ಆಧುನಿಕತೆಗೆ ತಕ್ಕಂತೆ ಹಬ್ಬಗಳನ್ನು ಆಚರಿಸಿ: ಡಾ. ಅಲ್ಲಮಪ್ರಭು ಸ್ವಾಮೀಜಿ

Ravi Talawar
ಆಧುನಿಕತೆಗೆ ತಕ್ಕಂತೆ ಹಬ್ಬಗಳನ್ನು ಆಚರಿಸಿ: ಡಾ. ಅಲ್ಲಮಪ್ರಭು ಸ್ವಾಮೀಜಿ
WhatsApp Group Join Now
Telegram Group Join Now
ಬೆಳಗಾವಿ: ಹಬ್ಬಗಳು ಮೂಢ‌ನಂಬಿಕೆಯ ತಾಣವಾಗಬಾರದು. ಮೂಲ ನಂಬಿಕೆಗಳಾಗಿಯೇ ಅವು ಉಳಿಯಬೇಕು. ಅದೇ ರೀತಿ ಅಂಧಾನುಕರಣೆ ಮಾಡದೇ ಹಬ್ಬದ ಉದ್ದೇಶ ತಿಳಿಯಬೇಕು. ವೈಜ್ಞಾನಿಕ ತಳಹದಿಯ ಮೇಲೆ, ಆಧುನಿಕತೆಗೆ ತಕ್ಕಂತೆ ಪ್ರಸ್ತುತ ಹಬ್ಬಗಳನ್ನು ಆಚರಿಸುವ ಅವಶ್ಯಕತೆ ಇದೆ ಎಂದು ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ ಅಭಿಪ್ರಾಯಪಟ್ಟರು.
ನೆಹರು ನಗರದ ಡಾ. ಬಿ. ಆರ್.‌ ಅಂಬೇಡ್ಕರ್‌ ಸರ್ಕಾರಿ ಮೆಟ್ರಿಕ್‌ ಪೂರ್ವ ಬಾಲಕರ ವಸತಿ ನಿಲಯದ ಸಭಾಂಗಣದಲ್ಲಿ ವಿವಿಧ ಬಸವಪರ ಹಾಗೂ ಜನಪರ ಸಂಘಟನೆಗಳ ಆಶ್ರಯದಲ್ಲಿ ನಾಗರ ಪಂಚಮಿ ದಿನ ಹಮ್ಮಿಕೊಂಡಿದ್ದ ಬಸವ ಪಂಚಮಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಮೂಢನಂಬಿಕೆ ಎಂದು ಗೊತ್ತಾದ ಮೇಲೆ ಅದೆಷ್ಟೋ ಹಳೆಯ ಆಚರಣೆಗಳನ್ನು ನಾವು ಬದಲಾಯಿಸಿಕೊಂಡಿದ್ದೇವೆ. ಹಾಗಾಗಿ, ಪಂಚಮಿ ನಿಮಿತ್ತ ಹಾಲನ್ನು ಕಲ್ಲಿಗೆ ಎರೆದು ವ್ಯರ್ಥ ಮಾಡುವ ಬದಲು, ಹಸಿದ ಮಕ್ಕಳಿಗೆ ನೀಡುವುದು ಉತ್ತಮ ಕಾರ್ಯ‌ ಎಂದು ಸಲಹೆ ನೀಡಿದರು.
ರಾಜ್ಯ ಯುವ ಕಾಂಗ್ರೆಸ್‌ ಘಟಕದ ಪ್ರಧಾನ ಕಾರ್ಯದರ್ಶಿ ರಾಹುಲ್‌ ಜಾರಕಿಹೊಳಿ ಮಾತನಾಡಿ, ನಾಗರ ಪಂಚಮಿ ಹೆಸರಿನಲ್ಲಿ ಹಾಲನ್ನು ಅಪವ್ಯಯ ಮಾಡದೆ ಅದನ್ನು ಮಕ್ಕಳಿಗೆ ನೀಡುವ ಹಬ್ಬವನ್ನಾಗಿಸಬೇಕು. ಪೌಷ್ಟಿಕಾಂಶಯುಕ್ತ ಹಾಲನ್ನು ಕಲ್ಲ ನಾಗರಕ್ಕೆ, ಹುತ್ತಕ್ಕೆ ಎಂದು ಎರೆಯದೆ ಬಡ ಮಕ್ಕಳಿಗೆ, ರೋಗಿಗಳಿಗೆ, ಅನಾಥರಿಗೆ ನೀಡಿ ಎಂದು ಸಲಹೆ ನೀಡಿದ ಅವರು, ಮಾನವ ಬಂಧುತ್ವ ವೇದಿಕೆ ಮೂಲಕ ರಾಜ್ಯದ ಎಲ್ಲೆಡೆ ಬಸವ ಪಂಚಮಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಬುದ್ಧ ಹಚ್ಚಿದ್ದು ಶಾಂತಿಯ ದೀಪ, ಬಸವಣ್ಣ ಹಚ್ಚಿದ್ದು ಕ್ರಾಂತಿಯ ದೀಪ, ಅಂಬೇಡ್ಕರ್ ಹಚ್ಚಿದ್ದು ಜ್ಞಾನದ ದೀಪ. ಈ ದೀಪಗಳ ಬೆಳಕಿನಲ್ಲಿ ನಾವೆಲ್ಲ ನಡೆದು ಸಮ ಸಮಾಜ ಕಟ್ಟೋಣ. ಬುದ್ಧನ ಉಪದೇಶ, ಬಸವಣ್ಣನವರ ಸಂದೇಶ, ಅಂಬೇಡ್ಕರ್ ಅವರ ಕಾನೂನು ಮೈಗೂಡಿಸಿಕೊಳ್ಳುವ ಮೂಲಕ ದೇಶದ ಅಭಿವೃದ್ಧಿಗೆ ಆದ್ಯತೆ ನಿಡೋಣ ಎಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ
ಬಸವರಾಜ ಚನ್ನಯನ್ನವರ ಅವರು ಮಾತನಾಡಿ,ಜಾಗೃತಿಯೊಂದಿಗೆ ಸಾಮಾಜಿಕ ಕಳಕಳಿ ಹೊಂದಿರುವ ಈ ಬಸವ ಪಂಚಮಿ ಕಾರ್ಯಕ್ರಮವನ್ನು ಪ್ರತಿವರ್ಷ ಈ‌ ಮಕ್ಕಳ ಸಮ್ಮುಖದಲ್ಲಿ ನೆರವೇರಿಸಬೇಕು. ಇಂತಹ ಜಾಗೃತ ಕಾರ್ಯದಿಂದ ಮಕ್ಕಳ ಮುಂದಿನ ಭವಿಷ್ಯಕ್ಕೆ ನಾಂದಿಯಾಗಲಿದೆ. ಈಗಾಗಲೇ ನೂರಾರು ಮಕ್ಕಳ ವಸತಿಯಲ್ಲಿದ್ದಾರೆ. ಸಂಘಟನೆಗಳು
ಇಲ್ಲಿನ ಮಕ್ಕಳಿಗೆ ಮಾರ್ಗದರ್ಶನ ಹಾಗೂ ಸಹಾಯ- ಸಹಕಾರ ನೀಡಿದರೆ ಅವರ ಉಜ್ವಲವಾಗಲಿದೆ ಎಂದು ಹೇಳಿದರು. ಇದೇ ವೇಳೆ ಡಾ. ಬಿ. ಆರ್.‌ ಅಂಬೇಡ್ಕರ್‌ ಸರ್ಕಾರಿ ಮೆಟ್ರಿಕ್‌ ಪೂರ್ವ ಬಾಲಕರ ವಸತಿ ನಿಲಯದ ಮಕ್ಕಳಿಗೆ ಉಚಿತ ಪ್ರಸಾದ, ಹಾಲು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ರೊಟ್ಟಿ, ಮಾನವ ಬಂಧುತ್ವ ವೇದಿಕೆ ವಿಭಾಗೀಯ ಸಂಚಾಲಕ ತೋಳಿ ಭರಮಣ್ಣ, ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ, ಕರವೇ ಮುಖಂಡ ಸುರೇಶ ಗವನ್ನವರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article