ಬಳ್ಳಾರಿ,ಫೆ.15: ಬಳ್ಳಾರಿಯನ್ನು ಸ್ವಚ್ಛಗೊಳಿಸುವ ಸಂಕಲ್ಪ ಕೇವಲ ಮಾತಿಗೆ ಸೀಮಿತವಾಗಬಾರದು. ಅದು ನಿತ್ಯದ ಅಭ್ಯಾಸವಾಗಬೇಕು ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಹೇಳಿದರು.
ನಗರದ ಡಾ.ರಾಜ್ ಕುಮಾರ್ ರಸ್ತೆಯ ಮುನಿಸಿಪಲ್ ಕಾಲೇಜು ಮೈದಾನದಲ್ಲಿ ಮಹಾನಗರ ಪಾಲಿಕೆಯಿಂದ 2025-26 ನೇ ಸಾಲಿಗೆ ನಮ್ಮ ಬಳ್ಳಾರಿ-ಸ್ವಚ್ಛ ಬಳ್ಳಾರಿ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಮ್ಯಾರಾಥಾನ್ಗೆ ಚಾಲನೆ ನೀಡಿ ಅವರು ಮಾತನಾಡಿದರು.

ಸಾರ್ವಜನಿಕರು ಶಿಸ್ತುಬದ್ಧ ಜೀವನಶೈಲಿ ಅಳವಡಿಸಿಕೊಂಡಾಗ ಮಾತ್ರ ಸ್ವಚ್ಛ ಭಾರತ್ ಮಿಷನ್ ಗುರಿ ತಲುಪಲು ಸಾಧ್ಯ. ಬಹಿರ್ದೆಸೆ ಮುಕ್ತ ಭಾರತದ ಜೊತೆಗೆ ಸಂಪೂರ್ಣ ಸ್ವಚ್ಛ ಭಾರತದ ಗುರಿ ತಲುಪಲು ನಾವೆಲ್ಲರೂ ಕೈಜೋಡಿಸೋಣ ಎಂದು ಕರೆ ನೀಡಿದರು.
ಮ್ಯಾರಾಥಾನ್ನಲ್ಲಿ ವೃತ್ತಿಪರ ಓಟಗಾರರು ಮಾತ್ರವಲ್ಲದೆ, ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುವುದು ಸಂತೋಷದ ವಿಷಯವಾಗಿದೆ ಎಂದರು.
ಮಹಾನಗರ ಪಾಲಿಕೆ ಮೇಯರ್ ಪಿ.ಗಾದೆಪ್ಪ ಮಾತನಾಡಿ, ನಗರದ 39 ವಾರ್ಡ್ಗಳಲ್ಲಿ ಪೂರ್ಣ ಪ್ರಮಾಣದ ಸ್ವಚ್ಛತೆ ಕಾಪಾಡಲು ಪಾಲಿಕೆಯ ಪ್ರಯತ್ನದ ಜೊತೆಗೆ ಜನರ ಸಹ ಭಾಗಿತ್ವವೂ ಮುಖ್ಯ ಎಂದರು. ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿಯೇ ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸಿ ಪಾಲಿಕೆಯ ವಾಹನಗಳಿಗೆ ನೀಡಬೇಕು. ಸಾರ್ವಜನಿಕರ ಬೆಂಬಲವಿಲ್ಲದೆ ಇಡೀ ನಗರವನ್ನು ಶುಚಿಯಾಗಿಡುವುದು ಅಸಾಧ್ಯ ಎಂದು ತಿಳಿಸಿದರು.
ಮ್ಯಾರಾಥಾನ್ ಮಾರ್ಗ:ನಮ್ಮ ಬಳ್ಳಾರಿ-ಸ್ವಚ್ಛ ಬಳ್ಳಾರಿ ಅಂಗವಾಗಿ ನಗರದ ಮುನಿಸಿಪಲ್ ಕಾಲೇಜು ಮೈದಾನದಿಂದ ಆರಂಭವಾದ ಓಟವು ಗಡಿಗಿ ಚೆನ್ನಪ್ಪ ವೃತ್ತ, ಎಚ್.ಆರ್.ಗವಿಯಪ್ಪ ವೃತ್ತ, ವಾಲ್ಮೀಕಿ ವೃತ್ತ (ಎಸ್.ಪಿ ವೃತ್ತ) ಮತ್ತು ದುರ್ಗಮ್ಮ ದೇವಸ್ಥಾನದ ಮಾರ್ಗವಾಗಿ ಸಾಗಿ ಮತ್ತೆ ಮುನಿಸಿಪಲ್ ಮೈದಾನದಲ್ಲಿ ಅಂತ್ಯಗೊಂಡಿತು.
ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನ-ಆನಂದ್, ಪ್ರಶಾಂತ್-ದ್ವಿತೀಯ, ತೃತೀಯ ಸ್ಥಾನ ಶಫಿ ಪಡೆದುಕೊಂಡರು.
ಮಹಿಳೆಯರ ವಿಭಾಗದಲ್ಲಿ ಸರಳಾದೇವಿ ಕಾಲೇಜಿನ ಸಂಧ್ಯ-ಪ್ರಥಮ, ಬಿಎಂಸಿಆರ್ಸಿ ನರ್ಸಿಂಗ್ ಕಾಲೇಜಿನ ಪವಿತ್ರ-ದ್ವಿತೀಯ, ಸಂಗೀತ ತೃತೀಯ ಸ್ಥಾನ ಪಡೆದರು.
ಯುವಕರ ವಿಭಾಗದಲ್ಲಿ ವಾರ್ಡ್ಲಾ ಕಾಲೇಜಿನ ಪ್ರಜ್ವಲ್ ಪ್ರಥಮ, ಮನು ದ್ವಿತೀಯ, ಲೋಕೇಶ್ ತೃತೀಯ ಸ್ಥಾನ ಪಡೆದರೆ, ಬಾಲಕಿಯರ ವಿಭಾಗದಲ್ಲಿ ನಂದಿ ಶಾಲೆಯ ಸಿರೀಶಾ-ಪ್ರಥಮ, ವೈಷ್ಣವಿ-ದ್ವಿತೀಯ, ತೃತೀಯ-ನಿಧಿ, ಸ್ಥಾನ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಸ್ವಚ್ಛತೆ ಅಂಗವಾಗಿ ಹಮ್ಮಿಕೊಂಡಿದ್ದ ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ, ಪ್ರಮಾಣ ಪತ್ರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್.ಮಂಜುನಾಥ್, ಜಿಲ್ಲಾ ಖಾಸಗಿ ಶಾಲೆಗಳ ಸಂಘದ ಅಧ್ಯಕ್ಷ ಮರಿಸ್ವಾಮಿ ರೆಡ್ಡಿ, ಪಾಲಿಕೆ ಸದಸ್ಯರಾದ ವಿವೇಕ್, ರಾಜೇಶ್ವರಿ ಸುಬ್ಬರಾಯುಡು, ಸುರೇಖಾ ಮಲ್ಲನಗೌಡ, ಕುಬೇರಾ, ಪರಿಸರ ಕಾರ್ಯಪಾಲಕ ಅಭಿಯಂತರ ಮುನಾಫ್ ಪಟೇಲ್ ಹಾಗೂ ಪಾಲಿಕೆ ಸಿಬ್ಬಂದಿ, ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರ


