ಧಾರವಾಡ: ನಮ್ಮ ಕನ್ನಡದ ಗರ್ಭಕೋಶದ ಮೇಲೆ ಸರ್ವಾಧಿಕಾರದ ಭಾವುಟಗಳು ರಾರಾಜಿಸುತ್ತಿವೆ. ಇದರಿಂದ ಇಂದು ಕನ್ನಡ ಸಾಹಿತ್ಯ ಬಿಕ್ಕಿಟ್ಟಿಗೆ ಸಿಲುಕಿದೆ. ನಮ್ಮನ್ನು ನಾವು ಮಾರಿಕೊಳ್ಳುವ ಸಂದಿಗ್ಧೆ ಬಂದಿದೆ ಎಂದು ಸಾಹಿತಿ ಡಾ. ವಿನಯಾ ಒಕ್ಕುಂದ ವಿಷಾದಿಸಿದರು.
ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದ ನಾಡೋಜ ಡಾ.ಪಾಟೀಲ ಪುಟ್ಟಪ್ಪ ಭವನದಲ್ಲಿ ಎರಡು ದಿನಗಳು ನಡೆದ ಧಾರವಾಡ ಜಿಲ್ಲಾ ೧೮ನೇ ಸಾಹಿತ್ಯ ಸಮ್ಮೇಳನದಲ್ಲಿ ಸಮಾರೋಪ ಸಮಾರಂಭದಲ್ಲಿ ಮಂಗಳವಾರ ಅವರು ಸಮಾರೋಪ ಭಾಷಣವನ್ನು ಮಾಡಿದರು.
ಒಂದೊಮ್ಮೆ ಪ್ರತಿರೋಧ ಒಡ್ಡುತ್ತಿದ್ದ ಕನ್ನಡ ಸಾಹಿತ್ಯ ಇಂದು ಮೌನವಾಗಿದೆ. ವ್ಯವಸ್ಥೆ ಮತ್ತು ಜನರ ನಡುವಿನ ಮಧ್ಯವರ್ತಿಯಾಗಿ ಇರಬೇಕಾದ ಸಾಹಿತ್ಯ, ಇಂದು ಅಸತ್ಯ, ಅಪ್ರಾಮಾಣಿಕವಾಗಿ ಬದಲಾಗಿದೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ ಎಂದು ಎಚ್ಚರಿಸಿದರು.
ಇಂದು ಬರಹವು ಬಹಳಷ್ಟು ಸುಲಭವಾಗಿದೆ. ಆದರೆ, ಅದು ಅವಕಾಶವಾದಿಯಾಗಿಯೂ ಮತ್ತು ಅಪಯಕಾರಿಯಾಗಿಯೂ ಹೀಗೆ ಎರಡು ರೀತಿಯಲ್ಲಿ ಬದಲಾಗಿದೆ. ಇದರಿಂದ ಸಾಹಿತ್ಯದ ಗೌರವ ಕಡಿಮೆಯಾಗಿದೆ. ಈ ಬಗ್ಗೆ ಹಿರಿಯ ಸಾಹಿತಿಗಳು ಚಿಂತಿಸಬೇಕಿದೆ ಎಂದರು.
ಸಮ್ಮೇಳನದ ಸರ್ವಾಧ್ಯಕ್ಷೆ ಡಾ.ಹೇಮಾ ಪಟ್ಟಣಶೆಟ್ಟಿ ಮಾತನಾಡಿ, ಕನ್ನಡ ಸಾಹಿತ್ಯವು ಅಕ್ಷರಗಳ ವಿಲಾಸವಾಗಬಾರದು, ಅದು ಸಮಾಜದ ಕಟ್ಟಕಡೆಯ ಮನುಷ್ಯನ ದನಿ ಆಗಬೇಕು. ಮನುಷ್ಯತ್ವ ಎಚ್ಚರಿಸುವ ಮತ್ತು ಪ್ರೀತಿಯನ್ನು ಬಿತ್ತುವ ಕನ್ನಡಿಯಾಗಲಿ ಎಂದರು.
ಜಾಗತೀಕರಣದ ಅಬ್ಬರದಲ್ಲಿ ಕನ್ನಡ ಭಾಷೆ ಸೊರಗಬಾರದು. ತಂತ್ರಜ್ಞಾನದ ಜೊತೆಗೆ ಕನ್ನಡವನ್ನು ಬೆಸೆಯಬೇಕು. ಕನ್ನಡಿಗರು ಕೀಳರಿಮೆ ಬಿಟ್ಟು ಹೆಮ್ಮೆಯಿಂದ ಕನ್ನಡ ಮಾತನಾಡಬೇಕು. ಶಿಕ್ಷಣದಲ್ಲಿ ಕನ್ನಡಕ್ಕೆ ಪ್ರಥಮ ಸ್ಥಾನ ಸಿಗಲೇಬೇಕು ಎಂದು ಪ್ರತಿಪಾದಿಸಿದರು.
ಸಮಾಜದಲ್ಲಿ ಹೆಚ್ಚಿರುವ ಅಸಹಿಷ್ಣುತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಸಾಹಿತ್ಯ ಸಮಾಜವನ್ನು ಒಡೆಯುವ ಕೆಲಸ ಮಾಡಬಾರದು, ಬದಲಾಗಿ ಮನುಷ್ಯ ಮನಸ್ಸುಗಳನ್ನು ಜೋಡಿಸುವ ಸೇತುವೆಂ ಆಗಲಿದೆ. ಸೌಹಾರ್ದತೆ ನಮ್ಮ ಪರಂಪರೆಯ ಜೀವಾಳ ಎಂದರು.
ಧಾರವಾಡವು ಸರಸ್ವತಿಯ ಆರಾಧನಾ ಕೇಂದ್ರ. ಬೇಂದ್ರೆ, ಗೋಕಾಕ, ಕಾರ್ನಾಡರಂತಹ ದಿಗ್ಗಜರು ನಡೆದಾಡಿದ ಈ ಮಣ್ಣಿನಲ್ಲಿ ಸಮ್ಮೇಳನದ ಅಧ್ಯಕ್ಷತೆ ವಹಿಸುವುದು ನನ್ನ ಸೌಭಾಗ್ಯ. ಇಲ್ಲಿನ ಗಾಳಿಯಲ್ಲೇ ಸಾಹಿತ್ಯ ಮತ್ತು ಸಂಗೀತದ ಘಮಲಿದೆ ಎಂದು ಸ್ಮರಿಸಿದರು.
ಕರ್ನಾಟಕ ಬಾಲವಿಕಾಸ ಅಕ್ಯಾಡೆಮಿ ಅಧ್ಯಕ್ಷ ಅಡವೀಶ ಇಟಗಿ ಮಾತನಾಡಿದರು. ಸಭಾಪತಿ ಬಸವರಾಜ ಹೊರಟ್ಟಿ ಸಮ್ಮೇಳನದ ಕುರಿತು ಕಳುಹಿಸಿದ ಶುಭ ಕಾಮನೆ ಪತ್ರವನ್ನು ಡಾ.ಶಶಿಧರ ಸಾಲಿ ವಾಚಿಸಿದರು.
ಸಮಾರೋಪದಲ್ಲಿ ನಾಟಕಕಾರ ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ, ಕಸಾಪ ಜಿಲ್ಲಾಧ್ಯಕ್ಷ ಡಾ.ಲಿಂಗರಾಜ ಅಂಗಡಿ, ಡಾ.ವೀಣಾ ಬಿರಾದಾರ, ವಕೀಲರಾದ ಶರಣು ಅಂಗಡಿ, ಸವಿತಾ ಅಮರಶೆಟ್ಟಿ, ಡಾ. ಎಸ್.ಎಸ್.ದೊಡಮನಿ, ಪ್ರಮೀಳಾ ಜಕ್ಕಣ್ಣವರ, ಪದಾಧಿಕಾರಿಗಳು ಇದ್ದರು.


