ಕರ ವಸೂಲಿಗೆ‌‌ ಆದ್ಯತೆ ನೀಡಿ : ಜಿಲ್ಲಾಧಿಕಾರಿ  ಗೋವಿಂದ ರಡ್ಡಿ

Ravi Talawar
ಕರ ವಸೂಲಿಗೆ‌‌ ಆದ್ಯತೆ ನೀಡಿ : ಜಿಲ್ಲಾಧಿಕಾರಿ  ಗೋವಿಂದ ರಡ್ಡಿ
WhatsApp Group Join Now
Telegram Group Join Now
ಗದಗ : ನರೇಗಲ್ಲ ಪಟ್ಟಣ‌ ಪಂಚಾಯಿತಿ ಅಭಿವೃದ್ಧಿಯಿಂದ ಹಿನ್ನಡೆಯನ್ನು ಅನುಭವಿಸುತ್ತಿದ್ದು, ಅಭಿವೃದ್ಧಿಗೆ ಹೆಚ್ಚಿನ ಕರ ವಸೂಲಿಗೆ ಪ.ಪಂ ಅಧಿಕಾರಿಗಳು ಆದ್ಯತೆ ನೀಡಬೇಕಾಗಿದೆ ಎಂದು ಗದಗ ನೂತನ‌ ಜಿಲ್ಲಾಧಿಕಾರಿ ಗೋವಿಂದ ರಡ್ಡಿ ಹೇಳಿದರು.
ನರೇಗಲ್ಲ ಪಟ್ಟಣ ಪಂಚಾಯಿತಿಗೆ ಶನಿವಾರ ದಿಢೀರ್ ಭೇಟಿ ನೀಡಿ, ಪಟ್ಟಣ ಪಂಚಾಯಿತಿ ಕಟ್ಟಡ ಹಾಗೂ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲನೆ ಕೈಗೊಂಡು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಟ್ಟಣ ಪಂಚಾಯಿತಿ ಆದಾಯಕ್ಕೆ ಕತ್ತರಿಯಾಗಿರುವ ವಾಣಿಜ್ಯ ಮಳಿಗೆಗಳನ್ನು ಆದಷ್ಟು ಬೇಗನೆ ಟೆಂಡರ್ ಕರೆಯಲಾಗುತ್ತದೆ.  ಒಂದು ವೇಳೆ ಈಗಾಗಲೇ ಆ ವಾಣಿಜ್ಯ ಮಳಿಗೆಗಳಲ್ಲಿ ವ್ಯಾಪಾರ- ವಹಿವಾಟು ಮಾಡುತ್ತಿರುವ ಉದ್ಯೋಗಿಗಳಿಂದ ಬರಬೇಕಾದ ಹಳೆ ಬಾಕಿ ಮೊತ್ತವನ್ನು ಪಾವತಿಸಲು ಅವರು ಹಿಂದೆಟ್ಟು ಹಾಕಿದ್ದಲ್ಲಿ, ಆ ವ್ಯಾಪಾರಸ್ಥರ ಮನೆಗಳ ಮೇಲೆ ಭೋಜಾ ಹೇರುವಂತೆ ತಿಳಿಸಿದರು.‌
ಈಗಾಗಲೇ ಸಾರ್ವಜನಿಕರಿಂದ  ನರೇಗಲ್ಲ ಪಟ್ಟಣಕ್ಕೆ ಆಂಬುಲೇನ್ಸ್ ಸೇವೆ ಅವಶ್ಯಕತೆ ಇರುವ ಬಗ್ಗೆ ಗಮನಕ್ಕೆ ಬಂದಿದ್ದು ಕೂಡಲೇ ಸಂಬಂಧಿಸಿದ ಆರೋಗ್ಯ ಇಲಾಖೆಯ ಡಿ.ಎಚ್.ಓ ಅವರನ್ನು‌ ಸಂಪರ್ಕಿಸಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಂಬುಲೇನ್ಸ್ ಒದಗಿಸುವ ಕುರಿತು ಕ್ರಮ ಕೈಗೊಳ್ಳುತ್ತೇನೆ
 ಎಂದರು.
ಪ.ಪಂ ಸದಸ್ಯರು ಕಳೆದ ಒಂದು ವರ್ಷದಿಂದ ಪಟ್ಟಣ ಪಂಚಾಯಿತಿ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನ ತೆರವುಗೊಂಡರುವ ಕುರಿತು ಪ್ರಶ್ನಿಸಿದರು. ಸದಸ್ಯರ ಪ್ರಶ್ನೆಗೆ ಜಿಲ್ಲಾಧಿಕಾರಿ ಉತ್ತರ ನೀಡಿ, ರಾಜ್ಯದ ಬಹುತೇಕ ಪಟ್ಟಣ ಪಂಚಾಯಿತಿ , ಪುರಸಭೆಗಳಲ್ಲಿ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳು ತೆರವುಗೊಂಡಿದ್ದು, ಸರ್ಕಾರದಿಂದ ಆದಷ್ಟು ಬೇಗನೇ ಮೀಸಲಾತಿಯನ್ನು ಪ್ರಕಟಿಸುವ ಬಗ್ಗೆ ಚಿಂತನೆ ನಡೆದಿದೆ.  ಸದಸ್ಯರ ಅವಧಿಯು ಇನ್ನೂ ಎರಡೂವರೆ ವರ್ಷ ಇದೆ. ಯಾವುದೇ ಕಾರಣಕ್ಕೂ ಸದಸ್ಯರು ಆತಂಕಕ್ಕೆ ಒಳಗಾಗ ಬಾರದು ಎಂದು ಭರವಸೆ ನೀಡಿದರು.
ಈ ವೇಳೆ ಸಾರ್ವಜನಿಕರು ಪಟ್ಟಣದಲ್ಲಿ ಸ್ಥಗಿತಗೊಂಡ ಆಧಾರ ಕಾರ್ಡ್ ಕೇಂದ್ರದ ಬಗ್ಗೆ ಹೇಳಿದರು.‌ ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿ, ನರೇಗಲ್ಲ ಪಟ್ಟಣದಲ್ಲಿ ಸ್ಥಗಿತಗೊಂಡಿರುವ ಆಧಾರ ಬಗ್ಗೆ ಕೂಡಲೇ ವಿಚಾರ ಮಾಡಿ ಮರು ಸ್ಥಾಪಿಸಲು ಕ್ರಮ ಕೈಗೊಳ್ಳುತ್ರೇನೆ ಎಂದು ಭರವಸೆ ನೀಡಿದರು.
ನಾನು ನರೇಗಲ್ಲ ಪಟ್ಟಣಕ್ಕೆ ಪದೇ ಪದೇ ಭೇಟಿ ನೀಡುತ್ತಾ ಇರುತ್ತೇನೆ. ಯಾವುದಾದರೂ ಸಮಸ್ಯೆಗಳು ಇದ್ದರೆ ಸಾರ್ವಜನಿಕರು ನೇರವಾಗಿ ಬಂದು ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳಬೇಕು ಎಂದರು.
ಪ.ಪಂ ಸದಸ್ಯರಾದ ಈರಪ್ಪ ಜೋಗಿ, ಮುತ್ತಪ್ಪ ನೂಲ್ಕಿ, ಕುಮಾರಸ್ವಾಮಿ ಕೋರಧ್ಯಾನಮಠ, ಶ್ರೀಶೈಲಪ್ಪ ಬಂಡಿಹಾಳ, ನಿಂಗಪ್ಪ ಚಲವಾದಿ, ಯಲ್ಲಪ್ಪ ಮಣ್ಣೊಡ್ಡವರ, ಕಾರ್ಯನಿರ್ವಾಹಕ ಅಭಿಯಂತರ ಎಸ್.ಬಿ.‌ಮರಿಗೌಡ್ರ,  ಅಭಿಯಂತರ ಉಮೇಶ ಓಜನಳ್ಳಿ,  ಮುಖ್ಯಾಧಿಕಾರಿ ರಮೇಶ ಹೊಸಮನಿ, ಆರೋಗ್ಯ ನಿರೀಕ್ಷಕ ರಾಮಚಂದ್ರ ಕಜ್ಜಿ, ರಮೇಶ ಹಲಗಿಯವರ ಸೇರಿದಂತೆ ಸಾರ್ವಜನಿಕರು ಹಾಗೂ ಸಿಬ್ಬಂದಿಗಳು ಇದ್ದರು.
WhatsApp Group Join Now
Telegram Group Join Now
Share This Article