ಬೆಳಗಾವಿ: ವಿದ್ಯಾರ್ಥಿಗಳು ಓದಿನ ಜತೆಗೆ ಸಂಸ್ಕಾರ ಬೆಳೆಸಿಕೊಳ್ಳಬೇಕು. ಮತ್ತು ಬುದ್ಧಿವಂತಿಕೆ ಜತೆಗೆ ನಿರಂತರ ಪರಿಶ್ರಮ ಹಾಕಿದರೆ ಉನ್ನತ ಮಟ್ಟಕ್ಕೆ ಬೆಳೆಯಬಹುದು ಎಂದು ನೇಸರಗಿಯ ಸರಕಾರಿ ಪ್ರಥಮ ಕಾಲೇಜಿನ ಪ್ರಾಚಾರ್ಯ, ಹಿರಿಯ ಸಾಹಿತಿ ಡಾ. ಫಕೀರನಾಯ್ಕ ಗಡ್ಡಿಗೌಡರ ಅಭಿಪ್ರಾಯಪಟ್ಟರು.
ನಗರದ ನಾಗನೂರು ಸ್ವಾಮಿಜೀಯವರ ಶ್ರೀ ಸಿದ್ಧರಾಮೇಶ್ವರ ಕಾಲೇಜಿನಲ್ಲಿ ಆಯೋಜಿಸಲಾದ ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಮತ್ತು ಪಠ್ಯೇತರ ಚಟುವಟಿಕೆಗಳ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗುರು-ಹಿರಿಯರನ್ನು ಗೌರವಿಸುವ ಮನೋಭಾವ ಹೊಂದಬೇಕು. ಸಂಸ್ಕಾರದೊಂದಿಗೆ ನಿರಂತರ ಶ್ರಮಿಸಿದ್ದಾಗ ಮಾತ್ರ ಯಶಸ್ಸು ಕಾಣಬಹುದು. ನಿಮ್ಮ ಶ್ರಮವೇ ನಿಮ್ಮನ್ನು ಸಮಾಜಕ್ಕೆ ಉನ್ನತ ಮಟ್ಟಕ್ಕೆ ಬೆಳಸುತ್ತದೆ ಎಂದರು.
ಇಂದಿನ ವಿದ್ಯಾರ್ಥಿಗಳು, ಮೋಬೈಲ್ ಗೆ ಅಂಟಿಕೊಂಡು ಸಮಯ ಹರಣ ಮಾಡುತ್ತಿದ್ದಾರೆ. ಇದರಿಂದ ಎಚ್ಚರ ವಹಿಸಿ, ಮೋಬೈಲನಲ್ಲಿ ನಮ್ಮ ವ್ಯಕ್ತಿತ್ವ ಬೆಳವಣಿಗೆ ಬೇಕಾದ ಉತ್ತಮ ವಿಷಯಗಳಿವೆ. ಅದು ಒಂದು ವಿಶ್ವ ಗ್ರಂಥಾಲಯವಿದ್ದಂತೆ, ಈ ಹಿನ್ನೆಲೆಯಲ್ಲಿ ಅದನ್ನು ಬಳಸಿಕೊಂಡು ಕೇವಲ ಪರ್ಸೆಂಟೇಜಗಾಗಿ ಓದಿದೆ ಎಂದು ತಿಳಿ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಕಾರ್ಯದರ್ಶಿ ಎಸ್. ಪಿ. ಹಿರೇಮಠ ಅವರು ಮಾತನಾಡಿ, ವಿದ್ಯಾರ್ಥಿಗಳು ತಂದೆ-ತಾಯಿ, ಗುರು-ಹಿರಿಯರು ಹೇಳಿದ ಮಾತುಗಳನ್ನು ಕೇಳಿ ಶಾಲಾ-ಕಾಲೇಜಿನ ಜ್ಞಾನದೊಂದಿಗೆ ಬದುಕುವ ಸಾಮಾನ್ಯ ಜ್ಞಾನವನ್ನು ಬೆಳೆಸಿಕೊಳ್ಳಬೇಕೆಂದರು.
ಕಾಲೇಜಿನ ನೂತನ ಪ್ರಾಚಾರ್ಯ ಪ್ರಭು ಶಿವನಾಯ್ಕರ ಅವರ ಉಪಸ್ಥಿತಿಯಲ್ಲಿ ನಡೆದ ಈ ಸಮಾರಂಭದಲ್ಲಿ ಕ್ರೀಡಾ ಲೋಕದಲ್ಲಿ ಅದ್ವಿತೀಯ ಸೇವೆ ಸಲ್ಲಿಸಿದ, ವಿಶ್ರಾಂತ ದೈಹಿಕ ಶಿಕ್ಷಣದ ನಿರ್ದೇ ಶಕರಾದ ಪ್ರೊ. ಜಿ. ಜಿನ್. ಪಾಟೀಲ ದಂಪತಿಗಳನ್ನು, ಈ ಕಾಲೇಜಿನ ನಿವೃತ್ತ ಪ್ರಥಮ ದರ್ಜೆ ಸಹಾಯಕರಾದ ಎಮ್. ಆರ್. ಮಲಾಮರಡಿ ದಂಪತಿಗಳನ್ನು ಹಾಗೂ ಕ್ರೀಡಾ ಮತ್ತು ಪರೀಕ್ಷಾ ಬ್ಯಾಂಕ್ ವಿಜೇತ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾಲೇಜಿನ ವಿದ್ಯಾರ್ಥಿ ಕೃಷ್ಣಾ ಆವೋಜಿ, ಕುಮಾರಿ. ಅಕ್ಷತಾ ಜಪ್ತಿಸನದಿ ಹಾಜರಿದ್ದರು. ಉಪನ್ಯಾಸಕ ಎ.ಕೆ. ಪಾಟೀಲ ಅವರು ಸ್ವಾಗತ ಮತ್ತು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರೊ. ಅಶ್ವಿನಿ ಪಡೆಣ್ಣವರ, ಪ್ರೊ. ಶಕುಂತಲಾ ಪಾಟೀಲ ನಿರೂಪಿಸಿದರು. ಪ್ರೊ. ಪರಮೇಶಿ ದೊಡಮನಿ ವಂದಿಸಿದರು.