ಜನಪದವನ್ನು ಜೀವಂತಗೊಳಿಸಿದವರು ಡಾ.ಜಗಜಂಪಿ: ಮಲ್ಲಯ್ಯ ಸ್ವಾಮೀಜಿ

Ravi Talawar
ಜನಪದವನ್ನು ಜೀವಂತಗೊಳಿಸಿದವರು ಡಾ.ಜಗಜಂಪಿ: ಮಲ್ಲಯ್ಯ ಸ್ವಾಮೀಜಿ
WhatsApp Group Join Now
Telegram Group Join Now

ಕಾರಂಜಿಮಠದಲ್ಲಿ ಡಾ.ಬಸವರಾಜ ಜಗಜಂಪಿ ಅಭಿನಂದನ ಸಮಾರಂಭ

ಬೆಳಗಾವಿ ೯: ಕನ್ನಡ ಜನಪದ ಸಾಹಿತ್ಯವನ್ನು, ರಂಗ ಸಾಹಿತ್ಯವನ್ನು ಪೋಷಿಸಿ ಬೆಳೆಸಿದ ಡಾ.ಬಸವರಾಜ ಜಗಜಂಪಿಯವರು. ತಮ್ಮ ಸುಂದರವಾದ ಮಾತುಗಳಿಂದ ಜನಪದ ಸಿರಿಯನ್ನು ಜನತೆಗೆ ಮುಟ್ಟಿಸುವ ಗುರುತರವಾದ ಕೆಲಸವನ್ನು ನಾಡಿನುದ್ದಗಲಕ್ಕೂ ಅವಿರತವಾಗಿ ಮಾಡಿದ್ದು ಅವರ ದಾಖಲಾರ್ಹವಾದ ಸೇವೆಯಾಗಿದೆ ಎಂದು ಘೋಡಗೇರಿ ಶಿವಾನಂದಮಠದ ಪೂಜ್ಯ ಮಲ್ಲಯ್ಯ ಸ್ವಾಮಿಗಳು ನುಡಿದರು.
ಇಲ್ಲಿನ ಶಿವಬಸವ ನಗರದ ಶ್ರೀ ಕಾರಂಜಿಮಠದಲ್ಲಿ, ಜೂ. ೦೯ ಸೋಮವಾರದಂದು ಸಂಜೆ ಜರುಗಿದ ೨೮೭ನೆಯ ಮಾಸಿಕ ಶಿವಾನುಭವ ಮತ್ತು ಡಾ. ಬಸವರಾಜ ಜಗಜಂಪಿ ಅವರ ಅಭಿನಂದನಾ ಸಮಾರಂಭ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಪೂಜ್ಯ ಸಿದ್ಧೇಶ್ವರ ಶ್ರೀಗಳ ಪರಮಾಪ್ತ ಭಕ್ತರಾಗಿದ್ದ ಜಗಜಂಪಿಯವರ ಸಿರಿನುಡಿಯಿಂದ ಅಪ್ಪಾಜಿಯರು ಸದಾ ತಮ್ಮ ಪ್ರವಚನದಲ್ಲಿ ಒಂದು ದಿನ ಜಗಜಂಪಿಯವರಿAದ ಜನಪದ ಉಪನ್ಯಾಸಕ್ಕೆ ಮೀಸಲಾಗಿಟ್ಟಿದ್ದರೆಂದರೆ ಅವರ ಮೇಲಿನ ಪ್ರೀತಿಯಿಂದ. ಜನಪದ ಸಾಹಿತ್ಯ ರಸ ಕ್ಷಣಗಳನ್ನು ಅತ್ಯಂತ ಮಧುರವಾಗಿ ಹಾಡಿನ ಮೂಲಕ ಡಾ.ಜಗಜಂಪಿಯವರು ಸಮಾಜಕ್ಕೆ ನೀಡುವ ಕೆಲಸ ಮಾಡಿದರು. ಒಬ್ಬ ಗುಣಗ್ರಾಹಿ ಪ್ರಾಧ್ಯಾಪಕರಾಗಿ ಕನ್ನಡ ಭಾಷೆ ಸಾಹಿತ್ಯವನ್ನು ಗಡಿನಾಡಿನಲ್ಲಿ ಬೆಳೆಸಿದರು. ಅವರ ಕೊಡುಗೆ ಸಮಾಜಕ್ಕೆ ಅನನ್ಯವಾದುದು, ಅನುಪಮವಾದುದು ಅವರು ಶತಾಯುಷಿಗಳಾಗಲೆಂದು ಶುಭ ಹಾರೈಸಿದರು.
ಆಶೀರ್ವಚನ ನೀಡಿದ ಕಾರಂಜಿಮಠದ ಗುರುಸಿದ್ಧ ಮಹಾಸ್ವಾಮೀಜಿ ಡಾ.ಜಗಜಂಪಿಯವರ ವ್ಯಕ್ತಿತ್ವ ಬಹುದೊಡ್ಡದು. ಅವರು ವಿನಯ ಸಂಪನ್ನರು, ಯಾರ ಹೃದಯವನ್ನು ನೋಯಿಸಿದವರು. ನಮ್ಮ ಶ್ರೀಮಠದ ಅನೇಕ ಕಾರ್ಯಕ್ರಮಗಳಲ್ಲಿ ಭಕ್ತಿಯಿಂದ ಸೇವೆ ಸಲ್ಲಿಸಿದವರು. ಅವರ ಅಭಿನಂದನ ಸಮಾರಂಭವನ್ನು ಶ್ರೀಮಠದಲ್ಲಿ ನೆರವೇರಿಸಬೇಕೆಂಬುದು ನಮ್ಮ ಸಂಕಲ್ಪವಾಗಿತ್ತು. ಇಂಥ ಮೇರುವ್ಯಕ್ತಿತ್ವ ಸಾಹಿತಿ ಚಿಂತಕ ನರ‍್ಕಾಲ ಬದುಕಿ ಬಾಳಲಿ ಎಂದು ಶುಭಕೋರಿದರು.
ಅಭಿನಂದನ ನುಡಿಗಳನ್ನಾಡಿದ ಗ್ರಂಥ ಪ್ರಧಾನ ಸಂಪಾದಕರಾದ ಡಾ.ರಾಮಕೃಷ್ಣ ಮರಾಠೆಯವರು ಮಾತನಾಡಿ, ಸೌಜನ್ಯಶೀಲ ಬಹುಮುಖಿ ವ್ಯಕ್ತಿತ್ವದ ಡಾ.ಜಗಜಂಪಿಯವರು ಸಾಹಿತ್ಯ ಹಲವಾರು ಪ್ರಕಾರದಲ್ಲಿ ಕೆಲಸವನ್ನು ಮಾಡಿದರು. ತಮ್ಮ ಕ್ರಿಯಾಶೀಲತೆಯಿಂದ ಹಲವಾರು ಸಂಘಸAಸ್ಥೆಗಳನ್ನು ಸಮರ್ಥವಾಗಿ ಮಾರ್ಗದರ್ಶಿಸಿ ಮುನ್ನಡೆಸಿದರು. ಅವರ ಸಂಘಟನಾಶಕ್ತಿ ಅಪಾರವಾಗಿದೆ. ಲಿಂಗರಾಜ ಕಾಲೇಜಿನ ಪ್ರಾಧ್ಯಾಪಕರಾಗಿ, ಪ್ರಾಚಾರ್ಯರಾಗಿ ಕೆಎಲ್‌ಇ ಸಂಸ್ಥೆಯ ಸಾಂಸ್ಕೃತಿಕ ರಾಯಭಾರಿ ಎನಿಸಿದರು. ಮಾತ್ರವಲ್ಲದೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ರಚನಾತ್ಮಕವಾದ ಕೆಲಸಗಳನ್ನು ಮಾಡಿ ಸೈಎನಿಸಿಕೊಂಡರು. ಅವರ ಶಿಸ್ತು, ಬದ್ಧತೆ, ಕಾರ್ಯತತ್ಪರೆ ಅಗಾಧವಾದುದು. ಅವರು ನಿಜವಾದ ಸಾಹಿತ್ಯದ ಸಮಾಜದ ಶಿಕ್ಷಣದ ಪರಿಣಿತಮತಿಗಳು. ಅದಕ್ಕೆ ಅವರ ಅಭಿನಂದನ ಗ್ರಂಥಕ್ಕೆ ಅದೇ ಹೆಸರನ್ನು ನೀಡಲಾಗಿದೆ ಎಂದು ಹೇಳಿದರು.
ಡಾ. ಬಸವರಾಜ ಜಗಜಂಪಿ ಮಾತನಾಡಿ, ನನ್ನ ಬೆಳವಣಿಗೆಯಲ್ಲಿ ಸಿದ್ದೇಶ್ವರ ಅಪ್ಪಾಜಿಯವರ ಪಾತ್ರ ಎಷ್ಟೋ ಅಷ್ಟೇ ಮಲ್ಲಯ್ಯ ಅಜ್ಜಯ್ಯನವರದ್ದು, ಕಾರಂಜಿ ಅಜ್ಜನವರದ್ದಾಗಿದೆ. ಕಾರಂಜಿಶ್ರೀಗಳು ಸಮಾಜದಲ್ಲಿ ಯಾರೇ ಏನೇ ಸಾಧನೆಗೈದರೂ, ತೊಂದರೆ ಹಾಗೂ ನೋವಲ್ಲಿದ್ದರೂ ಮೊದಲಿಗೆ ಕೈ ಹಿಡಿದವರು ಕಾರಂಜಿಮಠದ ಅಪ್ಪನವರು. ಯಾವುದನ್ನ ನಾವೂ ಬಯಸದೆ ಸಿಗುತ್ತದೋ ಅದು ನಮಗೆ ಸಂತೋಷ ಕೊಡುತ್ತದೆ. ಅಂತಹ ಸಂತಸ ಇಂದು ಆಗಿದೆ. ನನ್ನ ಒಂದು ಧ್ಯೇಯ ವಾಕ್ಯ ಅಂದರೆ ಕೇವಲ ಕೊಟ್ಟ ಕೆಲಸವನ್ನ ಅಚ್ಚುಕಟ್ಟಾಗಿ ಮಾಡುವುದು ಅದನ್ನ ನಾನು ಮಾಡಿದ್ದೇನೆ ಅಷ್ಟೇ. ಈ ಪರಿಣತಮತಿ ಗ್ರಂಥ ಸಹ ಕವಿರಾಜ ಮಾರ್ಗದಲ್ಲಿ ಬರುವ ಜನಪದರಿಗೆ ಸಮರ್ಪಣೆ. ಏಕೆಂದರೆ ನಮ್ಮ ಕನ್ನಡ ಸಾಹಿತ್ಯಕ್ಕೆ ಜನಪದರ ಕೊಡುಗೆ ಅಪಾರ ಇದೆ ಅದನ್ನ ನಾವು ನೆನೆಯಲೇಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪೂಜ್ಯರು ಡಾ.ಬಸವರಾಜ ಜಗಜಂಪಿ ಹಾಗೂ ಶ್ರೀಮತಿ ಸುಷ್ಮಾ ಜಗಜಂಪಿ ದಂಪತಿಗಳನ್ನು ಸತ್ಕರಿಸಿದರು. ಅಭಿನಂದನ ಗ್ರಂಥ ಸಂಪಾದಕರಾದ ಡಾ. ಮಹೇಶ್ ಗುರನಗೌಡ, ಪ್ರಕಾಶ ಗಿರಿಮಲ್ಲನವರ ಅವರನ್ನು ಆಶೀರ್ವದಿಸಿದರು. ಪ್ರೊ.ಎ.ಕೆ.ಪಾಟೀಲ ನಿರೂಪಿಸಿದರು, ಪ್ರೊ ಶ್ರೀಕಾಂತ ಶಾನವಾಡ ಸ್ವಾಗತಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನ್ಯಾಯವಾದಿ ವಿ.ಕೆ.ಪಾಟೀಲ ವಂದಿಸಿದರು. ಮಹಾಸಭೆಯ ಅಧ್ಯಕ್ಷೆ ಶ್ರೀಮತಿ ರತ್ನಪ್ರಭಾ ಬೆಲ್ಲದ, ಡಾ.ಸರಜೂ ಕಾಟ್ಕರ, ಡಾ.ಎಫ್.ವ್ಹಿ.ಮಾನ್ವಿ, ಏಣಗಿ ಸುಭಾಷ, ಶಿರೀಷ ಜೋಶಿ, ಮಲ್ಲಿಕಾರ್ಜುನಸ್ವಾಮಿ ಹಿರೇಮಠ ಮೊದಲಾದವರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article