ಅಥಣಿ:ಕೃಷ್ಣಾ ನದಿ ದಂಡೆಯಲ್ಲಿರುವ ಗ್ರಾಮಸ್ಥರು ಪ್ರವಾಹದ ಕುರಿತು ಆತಂಕ ಪಡಬೇಕಾಗಿಲ್ಲ. ಮುಂಬರುವ ದಿನಗಳಲ್ಲಿ ನಿರಂತರ ಮಳೆ ಸುರಿದು ಸಂಭಾವ್ಯ ಪ್ರವಾಹ ಎದುರಾದರು ಜಿಲ್ಲಾ ಆಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ರೈತರು ನದಿಗೆ ಇಳಿವಾಗ ಮುಂಜಾಗ್ರತೆ ವಹಿಸಬೇಕೆಂದು ಬೆಳಗಾವಿ ಜಿ ಪಂ ಯೋಜನಾ ನಿರ್ದೇಶಕ ರವಿ ಬಂಗಾರಪ್ಪನವರ ಹೇಳಿದರು.
ಸಮೀಪದ ಸತ್ತಿ ಗ್ರಾಮದ ಕೃಷ್ಣಾ ನದಿ ತೀರಕ್ಕೆ ರವಿವಾರ ಭೇಟಿ ನೀಡಿ ಮಾತನಾಡಿದ ಅವರು ಮಹಾರಾಷ್ಟ್ರದಲ್ಲಿ ಮಳೆಯ ಪ್ರಮಾಣ ಇಳಿಮುಖವಾಗಿದ್ದು ಯಾವುದೇ ಪ್ರವಾಹ ಉಂಟಾಗುವುದಿಲ್ಲ. ನೀರಿನಲ್ಲಿ ಸೆಳೆತ ಇರುವುದರಿಂದ ನಡು ಗಡ್ಡೆಗಳಿಗೆ ಹೋಗಿ ರೈತರು ಮೇವು ತರುವಾಗ ಮುಂಜಾಗ್ರತೆ ವಹಿಸಬೇಕು. ದನ ಕರುಗಳು, ಚಿಕ್ಕ ಮಕ್ಕಳಳು ನದಿಗೆ ಇಳಿಯದಂತೆ ಮುನ್ನೆಚ್ಚರಿಕೆ ವಹಿಸಬೇಕು. ನದಿಯಲ್ಲಿ ಬಟ್ಟೆ ತೊಳೆಯುವಾಗ ಮಹಿಳೆಯರು ಜಾಗ್ರತರಾಗಬೇಕು. ಪ್ರತಿಯೊಬ್ಬರು ಶುದ್ಧ ನೀರನ್ನು ಕುಡಿಯಬೇಕು. ಸಾಂಕ್ರಾಮಿಕ ರೋಗಗಳು ಹರಣದಂತೆ ಕ್ರಮ ಕೈಗೊಳ್ಳಬೇಕು. ನದಿ ನೀರನ್ನು ಕುಡಿಯುವವರು ಕುದಿಸಿ ಆರಿಸಿ ಕುಡಿಯಬೇಕು. ಗ್ರಾಮ ಪಂಚಾಯತ ಸಿಬ್ಬಂದಿ ಸಂಭಾವ್ಯ ಪ್ರವಾಹ ಎದುರಿಸಲು ಸಕಲ ಸಿದ್ಧತೆ ಮಾಡಿ ಕೊಳ್ಳಬೇಕೆಂದು ಹೇಳಿದ ಅವರು ಜಿಲ್ಲಾಡಳಿತ ಹಾಗೂ ತಾಲೂಕಾ ಆಡಳಿತ ನೀಡುವ ಸೂಚನೆಗಳನ್ನು ಪ್ರತಿಯೊಬ್ಬ ಗ್ರಾಮ ಪಂಚಾಯತ ಅಧಿಕಾರಿಗಳು ಪಾಲಿಸಬೇಕೆಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಹಿರಿಯ ಮುಖಂಡ ಬಿ. ಆರ್. ಪಾಟೀಲ, ಬಸವರಾಜ ಜಗದೇವ, ಅನಿಲ ಪಾಟೀಲ, ಸುಲ್ತಾನ್ ಮೀರಾಬಾಯಿ, ಸಾಬು ಚಿನಗುಂಡಿ, ವಿವೇಕ ಮಠದ, ರಾಜು ಗಡ್ಡೆಕರ, ನಾರಾಯಣ ತಳಕೇರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ನದಿಯ ಪಕ್ಕದ ರೈತರೊಂದಿಗೆ ಮಾತನಾಡಿ ನೀರಿನ ಮೋಟರ್ ಪಂಪ್ಸೆಟ್ ಸರಿಪಡಿಸಲು ಹರಿಯುವ ನದಿಯಲ್ಲಿ ಇಳಿಯದಂತೆ ಮುನ್ನೆಚ್ಚರಿಕೆ ನೀಡಿದರು.