಗು ಸ್ವಾಗತಿಸಿದರು. ಜಗದ್ಗುರು ಪಂಚಾಚಾರ್ಯ ವೇದ ಆಗಮ ಸಂಸ್ಕೃತ ಪಾಠಶಾಲೆಯ ಮುಖ್ಯಶಿಕ್ಷಕ ಗುರುಶಿದ್ದಯ್ಯ ಹಿರೇಮಠ ನಿರೂಪಿಸಿದರು.
WhatsApp Group Join Now
Telegram Group Join Now
Share This Article